ಕಾರ್ಕಳ, ಏ.21 (DaijiworldNews/MB) : ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ರವರು ಇಂದು ಬೆಳಿಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ತುರ್ತಾಗಿ ಭೇಟಿ ಕೊಟ್ಟು ವೈದ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಕೊರೊನಾ 2ನೇ ಅಲೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾರ್ಕಳದ ಜನೆತೆಗೆ ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ದಿನದ 24 ಗಂಟೆ ಚಿಕಿತ್ಸೆ ನೀಡುವುದರ ಮೂಲಕ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಕೊರೊನಾ ಅಲ್ಲದೇ ಇತರ ಖಾಯಿಲೆಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಂಡು, ಆಸ್ಪತ್ರೆಯ ಸ್ವಚ್ಛತೆ ಹಾಗೂ ಸ್ಯಾನಿಟೈಸ್ ಮಾಡಿ ಆಸ್ಪತ್ರೆ ವಾತಾವರಣ ಜನಸ್ನೇಹಿ ಆಗುವ ಹಾಗೆ ಇರಬೇಕು ಎಂದರು.
ಸರಕಾರಿ ಆಸ್ಪತ್ರೆಗೆ ಹೆಚ್ಚುವರಿಯಾಗಿ ವೈದ್ಯರು, ನರ್ಸ್ ಹಾಗೂ ಇನ್ನಿತರ ಸಿಬ್ಬಂದಿ ನೇಮಕಕ್ಕೆ ತಕ್ಷಣ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಿ ಅದಕ್ಕೆ ಬೇಕಾದಂತಹ ಕ್ರಮವನ್ನು ತೆಗೆದುಕೊಂಡು, ಒಂದು ವಾರದೊಳಗೆ ಕಾರ್ಕಳದಲ್ಲಿ 50 ಆಕ್ಸಿಜನ್ ವ್ಯವಸ್ಥೆಯ ಬೆಡ್ ಇರುವ ಕೋವಿಡ್ ವಿಭಾಗ ಆರಂಭಿಸಲು ಬೇಕಾದಂತಹ ಅನುದಾನವನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಕೋರಿದರು.
ಇಂದಿನಿಂದ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ತುರ್ತಾಗಿ ಬೇಕಾದಂತ 30 ಆಕ್ಸಿಜನ್ ಬೆಡ್ ಇರುವ ಆಸ್ಪತ್ರೆಯನ್ನು ನಿಟ್ಟೆಯಲ್ಲಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡುವಂತೆ ಆದೇಶಿಸಿದರು.