ಉಡುಪಿ, ಎ.21 (DaijiworldNews/PY): ಶೀರೂರು ಮಠಕ್ಕೆ ಬಾಲ ಸನ್ಯಾಸಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು ಹೇಳಿಕೆ ನೀಡಿದ್ದಾರೆ.
ಉಡುಪಿಯ 16 ವರ್ಷದ ಬಾಲಕ ಅನಿರುದ್ದ ಸರಳತ್ತಾಯ ಅವರನ್ನು ಶೀರೂರು ಮಠದ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದರು.
ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥರು, "ಶೀರೂರು ಮಠದ ಉತ್ತರಾಧಿಕಾರಿಯನ್ನು ಪರಿಚಯಿಸಲು ನನಗೆ ಸಂತೋಷವಾಗುತ್ತಿದೆ. ಉಡುಪಿಯ ವಿದ್ಯೋದಯ ಪಬ್ಲಿಕ್ ಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಮುಗಿಸಲಿರುವ 16 ವರ್ಷದ ಅನಿರುದ್ದ ಸರಳತ್ತಾಯ ಅವರನ್ನು ಶೀರೂರು ಮಠದ ಉತ್ತರಾಧಿಕಾರಿನ್ನಾಗಿ ಆಯ್ಕೆ ಮಾಡಲಾಗಿದೆ. ಇವರು ಧರ್ಮಸ್ಥಳ ಸಮೀಪದ ನಡ್ಲೆ ಗ್ರಾಮದವರಾದ ಡಾ. ಎಂ ಉದಯಕುಮಾರ್ ಸರಳತ್ತಾಯ ದಂಪತಿಗಳ ಪುತ್ರ" ಎಂದು ತಿಳಿಸಿದ್ದಾರೆ.
"ಮೇ 11ರಿಂದ 14ರ ತನಕ ನಡೆಯುವ ಕಾರ್ಯಕ್ರಮದಲ್ಲಿ ಅನಿರುದ್ದರ ಸನ್ಯಾಸ ಸ್ವೀಕಾರ ಹಾಗೂ ಪಟ್ಟಾಭಿಷೇಕ ನಡೆಯಲಿದೆ. ಮೇ 13 ದಂದ ಬೆಳಗ್ಗೆ 7.30ರಿಂದ 8 ಗಂಟೆಯ ಶುಭ ಮುಹೂರ್ತದಲ್ಲಿ ಸನ್ಯಾಸ ಸ್ವೀಕಾರ, ಮೇ 14ರ ಅಪರಾಹ್ನ 12.35ರಿಂದ 12.50ರ ನಡುವೆ ಶೀರೂರು ಪೀಠದಲ್ಲಿ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ" ಎಂದು ಹೇಳಿದ್ದಾರೆ.
ಈ ವೇಳೆ ಮಾತನಾಡಿದ ಅನಿರುದ್ಧ ಸರಳತ್ತಾಯ, "ನಾನು ಬಾಲ್ಯದಿಂದಲೂ ಶ್ರೀಕೃಷ್ಣನನ್ನು ಆರಾಧಿಸುತ್ತಾ ಬಂದಿದ್ದೇನೆ. ಹಾಗಾಗಿ ಇಂದು ನಾನು ಈ ಮಾರ್ಗವನ್ನು ಆರಿಸಿಕೊಳ್ಳುತ್ತಿದ್ದೇನೆ. ಅಲ್ಲದೇ, ನನ್ನ ಹೆತ್ತವರು ಸಹ ನನ್ನ ಕನಸಿಗೆ ಸಾಕಾರ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
"ಅನಿರುದ್ದನು ಕಿರಿಯ ವಯಸ್ಸಿನಿಂದಲೂ ದೇವರು ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ. ಮಠ ಸಂಪ್ರದಾಯಗಳ ಆಚರಣೆ ಹಾಗೂ ವಿಧಿವಿಧಾನಗಳ ಬಗ್ಗೆ ಅವರಿಗೆ ಪರಿಚಯವಿದ್ದು, ವೇದಾಂತ ಶಾಸ್ತ್ರಗಳ ಸಾರವನ್ನು ತಿಳಿದುಕೊಳ್ಳುವ ಆಸಕ್ತಿ ಹೊಂದಿದ್ದಾರೆ. ತಾನೇ ಸ್ವತಃ ಶೀರೂರು ಮಠಕ್ಕೆ ಯತಿಯಾಗಿ ತೆರಳುತ್ತೇನೆ ಎಂದು ತನ್ನ ಅಭಿಪ್ರಾಯವನ್ನು ತನ್ನ ತಂದೆಯ ಬಳಿ ವ್ಯಕ್ತಪಡಿಸಿದ್ದಾರೆ. ಈ ಅಭಿಪ್ರಾಯವನ್ನು ಪರಿಗಣನೆಗೆ ತೆಗೆದುಕೊಂಡ ಉದಯ ಕುಮಾರ್ ಸರಳತ್ತಾಯ ಅನಿರುದ್ದನ ಜಾತಕವನ್ನು ವಿಮರ್ಶಿಸಿ ಪ್ರಶ್ನೆಗಳನ್ನು ಹಾಕಿಸಿ ಚಿಂತಿಸಿದ ಸಂದರ್ಭ ಅನಿರುದ್ದನಿಗೆ ಪೀಠಾಧಿಪತ್ಯ ಯೋಗವಿದೆ ಎಂದು ತಿಳಿದುಬಂದಿದೆ" ಎಂದು ಶ್ರೀವಿಶ್ವವಲ್ಲಭ ತೀರ್ಥರು ತಿಳಿಸಿದ್ದಾರೆ.
"ನಾನು ಅನಿರುದ್ದನ ಹಿನ್ನೆಲೆ, ಗುಣ, ಜ್ಞಾನ, ಆಸಕ್ತಿ ಹಾಗೂ ಜಾತಕ ಎಲ್ಲವನ್ನೂ ಪ್ರತ್ಯಕ್ಷ-ಪರೋಕ್ಷವಾಗಿ ಪರಿಶೀಲನೆ ಮಾಡಿದಾಗ ಎಲ್ಲಾ ಪರೀಕ್ಷೆಯಲ್ಲಿ ಅನಿರುದ್ದನು ಸಮಂಜಸವಾಗಿ ಕಂಡುಬಂದಿದ್ದು, ಶಿರೂರು ಮಠದ ಆರಾಧ್ಯ ದೇವರಾದ ಶ್ರೀ ವಿಠಲ ದೇವರ ಇಚ್ಛೆಯೆಂದು ವಟುವಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಕೃಷ್ಣನ ದೈನಂದಿಂದ ಪೂಜೆಗೆ ಸಂಪೂರ್ಣವಾಗಿ ತನ್ನನ್ನು ಅರ್ಪಿಸಿಕೊಳ್ಳುವಂತೆ ಕೇಳಿಕೊಂಡಿದ್ದೇನೆ" ಎಂದು ಹೇಳಿದ್ದಾರೆ.