ಮಂಗಳೂರು, ಏ.20 (DaijiworldNews/MB) : ಕೊರೊನಾ ಸೋಂಕು ಪ್ರಕರಣಗಳು ತೀವ್ರವಾಗುತ್ತಿರುವ ಹಿನ್ನೆಲೆಯಿಂದಾಗಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವ ಆಚರಣೆಯನ್ನು ಅರ್ಧಕ್ಕೆ ರದ್ದು ಮಾಡಲಾಗಿದೆ.
ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ನಿರ್ಬಂಧಗಳ ನಡುವೆಯೇ ಸರಳವಾಗಿ ಜಾತ್ರೋತ್ಸವ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಜರನು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದು ಕೊರೊನಾ ಸಂದರ್ಭದಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು.
ಈ ಹಿನ್ನೆಲೆ ಸೋಮವಾರ ಮಂಗಳೂರು ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಸರ್ಕಾರದ ಆದೇಶದಂತೆ ಜಾತ್ರೋತ್ಸವ ಆಚರಣೆ ರದ್ದು ಮಾಡಲು ಸೂಚನೆ ನೀಡಿದ್ದರು.
ಸೋಮವಾರ ದೇವಳದ ಹಗಲು ರಥೋತ್ಸವ ನಡೆಸಲಾಗಿದ್ದು ಮಂಗಳವಾರ ಕಟೀಲು ಅಮ್ಮನವರ ಎಕ್ಕಾರು ಭೇಟಿ ಹಾಗೂ ಶಿಬರೂರು ಕೊಡಮಣಿತ್ತಾಯ ಭೇಟಿ ರದ್ದುಗೊಳಿಸಲಾಗಿದೆ.
ಇನ್ನು ಜಾತ್ರೆಯ ಉಳಿದ ಆಚರಣೆಗಳನ್ನು ಪ್ರಾಂಗಣದ ಒಳಗೆಯೇ ಸರಳವಾಗಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.