ಉಡುಪಿ, ಏ 20(DaijiworldNews/MS): ರೂಟ್ ನಲ್ಲಿ ಸಂಚರಿಸುತ್ತಿದ್ದ ಬಸ್’ನಲ್ಲಿ ನಿಯಮಕ್ಕಿ,ತ ಅಧಿಕ ಜನ ಪ್ರಯಾಣಿಸುತ್ತಿರುವ ಕಾರಣ ನೀಡಿ ಬಸ್ನಲ್ಲಿ ನಿಂತುಕೊಂಡು ಪ್ರಯಾಣಿಸುತಿದ್ದ ಪ್ರಯಾಣಿಕರನ್ನು ಇಳಿಸಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರ ನಡೆಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸೋಮವಾರದಂದು ಮಾಸ್ಕ್ ಹಾಕದವರ ವಿರುದ್ದ ದಿಢೀರ್ ಕಾರ್ಯಾಚರಣೆಗೆ ಇಳಿದಿದ್ದ ಜಿಲ್ಲಾಧಿಕಾರಿಗಳು ಸಂತೆಕಟ್ಟೆ ಬಳಿ ಬಸ್ಸುಗಳನ್ನು ತಪಾಸಣೆ ನಡೆಸುವ ವೇಳೆ ಹಲವಾರು ಬಸ್ಸುಗಳಲ್ಲಿ ನಿಗದಗಿಂತ ಹೆಚ್ಚಿನ ಜನರು ಸಂಚಾರ ನಡೆಸುವುದನ್ನು ಗಮನಿಸಿ ನಿಂತುಕೊಂಡು ಪ್ರಯಾಣ ಮಾಡುವ ಪ್ರಯಾಣಿಕರನ್ನು ಬಸ್ಸಿನಿಂದ ಇಳಿಸಿದ್ದರು. ಪ್ರಯಾಣಿಕರಲ್ಲಿ ಹಲವಾರು ಮಂದಿ ವಿದ್ಯಾರ್ಥಿಗಳು, ದಿನ ನಿತ್ಯ ಉಡುಪಿಗೆ ಕೆಲಸಕ್ಕೆ ಬರುವ ಪ್ರಯಾಣಿಕರು ಕೂಡಾ ಸೇರಿದ್ದರು.
ಇದೇ ಸಂದರ್ಭದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ್ದ ವಿದ್ಯಾರ್ಥಿನಿಯೊಬ್ಬಳು "ನಾವು ಹಳ್ಳಿಯಿಂದ ಬರುವವರು, ಜಿಲ್ಲಾಧಿಕಾರಿಗಳು ಹೀಗೆಲ್ಲಾ ನಡುವೆ ಇಳಿಸಿ ಹೋದರೆ ನಮಗೆ ಮನೆಗೆ ಹೋಗಲು ಬೇರೆ ಬಸ್ ವ್ಯವಸ್ಥೆ ಕೂಡಾ ಇಲ್ಲ. ನಾವು ಮನೆಗೆ ಬರಲು ತಡವಾದರೆ ನಮ್ಮ ಹೆತ್ತವರು ಆತಂಕಕ್ಕೆ ಒಳಗಾಗುತ್ತಾರೆ" ಎಂದು ಮಾಧ್ಯಮಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಜಿಲ್ಲಾಧಿಕಾರಿಗಳ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿದೆ. "ನೀವೇನೋ ವಿಡಿಯೋ ಮಾಡಿ ಮನೆಗೆ ಹೋದಿರಿ, ದಾರಿ ಮಧ್ಯೆ ನಿಂತ ಈ ಹೆಣ್ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಾದವರು ಯಾರು?" ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.