ಮಂಗಳೂರು, ಎ.21 (DaijiworldNews/PY): ಪೊಲೀಸ್ ಸಿಬ್ಬಂದಿಗಳಿಗಾಗಿ ಮಧ್ಯಾಹ್ನದ ಊಟದ ವ್ಯವಸ್ಥೆಗೆ ಎಪ್ರಿಲ್ 21ರ ಬುಧವಾರದಂದು ಪೊಲೀಸ್ ಕಮೀಷನರೇಟ್ ಕಚೇರಿಯ ಆವರಣದಲ್ಲಿ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಅವರು ಚಾಲನೆ ನೀಡಿದರು.
ಊಟದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, "ಕೊರೊನಾ ಎರಡನೇ ಅಲೆ ಹಿನ್ನೆಲೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಈ ಹಿನ್ನೆಲೆ ಬೆಳಗ್ಗೆ 9 ಗಂಟೆಯಿಂದ ರಾತ್ರಿ 6 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿದೆ. ಅದೇ ರೀತಿ ವೀಕೆಂಡ್ ಕರ್ಫ್ಯೂ ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಕೂಡಾ ಜಾರಿಯಲ್ಲಿದೆ. ವೀಕೇಂಡ್ ಕರ್ಫ್ಯೂನಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯರೆಗೆ ಸಡಿಲಿಕೆ ನೀಡಲಾಗಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಇದು ಅನ್ವಯವಾಗುತ್ತದೆ. ಇದನ್ನು ಹೊರತುಪಡಿಸಿ ಯಾವ ಯಾವ ನಿಯಮಗಳನ್ನು ಪಾಲನೆ ಮಾಡಬೇಕು ಎನ್ನುವುದನ್ನು ಸರ್ಕಾರ ನೀಡಿದೆ" ಎಂದು ಹೇಳಿದ್ದಾರೆ.
"ಈ ಹಿನ್ನೆಲೆ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲನೆ ಮಾಡಲು ಸೂಚನೆ ನೀಡಲಾಗಿದೆ. ಆ ಪ್ರಕಾರ ನಮ್ಮ ಕಚೇರಿ ಸೇರಿದಂತೆ ಎಲ್ಲಾ ಕಡೆ ಪಾಲಿಸುತ್ತಿದ್ದೇವೆ. ನಮ್ಮ ಇಲಾಖಾ ಮುಖ್ಯಸ್ಥರಾದ ಡಿಜಿ ಹಾಗೂ ಐಜಿಪಿ ಅವರು ಯಾವೆಲ್ಲಾ ಮಾರ್ಗಸೂಚಿಗಳನ್ನು ಪಾಲಿಸಬೇಕು, ಸಿಬ್ಬಂದಿಗಳು ಯಾವ ಶಿಫ್ಟ್ನಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುವ ಸೂಚನೆ ನೀಡಿದ್ದಾರೆ. ನಮ್ಮಲ್ಲಿ 2 ಸಾವಿರ ಸಿಬ್ಬಂದಿಗಳಲ್ಲಿ 1,030ಕ್ಕೂ ಹೆಚ್ಚು ಜನ ಉತ್ತರ ಕರ್ನಾಟಕ ಭಾಗದಿಂದ ಬಂದಿರುವವರಾಗಿದ್ದಾರೆ. ಆಯುಕ್ತಾಲಯ ಪ್ರಾರಂಭವಾದ ಬಳಿಕದ ನೇಮಕಾತಿಯಲ್ಲಿ ಹೆಚ್ಚು ಉತ್ತರ ಕರ್ನಾಟಕ ಹಾಗೂ ಕರಾವಳಿ ಪ್ರದೇಶಗಳಲ್ಲಿ ಹೊರತುಪಡಿಸಿದ ಅಧಿಕಾರಿಗಳು ಹೆಚ್ಚಿದ್ದಾರೆ. ಇದರಲ್ಲಿ ಅವಿವಾಹಿತರೂ ಇದ್ದು, ಕೆಲವರು ತಮ್ಮ ಪೋಷಕರೊಂದಿಗೆ ವಾಸವಾಗಿದ್ದರು. ಕೊರೊನಾ ಹೆಚ್ಚಿರುವ ಕಾರಣ ಅವರನ್ನು ಮುಂಜಾಗ್ರತಾ ಕ್ರಮದ ನಿಟ್ಟಿನಲ್ಲಿ ಅವರ ಊರುಗಳಿಗೆ ಕಳುಹಿಸಲಾಗಿದೆ. ಮಹಿಳಾ ಸಿಬ್ಬಂದಿಗಳು ಹಾಗೂ ಅವಿವಾಹಿತ ಸಿಬ್ಬಂದಿಗಳಿಗೆ ಊಟದ ಸಮಸ್ಯೆಯಾಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಪ್ರಸ್ತುತ ಹೊಟೇಲ್, ರೆಸ್ಟೋರೆಂಟ್ಗಳಲ್ಲಿ ಊಟದ ವ್ಯವಸ್ಥೆ ಇಲ್ಲ. ಈ ಹಿನ್ನೆಲೆ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿರುವುದು ಗಮನಕ್ಕೆ ಬಂದ ಕಾರಣ ಅವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಕಮೀಷನರೇಟ್ ಕಚೇರಿ ಆವರಣದಲ್ಲಿ ಕ್ಯಾಂಟೀನ್ ತೆರೆಯಲಾಗಿದೆ" ಎಂದಿದ್ದಾರೆ.
"ಪ್ರತೀ ದಿನ ಮಧ್ಯಾಹ್ನ ಬಿಸಿ ಹಾಗೂ ಶುಚಿಕರ, ಪೌಷ್ಠಿಕವಾದ ಆಹಾರವನ್ನು ಇಂದಿನಿಂದ ಆರಂಭ ಮಾಡಲಾಗಿದೆ. ರಾತ್ರಿಯ ವೇಳೆಯೂ ಅಗತ್ಯಬಿದ್ದಲ್ಲಿ ಈ ವ್ಯವಸ್ಥೆಯನ್ನ ಮುಂದುವರೆಸಲಾಗುವುದು. ಹೋಂಗಾರ್ಡ್ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳೇ ಸ್ವಯಂ ಇಚ್ಛೆಯಿಂದ ಅಡುಗೆ ತಯಾರಿಸಲು ಮುಂದಾಗಿದ್ದಾರೆ. ಉತ್ತಮ ರೀತಿಯಲ್ಲಿ ರುಚಿಕರವಾದ ಆಹಾರವನ್ನು ತಯಾರಿಸಿದ್ದಾರೆ. ಎಷ್ಟು ದಿನದವರೆಗೆ ಮುಂದುವರೆಸಲು ಸಾಧ್ಯವೋ ಅಲ್ಲಿಯವರೆಗೆ ಈ ವ್ಯವಸ್ಥೆ ಮುಂದುವರೆಯಲಿದೆ" ಎಂದು ಹೇಳಿದ್ದಾರೆ.
"ಪ್ರತಿನಿತ್ಯ ಕನಿಷ್ಠ 250-300 ಮಂದಿಗೆ ಊಟದ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ 11-3 ಗಂಟೆಯವರೆಗೆ ಊಟದ ವ್ಯವಸ್ಥೆ ಮಾಡಲಾಗುತ್ತದೆ. 4-5 ಕೌಂಟರ್ಗಳನ್ನು ಮಾಡಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡದೇ ಆಹಾರ ಸೇವನೆ ಮಾಡಬೇಕು. 250-300 ಮಂದಿ ಸಿಬ್ಬಂದಿಗಳಿಗೆ ಇದು ಅನುಕೂಲವಾಗುತ್ತದೆ ಎನ್ನುವುದು ನಮ್ಮ ನಿರೀಕ್ಷೆ" ಎಂದಿದ್ದಾರೆ.
"ಶೇ.90ಕ್ಕಿಂತ ಹೆಚ್ಚು ಮಂದಿ ಅಧಿಕಾರಿ, ಸಿಬ್ಬಂದಿಗಳಿಗೆ ಕೊರೊನಾ ಲಸಿಕೆಯ ಮೊದಲನೇ ಡೋಸ್ ನೀಡಲಾಗಿದೆ. ಶೇ.40ರಷ್ಟು ಮಂದಿ ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. ಉಳಿದ ಸಿಬ್ಬಂದಿಗಳು ಕೂಡಾ ಆದಷ್ಟು ಬೇಗ ಲಸಿಕೆಯ ಎರಡನೇ ಡೋಸ್ ಹಾಕಿಸಿಕೊಳ್ಳಲಿದ್ದಾರೆ. ಇಲಾಖಾ ಮುಖ್ಯಸ್ಥರು ನಮಗೆ ಸ್ಪಷ್ಟವಾದ ಸೂಚನೆ ನೀಡಿದ್ದು, ಪೊಲೀಸ್ ಕುಟುಂಬ ಸದಸ್ಯರಿಗೂ ಕೂಡಾ ಲಸಿಕೆ ಕೊಡಿಸಬೇಕು. ನಾಳೆ ಒಂದು ಪೊಲೀಸ್ ಕುಟುಂಬಕ್ಕೆ ಕೊರೊನಾ ಲಸಿಕೆ ಕ್ಯಾಂಪ್ ಇದ್ದು, ನಮ್ಮ ಆಯುಕ್ತಾಲಯದಿಂದ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದ್ದಾರೆ.