ಕಾರ್ಕಳ, ಏ.22 (DaijiworldNews/MB) : ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹೆಬ್ರಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಹೆಬ್ರಿಯ ಬೊಳಂಗಲ್ ನಿವಾಸಿ ಕೃಷ್ಣಮೂರ್ತಿ (30) ಎಂದು ಗುರುತಿಸಲಾಗಿದೆ.
ಕೃಷ್ಣಮೂರ್ತಿ ಉಡುಪಿಯಲ್ಲಿನ ಜವಳಿ ಅಂಗಡಿಯಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು ವಾರಕ್ಕೊಮ್ಮೆ ತಮ್ಮ ಕುಟುಂಬವನ್ನು ಭೇಟಿ ಮಾಡುತ್ತಿದ್ದರು. ಏಪ್ರಿಲ್ 20 ರಂದು ಮನೆಗೆ ಬಂದಿದ್ದರು. ಏಪ್ರಿಲ್ 21 ರಂದು ಅವರು ಸ್ನಾನ ಮಾಡಲು ತಮ್ಮ ಮನೆಯ ಸಮೀಪವಿರುವ ಹೆಬ್ರಿ ಗ್ರಾಮದ ಜರ್ವತ್ತು ಹೊಳೆಗೆ ಹೋಗಿದ್ದರು.
ತುಂಬಾ ಹೊತ್ತಾದರು ಕೃಷ್ಣಮೂರ್ತಿ ಅವರು ವಾಪಾಸ್ ಬಾರದ ಹಿನ್ನೆಲೆ ಹೊಳೆಯತ್ತ ತೆರಳಿ ಕೃಷ್ಣಮೂರ್ತಿ ಅವರನ್ನು ಹುಡುಕಿದರು. ಆದರೆ ಸ್ವಲ್ಪ ಹೊತ್ತಾದ ಬಳಿಕ ಕೃಷ್ಣಮೂರ್ತಿ ಅವರ ಮೃತದೇಹ ಹೊಳೆಯಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.