ಉಡುಪಿ, ಎ.21 (DaijiworldNews/PY): "ಶೀರೂರು ಮಠಕ್ಕೆ ಹೊಸ ಉತ್ತರಾಧಿಕಾರಿಯನ್ನು ನೇಮಕ ಮಾಡುವುದನ್ನು ನಾನು ವಿರೋಧಿಸುತ್ತೇನೆ. ಈ ಸಂಬಂಧ ಪ್ರಕರಣ ಕೋರ್ಟ್ನಲ್ಲಿರುವಾಗ ಯಾವುದೇ ರೀತಿಯಾದ ಚಟುವಟಿಕೆ ಸರಿಯಲ್ಲ" ಎಂದು ಶೀರೂರು ಮಠಾಧೀಶರಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ. ಲಾತವ್ಯ ಆಚಾರ್ಯ ಹೇಳಿದ್ದಾರೆ.
ಎಪ್ರಿಲ್ 20 ರ ಮಂಗಳವಾ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಶ್ರೀಗಳು ಕಾಲವಾದ ನಂತರ ಆಸ್ತಿ-ಪಾಸ್ತಿ ವಿಚಾರ, ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತಕರಾರು, ಅಪವಾದಗಳು ಕೇಳಿ ಬಂದಿದ್ದವು. ಇವೆಲ್ಲದರ ನೋವುಗಳನ್ನು ಸಹಿಸಿಕೊಂಡಿದ್ದ ನಾವು ಆಸ್ತಿ-ಪಾಸ್ತಿಯ ಪಾರದರ್ಶಕತೆ ನಿಟ್ಟಿನಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಇಂತಹ ಸಂದರ್ಭ ಯಾವುದೇ ರೀತಿಯಾದ ಚಟುವಟಿಕೆ ನಡೆಸುವುದು ಸೂಕ್ತವಲ್ಲ" ಎಂದು ತಿಳಿಸಿದ್ದಾರೆ.
"ಮಠಕ್ಕೆ ಸಕಲ ವಿದ್ಯಾಪಾರಂಗತನಾದ, ಪ್ರಬುದ್ದ ವ್ಯಕ್ತಿಯೊಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡುವ ಬದಲಾಗಿ ಬಾಲ ಸನ್ಯಾಸಿಯನ್ನು ಉತ್ತರಾಧಿಕಾರಿಯಾಗಿ ನೇಮಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿಯಿಂದ ನಮಗೆ ನೋವಾಗಿದೆ. ಇದರ ವಿರುದ್ದವೂ ನಾವು ನ್ಯಾಯಾಲಯದಲ್ಲಿ ದಾವೆ ಹೂಡುತ್ತೇವೆ" ಎಂದು ಹೇಳಿದ್ದಾರೆ.
"ಕಳೆದ ಮೂರು ವರ್ಷಗಳ ಹಿಂದೆ ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಸಮ್ಮುಖದಲ್ಲಿ ಕಠಿಣ ಹತ್ತು ವರ್ಷ ವೇದಾಂತ ಜ್ಞಾನ ಹಾಗೂ 21 ವರ್ಷ ಪೂರೈಸಿರುವ ಯೋಗ್ಯ ವಟುವನ್ನು ಅಷ್ಟ ಮಠಕ್ಕೆ ಶಿಷ್ಯರಾಗಿ ಸ್ವೀಕರಿಸುವ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಎಲ್ಲಾ ಮಠಾಧೀಶರು ಈ ಬಗ್ಗೆ ಮಾತುಕತೆ ನಡೆಸಿದ್ದರು. ಇದೀಗ ಮಠಕ್ಕೆ 16, 17 ವರ್ಷದ ಯತಿಯನ್ನು ನೇಮಕ ಮಾಡುವುದು ಸೂಕ್ತವಲ್ಲ" ಎಂದಿದ್ದಾರೆ.
"700 ವರ್ಷಗಳಿಗೂ ಅಧಿಕ ಇತಿಹಾಸವಿರುವ ಅಷ್ಟ ಮಠಗಳ ಪರಂಪರೆಯಲ್ಲಿ ಶೀರೂರು ಮಠವು ಎರಡೂವರೆ ವರ್ಷಗಳಿಂದ ಮಠಾಧೀಶರಿಲ್ಲದೇ ಖಾಲಿ ಬಿದ್ದಿದೆ" ಎಂದು ವಾದಿರಾಜ ಆಚಾರ್ಯ ಹೇಳಿದ್ದಾರೆ.
ಪ್ರಹ್ಲಾದ ಆಚಾರ್ಯ, ಅಕ್ಷೋಭ್ಯ ಆಚಾರ್ಯ ಉಪಸ್ಥಿತರಿದ್ದರು.