ಮಂಗಳೂರು, ಏ.21 (DaijiworldNews/MB) : ಕೊರೊನಾ ಸೋಂಕು ಹರಡುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೊರೊನಾ ಸಹಾಯವಾಣಿ 'ಬ್ರೇಕ್ ದಿ ಚೈನ್' ಎಂಬ ಜಾಗೃತಿ ಅಭಿಯಾನವನ್ನು ಏಪ್ರಿಲ್ 21 ರ ಬುಧವಾರ ಪ್ರಾರಂಭಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ ಅವರು, "ಶಾಸಕರೇ ಗುದ್ದಲಿ ಪೂಜೆ ಬಿಟ್ಟು ವಾಕ್ಸಿನ್ ಕೊರತೆ ನೀಗಿಸಿ" ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಐವನ್ ಡಿಸೋಜಾ, "ತಜ್ಞರ ಪ್ರಕಾರ ಸಾಂಕ್ರಾಮಿಕ ರೋಗವು ಒಂದೂವರೆ ವರ್ಷಗಳ ಕಾಲ ಇರುತ್ತದೆ. ಭಾರತವೂ ಮೂರನೇ ಕೊರೊನಾ ಹರಡುವಿಕೆಯತ್ತ ಸಾಗುತ್ತಿದೆ. ಆದ್ದರಿಂದ ಸೋಂಕು ಹರಡುವುದನ್ನು ನಿಲ್ಲಿಸುವುದು ಬಹಳ ಮುಖ್ಯ. ಆದ್ದರಿಂದ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಜಾಗೃತಿ ಮೂಡಿಸಲು ಕಾಂಗ್ರೆಸ್ 'ಬ್ರೇಕ್ ದಿ ಚೈನ್' ಅಭಿಯಾನವನ್ನು ಪ್ರಾರಂಭಿಸಿದೆ ಎಂದು ತಿಳಿಸಿದ್ದಾರೆ.
''ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಕಾಂಗ್ರೆಸ್ ನಿಯೋಗವು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತಿಮ ಸಂಸ್ಕಾರವನ್ನು ಬೋಳೂರು ಹಾಗೂ ನಂದಿಗುಡ್ಡೆ ಸ್ಮಶಾನದಲ್ಲಿ ಉಚಿತವಾಗಿ ನಡೆಸಲು ಅನುಮತಿ ನೀಡುವಂತೆ ಒತ್ತಾಯ ಮಾಡಿದೆ. ಪ್ರಸ್ತುತ 7000 ರಿಂದ 8000 ರೂ. ವಿಧಿಸಲಾಗುತ್ತದೆ. ಆದ್ದರಿಂದ ಅಂತಿಮ ಸಂಸ್ಕಾರದ ವೆಚ್ಚವನ್ನು ಜಿಲ್ಲಾಡಳಿತ ಅಥವಾ ನಗರ ಪಾಲಿಕೆ ಭರಿಸಬೇಕು ಎಂದು ತಿಳಿಸಲಾಗಿದೆ. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ'' ಎಂದು ಐವನ್ ಡಿಸೋಜಾ ಅವರು ಹೇಳಿದರು.
''ಕೊರೊನಾ ಸೋಂಕಿತರ ಮೃತ ದೇಹ ದಹನ ಪ್ರಕ್ರಿಯೆಯನ್ನು ಪರಿಶೀಲಿಸಲು ನೇಮಕಗೊಂಡ ನೋಡಲ್ ಅಧಿಕಾರಿಯ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಜಿಲ್ಲಾಡಳಿತ ಪ್ರಕಟಿಸಬೇಕು'' ಎಂದು ಆಗ್ರಹಿಸಿದ ಐವನ್ ಅವರು, ''ಕೊರೊನಾದಿಂದ ಸಾವನ್ನಪ್ಪುವ ಜನರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತ ಪ್ರತ್ಯೇಕ ಭೂಮಿಯನ್ನು ಗುರುತಿಸಬೇಕು'' ಎಂದರು.
''ಜಿಲ್ಲೆಯ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಹಣದ ಕೊರತೆಯಿಲ್ಲ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ'' ಎಂದೂ ಅವರು ತಿಳಿಸಿದರು.
ಇನ್ನು ಜಿಲ್ಲೆಯಲ್ಲಿ ಲಸಿಕೆ ಕೊರತೆಯ ವಿಚಾರದಲ್ಲಿ ಜಿಲ್ಲಾಡಳಿತದ ವಿರುದ್ದ ಹರಿಹಾಯ್ದ ಐವಾನ್, ''ಜಿಲ್ಲಾ ಉಸ್ತುವಾರಿ ಸಚಿವರು ಮೌನವಾಗಿದ್ದಾರೆ. ನಮ್ಮ ಜಿಲ್ಲೆಗೆ ಒಬ್ಬ ಮಂತ್ರಿ ಇದ್ದಾರೆ. ಆದರೆ ಅವರು ಎಲ್ಲಿದ್ದಾರೆ ಎಂದು ಯಾರಿಗೂ ತಿಳಿದಿಲ್ಲ. ಸಾಂಕ್ರಾಮಿಕ ಪರಿಸ್ಥಿತಿಯನ್ನು ನಿಭಾಯಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಬದಲು ಬಿಜೆಪಿ ಶಾಸಕರು ಗುದ್ದಲಿ ಕಲ್ಲುಗಳನ್ನು ಹಾಕುವಲ್ಲಿ ಬ್ಯುಸಿಯಾಗಿದ್ದಾರೆ. ಇದು ನಿಮ್ಮ ಕರ್ತವ್ಯವೇ'' ಎಂದು ಪ್ರಶ್ನಿಸಿದರು.
"ರಾಜ್ಯದಲ್ಲಿ ಜನರಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ವಿಧಿಸುವ ಮೂಲಕ ರಾಜ್ಯ ಸರ್ಕಾರ ಪರೋಕ್ಷವಾಗಿ ಲಾಕ್ ಡೌನ್ ವಿಧಿಸಿದೆ" ಎಂದು ಕೂಡಾ ಅಭಿಪ್ರಾಯಪಟ್ಟರು.
ಏಪ್ರಿಲ್ 20 ರ ಮಂಗಳವಾರ ಕೊರೊನಾ ಪರಿಸ್ಥಿತಿಯ ವಿಚಾರದಲ್ಲಿ ನಡೆದ ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸುವಂತೆ ರಾಜ್ಯಪಾಲ ವಜುಭಾಯಿವಾಲಾ ಅವರ ಬಳಿ ರಾಜ್ಯ ಸರ್ಕಾರ ಮನವಿ ಮಾಡಿದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಐವಾನ್ ಅವರು, ''ಇಂತಹ ಘಟನೆ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಚುನಾಯಿತ ಪ್ರತಿನಿಧಿಗಳು ಸರ್ಕಾರದಲ್ಲಿದ್ದಾಗ, ರಾಜ್ಯಪಾಲರು ಸಭೆ ನಡೆಸುವ ಪರಿಸ್ಥಿತಿ ಏಕೆ ಬಂದಿದೆ. ಇದು ಸಂವಿಧಾನಬಾಹಿರ ಹಾಗೂ ಹಾಸ್ಯಾಸ್ಪದ. ಹಾಗೆಯೇ ಪ್ರಜಾಪ್ರಭುತ್ವದ ಕಗ್ಗೊಲೆ'' ಎಂದು ಕಿಡಿಕಾರಿದರು.
''ಬಿಪಿಎಲ್ ಕಾರ್ಡ್ ಹೊಂದಿರುವವರ ಕುಟುಂಬಗಳಿಗೆ ಸರ್ಕಾರ 10 ಕೆಜಿ ಅಕ್ಕಿ ಮತ್ತು ದಿನಸಿ ಕಿಟ್ಗಳನ್ನು ಒದಗಿಸಬೇಕು. ಇಂದಿರಾ ಕ್ಯಾಂಟೀನ್ಗಳನ್ನು ಪುನಃ ಪ್ರಾರಂಭಿಸಬೇಕು. ಕ್ಯಾಂಟೀನ್ಗಳ ಸಾಮರ್ಥ್ಯವನ್ನು ಹೆಚ್ಚಿಸಬೇಕು'' ಎಂದು ಆಗ್ರಹಿಸಿದರು.
''ಜಿಲ್ಲಾ ಕಾಂಗ್ರೆಸ್ ಸಹಾಯವಾಣಿಯು, 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕಾ ಅಭಿಯಾನವನ್ನು ಏಪ್ರಿಲ್ 23 ರಂದು ಲಯನ್ಸ್ ಸೇವಾ ಮಂದಿರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ನಡೆಸಲಿದೆ. 250 ಜನರಿಗೆ ಲಸಿಕೆ ನೀಡಲಾಗುವುದು'' ಎಂದು ತಿಳಿಸಿದ್ದಾರೆ.