ಮಂಗಳೂರು, ಏ. 19 (DaijiworldNews/SM): ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣಗೊಂಡಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು. ಅಗತ್ಯವೆಂದು ಮನಗಂಡು ಸಾರ್ವಜನಿಕ ಸಮಾರಂಭ ಆಚರಣೆಗಳು, ಕಾರ್ಯಕ್ರಗಳಿಗೆ ಜನರ ಒಗ್ಗೂಡುವಿಕೆಗೆ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ನಿರ್ದೇಶಿಸಿದ್ದಾರೆ.
ಮದುವೆ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನರು ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ಗಳು ಇತ್ಯಾದಿ ಮುಚ್ಚಿದ ಸ್ಥಳಗಳಲ್ಲಿ 100 ಜನರು ಪಾಲ್ಗೊಳ್ಳಬಹುದು. ಜನ್ಮ ದಿನ ಹಾಗೂ ಇತರೆ ಆಚರಣೆಗಳು ತೆರೆದ ಪ್ರದೇಶಗಳಲ್ಲಿ 50 ಜನರು ಹಾಗೂ ಸಭಾಂಗಣಗಳು, ಹಾಲ್ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು, ನಿಧನ ಅಥವಾ ಶವಸಂಸ್ಕಾರ ತೆರೆದ ಪ್ರದೇಶಗಳಲ್ಲಿ 50 ಜನರು ಹಾಗೂ ಸಭಾಂಗಣಗಳು, ಹಾಲ್ಗಳು, ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 25 ಜನರು, ಅಂತ್ಯ ಕ್ರಿಯೆಗೆ 25 ಜನರು ಹಾಗೂ ಇತರೆ ಸಮಾರಂಭಗಳಿಗೆ ಹಾಲ್ನ ವಿಸ್ತೀರ್ಣಕ್ಕೆ ಅನುಗುಣವಾಗಿ 25 ಜನರು ಮತ್ತು ರಾಜಕೀಯ ಆಚರಣೆ ಹಾಗೂ ಸಮಾರಂಭಗಳಿಗೆ ತೆರೆದ ಪ್ರದೇಶಗಳಲ್ಲಿ 200 ಜನರು ಪಾಲ್ಗೊಳ್ಳಬಹುದು ಹಾಗೂ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ಇನ್ನು ಈ ಆಚರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಹುದಾದ ಜನರ ಸಂಖ್ಯೆಗೆ ಅನುಗುಣವಾಗಿ ಪಾಸ್ಗಳನ್ನು ವಿತರಿಸುವಂತೆ ನಿರ್ದೇಶಿಸಲಾಗಿದ್ದು, ಅದರಂತೆ ಜಿಲ್ಲೆಯಲ್ಲಿ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಪಾಲಿಕೆಯ ಆಯುಕ್ತರು, ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸಾರ್ವಜನಿಕ ಸಮಾರಂಭ ಆಚರಣೆಗಳು, ಮನಾರಂಜನೆ ಕಾರ್ಯಕ್ರಮಗಳಿಗೆ ಜನರ ಒಗ್ಗೂಡುವಿಕೆಗೆ ಪಾಸ್ಗಳನ್ನು ವಿತರಿಸಲು ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿದೆ.
ಪಾಸ್ಗಳನ್ನು ವಿತರಿಸಲು ನಿರ್ದೇಶಿಸಿರುವ ಅಧಿಕಾರಿಗಳು ಆಚರಣೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಹುದಾದ ಜನರ ಸಂಖ್ಯೆಗೆ ಅನುಗುಣವಾಗಿ ಅಥವಾ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿಗಳನ್ವಯ, ಆಹ್ವಾನಿತರ ವಿವರಗಳನ್ನು ಪಡೆದು ಪಾಸ್ ಗಳನ್ನು ವಿತರಿಸಿ ಕೋವಿಡ್ ಸಮುಚಿತ ವರ್ತನೆಗೆ ಬದ್ಧರಾಗಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಬೇಕು ಎಂದು ತಿಳಿಸಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೋವಿಡ್ ಮಾರ್ಗಸೂಚಿಗಳ ಪಾಲನೆಯಾಗುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವುದು ಹಾಗೂ ತಪ್ಪಿದ್ದಲ್ಲಿ ಕಾರ್ಯಕ್ರಮ ಆಯೋಜಕರು, ಆವರಣ ಮಾಲಕರ ವಿರುದ್ಧ ಜಿಲ್ಲಾಡಳಿತದ ಆದೇಶದನ್ವಯ ದಂಡ ವಿಧಿಸುವ ಆದೇಶವನ್ನು ಹೊರಡಿಸಲಾಗಿದೆ.