ಮಂಗಳೂರು, ಏ.21 (DaijiworldNews/MB) : ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲೇ ಈಗಾಗಲೇ ನಿಗದಿಯಾದ ವಿವಾಹಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಆದರೆ ಕೆಲವು ಷರತ್ತುಗಳನ್ನು ವಿಧಿಸಿದೆ. ''ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಈಗಾಗಲೇ ನಿಗದಿಯಾಗಿರುವ ವಿವಾಹವನ್ನು ನಡೆಸಲು ಅನುಮತಿ ಇದೆ. ಆದರೆ ಕೇವಲ 50 ಜನರು ಮಾತ್ರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ'' ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.
ರಾಜ್ಯ ಸರ್ಕಾರದಿಂದ ಹೊಸ ಕೊರೊನಾ ಮಾರ್ಗಸೂಚಿ ಪ್ರಕಟ ಮಾಡಿದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮತ್ತು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದರು.
''ವೀಕೆಂಡ್ ಕರ್ಫ್ಯೂ ಸಂದರ್ಭ ಈಗಾಗಲೇ ನಿಗದಿಯಾಗಿರುವ ವಿವಾಹವನ್ನು ನಡೆಸಬಹುದು. ಕೇವಲ 50 ಜನರಿಗೆ ಅವಕಾಶವಿದ್ದು 50 ಜನರ ಪಟ್ಟಿಯನ್ನು ತಯಾರಿಸಿ ಆ ಪಟ್ಟಿಯನ್ನು ಸ್ಥಳೀಯಾಡಳಿತಕ್ಕೆ ತೋರಿಸಿ ಅನುಮತಿ ಪಡೆಯಬೇಕು. ಆ ಬಳಿಕ ಆ ಪತ್ರ, ಮದುವೆ ಆಮಂತ್ರಣ ಪತ್ರಿಕೆ, ಐಡಿ ಕಾರ್ಡ್ ಅನ್ನು ಕಡ್ಡಾಯವಾಗಿ ಪೊಲೀಸರಿಗೆ ತೋರಿಸಿ ಪ್ರಯಾಣ ಮಾಡಬಹುದು'' ಎಂದು ಜಿಲ್ಲಾಧಿಕಾರಿ ತಿಳಿಸಿದರು.
''ಮದುವೆ ಆಮಂತ್ರಣ ಪತ್ರಿಕೆಯ ನೈಜ ಪ್ರತಿ ಪ್ರಯಾಣದ ವೇಳೆ ಕೈಯ್ಯಲ್ಲಿರಲೇಬೇಕು. ವಿವಾಹಕ್ಕೆ ಅತಿಥಿಯಾಗಿ ಬರುವವರಿಗೆ ಐಡಿ ತೋರಿಸಿದರಷ್ಟೇ ಪ್ರಯಾಣಕ್ಕೆ ಅವಕಾಶ ಎಂದು ಕೂಡಾ ತಿಳಿಸಿದ ಜಿಲ್ಲಾಧಿಕಾರಿಗಳು, ಮದುವೆಗೆ ಹೋಗುವ ಕಾರಿನಲ್ಲಿ ಏಳೆಂಟು ಜನರನ್ನು ತುಂಬಿದರೆ ಪ್ರಯಾಣಿಸಲು ಅವಕಾಶ ಇಲ್ಲ'' ಎಂದು ಎಚ್ಚರಿಕೆ ನೀಡಿದರು.
ಇನ್ನು ''ದೇವಸ್ಥಾನದಲ್ಲಿ ಮದುವೆ ನಡೆಯುವುದಾದರೆ 50 ಜನರನ್ನು ಸೇರಿಸಿ ಮಾಡಬಹುದು. ಈಗಾಗಲೇ ಮಾಡಿದ ನಿಯಮದಂತೆ ದೇವಸ್ಥಾನಗಳಲ್ಲಿ ಮದುವೆಗೆ ಅನುಮತಿಯಿದೆ. ಈ 50 ಜನರ ಪಟ್ಟಿಯಲ್ಲೇ ಮದುವೆ ಫೋಟೋಗ್ರಾಫರ್ಸ್, ಅರ್ಚಕರು ಕೂಡಾ ಸೇರುತ್ತಾರೆ'' ಎಂದು ತಿಳಿಸಿದರು.
''ದೇವಸ್ಥಾನದ ಧಾರ್ಮಿಕ ಕಾರ್ಯಗಳನ್ನು ಅರ್ಚಕರು ಸೇರಿಕೊಂಡು ಮಾಡಬೇಕು. ಆದರೆ ಯಾವುದೇ ಸಾರ್ವಜನಿಕರು ಈ ಆಚರಣೆಯಲ್ಲಿ ಭಾಗಿಯಾಗಲು ನಿಷೇಧವಿದೆ. ಈ ಆದೇಶ ಇಂದಿನಿಂದಲ್ಲೇ ಜಿಲ್ಲೆಯ ಎಲ್ಲಾ ದೇವಸ್ಥಾನಗಳಲ್ಲಿ ಜಾರಿಯಾಗಲಿದೆ'' ಎಂದರು.
''ಪಾಸ್ ಮತ್ತು ಐಡಿ ಕಾರ್ಡ್ ಬಳಸಿ ಕುಟುಂಬದ ಜೊತೆ ಸಂಚರಿಸಲು ಅವಕಾಶವಿಲ್ಲ. ಯಾರ ಹೆಸರಿನಲ್ಲಿ ಪಾಸ್ ಮತ್ತು ಐಡಿ ಕಾರ್ಡ್ ಇದೆಯೋ ಅವರಿಗಷ್ಟೇ ಸಂಚಾರಕ್ಕೆ ಅವಕಾಶ'' ಎಂದು ತಿಳಿಸಿದರು.
ಇನ್ನು ''ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶವಿದೆ. ಆದರೆ ಮನೆಯ ಅಕ್ಕಪಕ್ಕದಲ್ಲಿ ಇರುವ ಅಂಗಡಿಗಳಿಂದ ಖರೀದಿ ಮಾಡಬೇಕು. ಸಹಜವಾಗಿ ಅಗತ್ಯ ವಸ್ತುಗಳು ನಡೆದುಕೊಂಡು ಹೋಗಿ ತರಲು ಸಾಧ್ಯವಾಗುವಷ್ಟು ದೂರದಲ್ಲೇ ಲಭಿಸುತ್ತದೆ. ವಾಹನ ಬಳಸಿ ಅಗತ್ಯ ವಸ್ತು ಖರೀದಿಗೆ ತೆರಳುವುದಾದರೂ ಸೂಕ್ತ ಕಾರಣ ನೀಡಬೇಕು ಎಂದು'' ವಿವರಿಸಿದ ಜಿಲ್ಲಾಧಿಕಾರಿಗಳು, ''ಅಗತ್ಯ ವಸ್ತು ತರುವ ಸಂದರ್ಭದ ವಿನಾಯಿತಿಯನ್ನು ದುರುಪಯೋಗ ಪಡಿಸಿಕೊಂಡರೆ ಅಂಥವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು'' ಎಂದು ಎಚ್ಚರಿಕೆ ನೀಡಿದರು.