Karavali
ಕುಂದಾಪುರ: ಕೆಲವು ಕುಟುಂಬಗಳಿಗೆ ಹಕ್ಕುಪತ್ರ ಯಾಕೆ ನೀಡಿಲ್ಲ? - ಪಂಚಾಯತಿ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ
- Wed, Apr 21 2021 06:47:34 PM
-
ಕುಂದಾಪುರ, ಏ.21 (DaijiworldNews/MB) : ಡೀಮ್ಡ್ ಫಾರೆಸ್ಟ್ ಗೊಂದಲದಿಂದ ಜನಸಾಮಾನ್ಯರು ಅನವಶ್ಯಕವಾಗಿ ಸಮಸ್ಯೆಗೀಡಾಗುತ್ತಿದ್ದಾರೆ. ಅಧಿಕಾರಿಗಳ ಗೊಂದಲಕಾರಿ ನಿಲುವು, ಈ ಹಿಂದೆ ಸರ್ಕಾರವೇ ನೀಡಿದ ನಿವೇಶನಗಳಿಗೆ ಈಗ ಡೀಮ್ಡ್ ಎಂದು ಹೇಳುತ್ತಿರುವುದು ಆಶ್ವರ್ಯ ಮೂಡಿಸುತ್ತಿದೆ. ತಲ್ಲೂರು ಹಾಗೂ ಹಟ್ಟಿಯಂಗಡಿ ಗ್ರಾಮದಲ್ಲಿ ಮನೆ ನಿವೇಶನಗಳಲ್ಲಿ ಕೆಲವು ಕುಟುಂಬಗಳಿಗೆ ಡೀಮ್ಡ್ ಎಂದು ಹಕ್ಕುಪತ್ರ ನೀಡದೆ ಇರುವುದರ ಬಗ್ಗೆ ಬುಧವಾರ ನಡೆದ ಕುಂದಾಪುರ ತಾಲೂಕು ತೀವ್ರ ಆಕ್ಷೇಪ ಎದುರಾಯಿತು.
ತಲ್ಲೂರು ಹಟ್ಟಿಯಂಗಡಿ ಪರಿಸರದಲ್ಲಿ ಸರ್ಕಾರದ ನಿವೇಶನ ಯೋಜನೆಯಡಿ 125 ಕುಟುಂಬಗಳಿಗೆ ನಿವೇಶನ ಮಂಜೂರಾಗಿದ್ದು ಅದರಲ್ಲಿ ಮೂಲ ನಿವೇಶನದಾರು ವಾಸ್ತವ್ಯ ಇಲ್ಲದೇ ಇರುವುದರಿಂದ ಹಕ್ಕುಪತ್ರ ನಿವೇಶನ ಶರತ್ತು ಉಲ್ಲಂಘನೆಯಡಿ ರದ್ದುಗೊಳಿಸಿ ಪ್ರಸ್ತುತ ವಾಸ್ತವ್ಯ ಇರುವ ಫಲಾನುಭವಿಗಳಿಗೆ 94ಸಿ ಯೋಜನೆಯಡಿಯಲ್ಲಿ 100 ಹಕ್ಕುಪತ್ರ ವಿತರಿಸಲಾಗಿದೆ. ಉಳಿಕೆ 25 ಫಲಾನುಭವಿಗಳಿಗೆ ಡೀಮ್ಡ್ ಕಾರಣದಿಂದ ಹಕ್ಕುಪತ್ರ ವಿತರಿಸದ ಬಗ್ಗೆ ಸದಸ್ಯ ಕರುಣ್ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಕಂದಾಯ ಇಲಾಖೆ 24 ಜನ ಪಲಾನುಭವಿಗಳ ಬಗ್ಗೆ 14 ಮಂದಿ ತಲ್ಲೂರು ಗ್ರಾಮದಲ್ಲಿ, 10 ಮಂದಿ ಹಟ್ಟಿಯಂಗಡಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸ್ಥಳದಲ್ಲಿ ವಾಸ್ತವ್ಯಹೊಂದಿರುವುದರಿಂದ ಡೀಮ್ಡ್ ವ್ಯಾಪ್ತಿಯಲ್ಲಿರುವುದರಿಂದ ಅರಣ್ಯ ಇಲಾಖೆಗೆ ಬರೆಯಲಾಗಿದೆ ಎಂಬ ಉತ್ತರಕ್ಕೆ ಕೆರಳಿದ ಕರುಣ್ ಪೂಜಾರಿ ಈ ಬಗ್ಗೆ ತಹಶೀಲ್ದಾರ್ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
94ಸಿಗೆ ಸಂಬಂಧಪಟ್ಟಂತೆ ನೀಡಲಾದ ಉತ್ತರಗಳು ಕೂಡಾ ತೃಪ್ತಿಕರವಾಗಿಲ್ಲ, ತಹಶೀಲ್ದಾರರು ಈ ಸಭೆಗೆ ಅಗತ್ಯವಾಗಿ ಬರಬೇಕಿತ್ತು. ಅವರು ಜಾಣ ಕುರುಡತನ ತೋರಿಸುತ್ತಿದ್ದಾರೆ. ಎರಡು ವರ್ಷದಿಂದ ಕಾನೂನುಗಳು ಬದಲಾವಣೆಯಾದವೆಯೇ? ಈ ತಾಲೂಕು ಪಂಚಾಯತಿ ಸಭೆಯಲ್ಲಿ ಸತತವಾಗಿ ಈ ವಿಚಾರ ಚರ್ಚೆ ಆಗುತ್ತಿದೆ. ತಾ.ಪಂ.ಸದಸ್ಯರ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲವೇ ಎಂದು ಪ್ರಶ್ನಿಸಿದರು.
ಜ್ಯೋತಿ ಪುತ್ರನ್ ಮಾತನಾಡಿ, ಈ ಹಿಂದೆ ಮಂಜೂರಾದ ಸ್ಥಳದಲ್ಲಿ ಈಗ ಡೀಮ್ಡ್ ಬಂದಿದ್ದು ಹೇಗೆ? ಯಾವ ಕಾರಣದಿಂದ ಹಕ್ಕುಪತ್ರ ಕೊಡಲಾಗುವುದಿಲ್ಲ? ನಮಗೆ ಅಧಿಕಾರಿಗಳಿಂದ ಕತೆ ಕೇಳಿ ಕೇಳಿ ಸಾಕಾಗಿದೆ. ಕಳೆದ ಐದು ವರ್ಷದಿಂದ ಧಾರಾವಾಹಿ ರೀತಿ ವಿಷಯ ಎಳೆಯುತ್ತಲೇ ಇದ್ದಾರೆ. ಸಮಸ್ಯೆಗೆ ಪರಿಹಾರ ಅಂತ ಇಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ವಾಸುದೇವ ಪೈ ಮಾತನಾಡಿ ಇಂತಹ ಹಲವು ಸಮಸ್ಯೆಗಳು ತಾಲೂಕಿನಲ್ಲಿವೆ. ಅಂಪಾರಿನಲ್ಲಿ ಒರ್ವ ಬಡ ಮಹಿಳೆ ಕಳೆದ 40 ವರ್ಷಗಳಿಂದ ಮನೆ ಕಟ್ಟಿಕೊಂಡು ಕುಳಿತಿದ್ದಾರೆ. ಅವರಿಗೂ ಹಕ್ಕುಪತ್ರ ಕೊಟ್ಟಿಲ್ಲ. ನಿರೀಕ್ಷೆ ಮಾಡಿದ ಮಟ್ಟದಲ್ಲಿ ಕೆಲಸವಾಗುತ್ತಿಲ. ಬಡವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದರು. ಈ ನಡುವೆ ಪ್ರೊಬೆಷನರಿ ಕಾರ್ಯನಿರ್ವಹಣಾಧಿಕಾರಿ ನೀಡಿದ ಉತ್ತರಕ್ಕೆ ಮತ್ತಷ್ಟು ಗರಂ ಆದರು.
ಗಂಗೊಳ್ಳಿಯ ಚೋಳನಕೆರೆ ಮತ್ತು ಮಡಿವಾಳ ಕೆರೆ ಒತ್ತುವರಿಯ ಬಗ್ಗೆ ಕಳೆದ ಸಭೆಯಲ್ಲಿ ಒಂದು ರೀತಿ ಈ ಸಭೆಯಲ್ಲಿ ಇನ್ನೊಂದು ರೀತಿ ಉತ್ತರ ನೀಡಲಾಗಿದೆ. ಈ ರೀತಿ ಗೊಂದಲಕಾರಿ ಹೇಳಿಕೆ ತಹಶೀಲ್ದಾರರು ಏಕೆ ನೀಡಿದ್ದಾರೆ ಎಂದು ಸುರೇಂದ್ರ ಖಾರ್ವಿ ಆಕ್ರೋಶ ವ್ಯಕ್ತ ಪಡಿಸಿದರು. ಕೆರೆ ಒತ್ತುವರಿಯಾಗಿರುವುದು ಸ್ಪಷ್ಟ. ಕೆರೆಯ ಮಧ್ಯೆಯದಲ್ಲಿಯೇ ಒಂದು ಮನೆಗಾಗಿ 16 ಅಡಿ ರಸ್ತೆ ನಿರ್ಮಾಣ ಮಾಡಲಾಗಿದೆ. ಈಗ ನೋಡಿದರೆ ಮೋಜಣಿಯಲ್ಲಿ ಒತ್ತುವರಿಯಾಗಿಲ್ಲ ಎಂದು ವರದಿ ನೀಡಲಾಗಿದೆ. ಸತ್ಯ ಕಣ್ಣಾರೆ ಇದ್ದರೂ ಕೂಡಾ ಒತ್ತುವರಿಯಾಗಿಲ್ಲ ಎಂದು ಯಾವ ಆಧಾರದಲ್ಲಿ ಹೇಳುತ್ತಾರೆ ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ವಾಸುದೇವ ಪೈ ಕಳೆದ ಹಲವು ಸಭೆಗಳಲ್ಲಿ ವಿಷಯ ಪ್ರತಿಧ್ವನಿಸಿದರೂ ಕೂಡಾ ಇನ್ನೂ ಪರಿಹಾರ ಸಿಗದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದರು.
ಕೊರ್ಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಿಂದೂ ರುದ್ರಭೂಮಿಯಿಲ್ಲ. ಸಶ್ಮಾನಕ್ಕೆ ಕಾಯ್ದಿರಿಸಿದ 4 ಎಕರೆ ಜಾಗ ಒತ್ತುವರಿಯಾಗಿದೆ. ಈ ಬಗ್ಗೆ ಕಳೆದ 2-3 ವರ್ಷಗಳಿಂದ ಕೇಳುತ್ತಲೇ ಇದ್ದೇವೆ, ಅಲ್ಲಿ ಒಂದು ಎಕ್ರೆ ಸ್ಥಳ ಖಾಲಿ ಇದ್ದರೂ ಕೂಡಾ ಅದನ್ನು ಸಶ್ಮಾನದ ಉದ್ದೇಶಕ್ಕೆ ಗಡಿಗುರುತು ಮಾಡಿ ಗ್ರಾಮ ಪಂಚಾಯತಿ ಹಸ್ತಾಂತರಿಸಬೇಕು ಎಂದು ಸದಸ್ಯೆ ಶೈಲಶ್ರೀ ಎಸ್ ಶೆಟ್ಟಿ ಆಗ್ರಹಿಸಿದರು. ಇದಕ್ಕೆ ನಾರಾಯಣ ಗುಜ್ಜಾಡಿ, ಉದಯ ಪೂಜಾರಿ ಚಿತ್ತೂರು, ವಾಸುದೇವ ಪೈ ಧ್ವನಿಗೂಡಿಸಿದರು.
ಹಕ್ಲಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಬಗ್ಗೆ ತಹಶೀಲ್ದಾರರ ಗಮನ ಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧ್ಯಕ್ಷೆ ಇಂದಿರಾ ಶೆಟ್ಟಿ ಅಸಮಾಧಾನ ತೊಡಿಕೊಂಡರು. ತಾಲೂಕು ಪಂಚಾಯತಿ ಸಭೆಗೆ ಅಧಿಕಾರಿಗಳ ಗೈರು ಸತತವಾಗಿ ಕಾಣಿಸಿಕೊಂಡಿದೆ. ಈ ಸಭೆಯಲ್ಲಿ ಅರ್ಧದಷ್ಟು ಅಧಿಕಾರಿಗಳು ಇಲ್ಲ. 143 ಪ್ರಕಾರ ನೋಟಿಸ್ ನೀಡಿದರೂ ಅದು ಲೆಕ್ಕಕ್ಕೆ ಇಲ್ಲ ಎನ್ನುವಂತೆ ಮಾಡುತ್ತಿದ್ದಾರೆ. ಪಂಚಾಯತ್ ರಾಜ್ ಕಾಯ್ದೆಗೆ ಅರ್ಥವೇ ಇಲ್ಲವೇ ಎಂದು ಕರುಣ್ ಕುಮಾರ್ ಪೂಜಾರಿ ಹೇಳಿದರು. ಈ ಅವಧಿಯ ಕೊನೆಯ ಸಭೆಯಾದ್ದರಿಂದ ಅನುಪಾಲನಾ ವರದಿಯ ಬಗ್ಗೆ ಸ್ಪಷ್ಟತೆ ಬೇಕು. ಹಾಗಾಗಿ ಶೀಘ್ರ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಅವರು ತಿಳಿಸಿದರು.
ತಲ್ಲೂರಿನಲ್ಲಿರುವ ವಸತಿ ಸಂಕೀರ್ಣದ ನಿರ್ಮಾಣ ಅವೈಜ್ಞಾನಿಕವಾಗಿದ್ದು ಕೊಳಚೆ ನೀರನ್ನು ಚರಂಡಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಲಾಗಿದೆಯೇ? ಪರವಾನಿಗೆ ನೀಡಿರುವ ಗ್ರಾಮ ಪಂಚಾಯತಿಯ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನೆ ಮಾಡಿದರು.
ತಾ.ಪಂ.ಅಧ್ಯಕ್ಷೆ ಇಂದಿರಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮಕಿಶನ್ ಹೆಗ್ಡೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಪ್ರೊಬೆಷನರಿ ಕಾರ್ಯನಿರ್ವಹಣಾಧಿಕಾರಿ ಪ್ರತಿಭಾ ಉಪಸ್ಥಿತರಿದ್ದರು.
ಧಾರವಾಹಿಯಂತಾಯ್ತು ಅವಸ್ಥೆ
ಕುಂದಾಪುರ ತಾಲೂಕು ಪಂಚಾಯತಿಯ ಸಾಮಾನ್ಯ ಸಭೆಯಲ್ಲಿ ಬಂದ ಪ್ರಶ್ನೆಗಳಿಗೆ ಕಾರ್ಯಗತವಾಗುವುದೇ ಇಲ್ಲ. ಧಾರಾವಾಹಿಯಂತೆ ಮುಂದುವರಿಯುತ್ತಲೇ ಇರುತ್ತಲೇ ಇರುತ್ತದೆ. ಕಳೆದ ಐದು ವರ್ಷಗಳಿಂದ ಇದೇ ಆಗಿದೆ ಎಂದು ಸದಸ್ಯರು ತೀವ್ರ ಅಸಮಧಾನ ತೋಡಿಕೊಂಡರು. ಜ್ಯೋತಿ ಪುತ್ರನ್, ವಾಸುದೇವ ಪೈ, ಕರುಣ್ ಪೂಜಾರಿ, ಸುರೇಂದ್ರ ಖಾರ್ವಿ ಮೊದಲಾದವರು ನಿರಂತರವಾಗಿ ಪ್ರತಿ ಪಾಲನಾವರದಿಯಲ್ಲಿ ಪ್ರಶ್ನೆ ಮುಂದುವರಿಯುತ್ತದೆ ಬಿಟ್ಟರೆ ಪರಿಹಾರವಾಗುವುದಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.