ಕುಂದಾಪುರ, ಏ.21 (DaijiworldNews/MB) : ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ಎದುರು ಹರಿಯುತ್ತಿರುವ ಅಗ್ನಿತೀರ್ಥ ಮಲೀನಗೊಂಡಿರುವುದರಿಂದ, ಕಳೆದ ಹಲವು ವರ್ಷಗಳಿಂದ ಈ ಪರಿಸರದ ಜಲಚರ, ಪ್ರಾಣಿ, ಪಕ್ಷಿಗಳು ಸಾಯುತ್ತಿದೆ. ಸಾರ್ವಜನಿಕರಿಗೆ ವಿವಿಧ ರೀತಿಯ ಚರ್ಮವಾದಿಗಳು ಸೇರಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ. ವಿಶೇಷವಾಗಿ ಕೊಲ್ಲೂರು ಕ್ಷೇತ್ರಕ್ಕೆ ಧಾರ್ಮಿಕ ಶ್ರದ್ಧೆಯೊಂದಿಗೆ ಬರುವ ಭಕ್ತರ ಆಚರಣೆಗಳ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ. ಒಂದು ವಾರದಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರರ ಮೇಲೆ ಚೆನ್ನೈನ ಹಸಿರುಪೀಠದಲ್ಲಿ ದಾವೆ ಹೂಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಹರೀಶ್ ತೋಳಾರ್ ಕೊಲ್ಲೂರು ತಿಳಿಸಿದ್ದಾರೆ.
ಕುಂದಾಪುರ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕೊಲ್ಲೂರಿನಲ್ಲಿ ಹೊಟೇಲ್, ವಸತಿ ಸಂಕೀರ್ಣನವರು ಅವ್ಯಾಹತವಾಗಿ ಕೊಳಚೆ ನೀರನ್ನು ನದಿಗೆ ಬಿಡುತ್ತಾರೆ. ಎಲ್ಲ ಕೊಳಚೆ ಈ ಪವಿತ್ರ ನದಿಗೆ ಸೇರುವುದರಿಂದ ನದಿಯ ನೀರು ಸಂಪೂರ್ಣ ಕಲುಷಿತಗೊಂಡು ಜಲಚರಗಳು ಸಾವನ್ನಪ್ಪುತ್ತಿವೆ. ಈ ನೀರನ್ನು ಕೂಡಿಯುವ ವನ್ಯ ಪ್ರಾಣಿಗಳು ಸಾವನ್ನಪ್ಪುವ ಅಪಾಯವಿದೆ. ಈ ಹಿಂದೆ ಸಾಂಕ್ರಾಮಿಕ ರೋಗ ಕಾಣಿಸಿಕೊಂಡು ಮೂವರು ಮೃತ ಪಟ್ಟಿದ್ದಾರೆ. ಹೊಳೆಗೆ ಕೊಳಚೆ ಬಿಡುವುದನ್ನು ನಿರ್ಬಂಧಿಸುವಲ್ಲಿ ಗ್ರಾಮ ಪಂಚಾಯತಿ ಅಸಹಾಯಕವಾಗಿದೆ'' ಎಂದರು.
''ಸೌಪರ್ಣಿಕ ಅತ್ಯಂತ ಪವಿತ್ರ ಎನ್ನುವ ಭಾವನೆ ಭಕ್ತರಲ್ಲಿದೆ. ಆದರೆ ಕೊಲ್ಲೂರಿನ ಎಲ್ಲ ಕೊಳಚೆಗಳು ನದಿಯ ಒಡಲು ಸೇರಿ ಅತ್ಯಂತ ಕಲುಷಿತವಾಗಿದೆ. ಈ ಕಲುಷಿತ ನೀರಿನಲ್ಲಿ ದೇವಿ ಮೂಕಾಂಬಿಕೆಯ ಅವಭೃತ ಸ್ನಾನ ಮಾಡಿಸಲಾಗುತ್ತಿದೆ. ಇದು ನಿಜಕ್ಕೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ವಿಚಾರವಾಗಿದೆ'' ಎಂದರು.
''ಒಂದೆಡೆ ನದಿಗೆ ಕೊಳಚೆ ನೀರು ಬಿಡುವುದು, ಇನ್ನೊಂದೆಡೆ ನದಿಯ ಒತ್ತುವರಿ ನಡೆಯುತ್ತಿದೆ. ಒತ್ತುವರಿದಾರರಿಂದ ಐತಿಹಾಸಿಕ ಸ್ತಳಗಳ ನಾಶವಾಗಿದೆ. ಒತ್ತುವರಿಯನ್ನು ತೆರವು ಮಾಡುವ ಕಾರ್ಯವೂ ಇನ್ನೂ ನಡೆದಿಲ್ಲ ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಿ ಸಂಬಂಧಪಟ್ಟವರಿಗೆ ಮನವಿ ನೀಡಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ'' ಎಂದರು.
''ಅಗ್ನಿತೀರ್ಥ ನದಿಯ ಎರಡೂ ದಡದಲ್ಲಿ ಇರುವ ಕಲ್ಯಾಣಮಂಟಪ, ವಸತಿಗೃಹ, ಹೋಟೆಲ್ ಸೇರಿದಂತೆ ಅನೇಕ ವಾಣಿಜ್ಯ ಚಟುವಟಿಕೆಯ ಕಟ್ಟಡದಲ್ಲಿ ಉಪಯೋಗಿಸಿ ಹೊರಬುರವ ತ್ಯಾಜ್ಯ ನೀರು ಇದೆ ಅಗ್ನಿತೀಥವನ್ನು ಸೇರುತ್ತಿದೆ. ದೇವಸ್ಥಾನಕ್ಕೆ ಪ್ರತಿನಿತ್ಯ ಆಗಮಿಸುವ ಭಕ್ತರು ಉಪಯೋಗಿಸಿ ಎಸೆದಿರುವ ಘನ ತ್ಯಾಜ್ಯಗಳು ಇದೆ ಪುಣ್ಯ ನದಿಯನ್ನು ಸೇರಿಕೊಂಡು ಒಟ್ಟಾರೆಯಾಗಿ ಸೌಪರ್ಣಿಕ ನದಿಯು ವಿಷಪೂರಿತ ಕಲುಷಿತ ತೀರ್ಥವಾಗುತ್ತಿದೆ. ವರ್ಷದ ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿ ಉಳಿದ ಋತುಗಳಲ್ಲಿ ನೀರಿನ ನಿರಂತರ ಹರಿಯುವಿಕೆ ಇಲ್ಲದೆ ಇರುವುದರಿಂದ ವಿಷಪೂರಿತ ನೀರನ್ನು ಕುಡಿದು ಇಲ್ಲಿನ ಅಮುಲ್ಯ ಮತ್ಸ ಸಂಪತ್ತು, ಜಲಚರಗಳು ಹಾಗೂ ಮೂಕಾಂಬಿಕಾ ಅಭಯರಣ್ಯದ ಪ್ರಾಣಿ-ಸಂಕುಲಗಳು ದೊಡ್ಡ ಪ್ರಮಾಣದಲ್ಲಿ ಜೀವ ಕಳೆದುಕೊಳ್ಳುತ್ತಿವೆ. ಕೊಳಚೆ ಹಾಗೂ ಕೆಸರು ಮಯವಾಗುವ ಈ ನೀರಿನಿಂದ ಹರಡುವ ಗಬ್ಬು ವಾಸನೆ ಹಾಗೂ ಸೊಳ್ಳೆಗಳಿಂದಾಗಿ ಪರಿಸರದ ಜನರು ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ'' ಎಂದರು.
''ಕೊಲ್ಲೂರು ಗ್ರಾಮದ ಸರ್ವೇ ನಂಬ್ರ: 118/1 ರಲ್ಲಿ ಇರುವ ಕಂದಾಯ ಇಲಾಖೆಯಲ್ಲಿ ಪರಂಬೂರು ಹೊಳೆ ಎಂದು ನಮೂದಿಸಲಾಗಿದ್ದು ಈ ನದಿಯ ಎರಡು ಕಡೆಯಲ್ಲಿ ನದಿ ಹಾಗೂ ಅರಣ್ಯ ಭೂಮಿಯನ್ನು ಅತಿಕ್ರಮಿಸಿ, ಅನಧೀಕೃತ ವಸತಿಗೃಹ ಹಾಗೂ ಹೋಟೆಲ್ಗಳ ನಿರ್ಮಾವಾಗಿದೆ. ಪರೋಕ್ಷವಾಗಿ ಪುಣ್ಯತೀರ್ಥಗಳ ಮಲೀನಕ್ಕೆ ಕಾರಣವಾಗುತ್ತಿರುವ ಅನಧೀಕೃತ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಹಾಗೂ ಸರಕಾರದ ಸಂಬಂಧಿಸಿದ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳಬೇಕು. ಹೊಳೆಯನ್ನು ಅತಿಕ್ರಮಿಸಿ ನದಿ ಪಾತ್ರವನ್ನು ಕಡಿಮೆ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು. ಇಲ್ಲದೆ ಇದ್ದರೆ ಸರ್ವೋಚ್ಛ ನ್ಯಾಯಾಲಯದ ಹಸಿರು ಪೀಠದಲ್ಲಿ ದಾವೆ ಹೂಡಲಾಗುವುದು'' ಎಂದರು.
''ಕೊಲ್ಲೂರು ಗ್ರಾಮದ ಸರ್ವೇ ನಂಬ್ರ: 56 ರಲ್ಲಿ ಒಟ್ಟು 15,764.48 ಎಕರೆ ಭೂಮಿ ಇದ್ದು 2.20 ಎಕರೆ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಿಯ ದೇವಸ್ಥಾನದ ಭೂಮಿಯಾಗಿದೆ. 0.20 ಎಕರೆ ಸ್ಮಶಾನಕ್ಕೆ ಮೀಸಲಿಡಲಾಗಿದೆ. ಬಾಕಿ ಉಳಿದಿರುವ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು ಇದರಲ್ಲಿ 866.75 ಎಕರೆ ಸಂರಕ್ಷಿತ ಅರಣ್ಯ ಪ್ರದೇಶವಾಗಿದೆ. ಈ ಅರಣ್ಯ ಪ್ರದೇಶಕ್ಕೆ ಸೇರಿದ ಕೊಲ್ಲೂರಿನ ಸೌಪರ್ಣಿಕ ನದಿ ಹತ್ತಿರ ಇರುವ ಗಣೇಶ ದೇವಸ್ಥಾನದಿಂದ ಕಾಶಿ ಹೊಳೆಯವರೆಗೆ ಅಂದಾಜು 250 ಮೀಟರ್ ಉದ್ದಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಈ ರಸ್ತೆ ನಿಮಾರ್ಣದ ಕುರಿತು ಕೊಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಮಾಹಿತಿಯು ಇಲ್ಲ. ರಸ್ತೆ ನಿರ್ಮಾಣದ ಪೂರ್ವದಲ್ಲಿ ಅರಣ್ಯ ಇಲಾಖೆ ಸೇರಿದಂತೆ ಪರಿಸರ ಹಾಗೂ ಇತರ ಇಲಾಖೆಗಳಿಂದ ಪೂರ್ವಾನುಮತಿಯನ್ನು ಪಡೆದುಕೊಂಡಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗುತ್ತಿಲ್ಲ. ಸೌಪರ್ಣಿಕ ಪುಣ್ಯನದಿಗೆ ಹೆಸರು ಬರಲು ಕಾರಣವಾದ ’ಸುಪರ್ಣ'' ಗರುಡನು ತಪಸ್ಸು ಮಾಡಿರುವ ಪುಣ್ಯ ಸ್ಥಳವನ್ನು ಅತಿಕ್ರಮಿಸಿಕೊಳ್ಳಲಾಗಿದೆ'' ಎಂದರು.
ಸುದ್ಧಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ದಿನೇಶ ಗಾಣಿಗ ಕೋಟ, ವಿವೇಕ್ ಸುವರ್ಣ, ಸುರೇಶ ಸಂಗಮ್, ರಾಜು ಸಂಗಮ್, ಧನಂಜಯ ಕುಂದಾಪುರ ಉಪಸ್ಥಿತರಿದ್ದರು.