ಬಂಟ್ವಾಳ, ಏ 20(DaijiworldNews/MS): ಕಂಬಳ ಕ್ಷೇತ್ರದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು 'ಬೋಳಂತೂರು ಕಾಟಿ' ಎಂದೇ ಹೆಸರಾಗಿದ್ದ ಬಂಟ್ವಾಳ ತಾಲೂಕಿನ ಬೋಳಂತೂರು ದಿ| ಗಂಗಾಧರ ರೈ ಅವರ ಯಜಮಾನಿಕೆಯ ಸುಮಾರು 28 ವರ್ಷರ ಹರೆಯದ ಕೋಣವು ರವಿವಾರ ರಾತ್ರಿ ಅಸುನೀಗಿದೆ.
ಕಂಬಳ ಕ್ಷೇತ್ರದಲ್ಲಿ ಕೆಲವು ವರ್ಷಗಳ ಕಾಲ ತನ್ನ ದಿಗ್ವಿಜಯದ ಓಟದ ಮೂಲಕ ಎಲ್ಲರ ಗಮನ ಸೆಳೆದಿದ್ದ ಬೋಳಂತೂರು ಕಾಟಿ,ಕಳೆದ ಹಲವು ವರ್ಷಗಳಿಂದ ವಿಶ್ರಾಂತಿಯಲ್ಲಿತ್ತು.
ಬಾರ್ಕೂರಿನಲ್ಲಿ ಬೆಳೆದಿತ್ತು:
ಬಾರ್ಕೂರು ದೇವದಾಸ ಗಡಿಯಾರ್ ಅವರು ಕಾಟಿಯನ್ನು ಬಾಲ್ಯದಲ್ಲಿ ಪೋಷಿಸಿದ್ದು, ನೇಗಿಲು ಕಿರಿಯ ವಿಭಾಗದಲ್ಲಿ ಶಿರ್ವ ಕಂಬಳದಲ್ಲಿ ಮೊದಲ ಬಹುಮಾನ ಪಡೆದಿತ್ತು. ಅಂದು ಶಿರ್ವ ವಿಶ್ವನಾಥ ಪ್ರಭು ಅವರು ಕಾಟಿಯನ್ನು ಓಡಿಸಿದ್ದರು. ಬಳಿಕ ಕಾಟಿಯು ಬಾರ್ಕೂರು ಶಾಂತಾರಾಮ ಶೆಟ್ಟಿ ಅವರ ಗರಡಿಯಲ್ಲಿ ಪಳಗಿತ್ತು.
ಬಾರ್ಕೂರು ಶಾಂತಾರಾಮ ಶೆಟ್ಟಿ ಹಾಗೂ ದೇವದಾಸ ಗಡಿಯಾರ್ ಅವರು ಜತೆ ಸೇರಿ ಮೋಡ ಕೋಣದ ಜೋಡಿಯಾಗಿ ಕಾಟಿಯನ್ನು ಓಡಿಸಿದ್ದರು. ಸೀನಿಯರ್ ವಿಭಾಗಕ್ಕೆ ಪ್ರವೇಶಿಸುವ ಮೊದಲೇ ಹಗ್ಗ ಕಿರಿಯ ವಿಭಾಗದಲ್ಲಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಮುಂದೆ ಬೆಳುವಾಯಿ ಸದಾನಂದ ಶೆಟ್ಟಿ ಅವರು ಕಾಟಿಯನ್ನು ತಮ್ಮ ಬಳಗಕ್ಕೆ ಸೇರಿಸಿ, ಅವರ ಮಾತಿಬೆಟ್ಟು ಕೋಣದ ಜತೆ ಸೇರಿಸಿ ಹಗ್ಗ ಹಿರಿಯ ವಿಭಾಗದಲ್ಲಿ ಓಡಿಸಿದ್ದು, ಹಲವು ಪ್ರಶಸ್ತಿ ಪಡೆದಿತ್ತು.
೨೦೦೧ರಲ್ಲಿ ಬೋಳಂತೂರು ಗಂಗಾಧರ ರೈ ಅವರು ಕಾಟಿ-ಮಾತಿಬೆಟ್ಟು ಜೋಡಿಯನ್ನು ಖರೀದಿಸಿದ್ದು, ಪ್ರಾರಂಭದ 2ವರ್ಷ ಅಜಿತ್ಕುಮಾರ್ ಜೈನ್ ಈ ಜೋಡಿಯನ್ನು ಓಡಿಸಿದ್ದರು. ಬಳಿಕ ಅಶೋಕ್ಕುಮಾರ್ ಜೈನ್ ಅವರು ಓಡಿಸಿದ್ದು, ಈ ಸಂದರ್ಭ ಸತತ ಮೂರು ವರ್ಷಗಳ ಕಾಲ ಚಾಂಪಿಯನ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿತ್ತು.
ಬಳಿಕ ಮಂಜೇಶ್ವರ ಉದ್ಯಾವರ, ಮುನ್ನೆ, ಚಿತ್ರಾಪುರದ ಕುಟ್ಟಿ, ಬಿಳಿಯೂರು, ಗಂಗೆ ಮೊದಲಾದ ಕೋಣಗಳಿಗೆ ಜೋಡಿಯಾಗಿ ಪ್ರಶಸ್ತಿ ಪಡೆದಿದ್ದು, ಹಲವು ಮಂದಿ ಕಂಬಳ ಓಟಗಾರರು ಓಡಿಸಿದ್ದರು. `ಬೋಳಂತೂರು ಕಾಟಿ'ಯು ಕನೆಹಲಗೆ ವಿಭಾಗದಲ್ಲೂ ಪ್ರಶಸ್ತಿ ಪಡೆದಿತ್ತು.
ಸೋಮವಾರ ಬೆಳಗ್ಗೆ ಅದರ ಅಭಿಮಾನಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಇದರ ಅದ್ವಿತೀಯ ಸಾಧನೆಗಾಗಿ ಸುಮಾರು ೩ ವರ್ಷಗಳ ಹಿಂದೆ ಪುತ್ತೂರು ಕಂಬಳದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ `ಬೋಳಂತೂರು ಕಾಟಿ'ಗೆ ೨೫ ವರ್ಷ ತುಂಬಿದ ಸವಿನೆನಪಿಗಾಗಿ ಅದ್ದೂರಿಯಾಗಿ ಸಮ್ಮಾನ ಮಾಡಿರುವುದು ಕಂಬಳ ಕ್ಷೇತ್ರದಲ್ಲಿ ಬೋಳಂತೂರು ಕಾಟಿಗೆ ಇದ್ದ ಹಿರಿಮೆಗೆ ಸಾಕ್ಷಿ.