ಮಂಗಳೂರು, ಏ.22 (DaijiworldNews/MB) : ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಜಾರಿಗೆ ತಂದ ನೂತನ ನಿಯಮಾವಳಿಯ ಬಳಿಕ ಏಪ್ರಿಲ್ 21 ರ ಬುಧವಾರ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ರವರೆಗೆ 14 ದಿನಗಳ ನೈಟ್ ಕರ್ಫ್ಯೂ ಆರಂಭವಾಗಿದ್ದು ಕೊರೊನಾ ಸೋಂಕು ಪ್ರಕರಣಗಳು ತೀವ್ರೆ ಏರಿಕೆಯಾಗುತ್ತಿರುವ ಹಿನ್ನೆಲೆ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಬುಧವಾರ ರಾತ್ರಿ ವಾಪಾಸ್ ತೆರಳುತ್ತಿರುವುದು ಕಂಡು ಬಂದಿದೆ. ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಡಿಸಿಪಿ ಹರಿರಾಮ್ ಶಂಕರ್ ಮತ್ತು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ಸಮಯ ಬದಲಾದ ಮೊದಲ ದಿನದ ಕರ್ಫ್ಯೂವಿನ ಪರಿಶೀಲನೆ ನಡೆಸಿದರು
ಅಧಿಕಾರಿಗಳು ಕೆಎಸ್ಆರ್ಟಿಸಿ, ಕೆಪಿಟಿ, ನಂತೂರು ಮುಂತಾದ ಸ್ಥಳಗಳಿಗೆ ಭೇಟಿ ನೀಡಿದರು. ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭ ಜಿಲ್ಲಾಧಿಕಾರಿ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು.
ಗದಗದಿಂದ ಜಿಲ್ಲೆಗೆ ಬಂದು ಬಜಾಲ್ನಲ್ಲಿ ವಾಸವಾಗಿದ್ದು ಓರ್ವ ವಲಸೆ ಕಾರ್ಮಿಕ ಜಿಲ್ಲಾಧಿಕಾರಿಯ ಬಳಿ ಮಾತನಾಡುತ್ತಾ, ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ನಗರಕ್ಕಿಂತ ಹೆಚ್ಚಾಗಿ ನನ್ನ ಹಳ್ಳಿಯಲ್ಲಿ ಉಳಿಯುವುದೇ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.
ವಾಪಾಸ್ ಬರುವ ಯೋಜನೆ ಇದೆಯೇ ಎಂದು ಜಿಲ್ಲಾಧಿಕಾರಿ ಮರುಪ್ರಶ್ನಿಸಿದಾಗ, ನಾನು ನನ್ನ ಹಳ್ಳಿಯಲ್ಲೇ ಜೀವನ ಸಾಗಿಸುತ್ತೇನೆ. ನಗರಕ್ಕೆ ವಾಪಾಸ್ ಬರುವುದಿಲ್ಲ ಎಂದು ಗದಗದ ವಲಸಿ ಕಾರ್ಮಿಕರು ಹೇಳಿಕೊಂಡಿದ್ದಾರೆ.
ಏತನ್ಮಧ್ಯೆ, ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮತ್ತು ಡಿಸಿ ಡಾ ಕೆ ವಿ ರಾಜೇಂದ್ರ ಅವರು ರಾತ್ರಿ 9 ಗಂಟೆಯ ಮೊದಲು ಜನರು ಮನೆಗೆ ತಲುಪುವಂತೆ ಎಚ್ಚರಿಕೆ ನೀಡಿದರು. ಹಾಗೆಯೇ ನಿರ್ದಿಷ್ಟ ಕಾರಣವಿಲ್ಲದೆ ಅಲೆದಾಡಬೇಡಿ ಎಂದು ತಿಳಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶಶಿ ಕುಮಾರ್, "ರಾತ್ರಿ 9 ರಿಂದ ರಾತ್ರಿ ಕರ್ಫ್ಯೂ ಹೇರಲಾಗಿದ್ದು, ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಜನರು ಆದೇಶಗಳನ್ನು ಪಾಲಿಸುತ್ತಿದ್ದಾರೆ. ಸರ್ಕಾರದ ಆದೇಶದ ಬಗ್ಗೆ ಮಾಹಿತಿಯೇ ಇಲ್ಲದ ಕೆಲವರು ಇರುವುದನ್ನು ನಾವು ಗಮನಿಸಬಹುದು. ರಾತ್ರಿ 9 ಗಂಟೆಯ ಮೊದಲು ಮನೆಗೆ ತಲುಪಲು ಮತ್ತು ಅಗತ್ಯವಾದ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಲು ನಾನು ಜನರಲ್ಲಿ ಒತ್ತಾಯಿಸುತ್ತೇನೆ'' ಎಂದು ಹೇಳಿದರು.