ಕುಂದಾಪುರ ,ಏ 19 (DaijiworldNews/MS): ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತ ಸಮಿತಿಯ ವತಿಯಿಂದ ಶನಿವಾರ ನಡೆದ ಸಾರ್ವಜನಿಕ ಸಭೆಯ ಹಕ್ಕೋತ್ತಾಯಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಹಾಯಕ ಆಯುಕ್ತರಾದ ಕೆ.ರಾಜು ಅವರ ಮೂಲಕ ಎ.19ರಂದು ಸಲ್ಲಿಸಲಾಯಿತು.
ಕುಂದಾಪುರದ ಬಹುಕಾಲದಿಂದ ಬಾಕಿಯಿದ್ದ ಕುಂದಾಪುರ ಶಾಸ್ತ್ರಿ ಸರ್ಕಲ್ನ ಪ್ಲೈವೋವರ್ ಕಾಮಗಾರಿ ಬಹುತೇಕ ಮುಗಿದಿದ್ದು ಸಂಚಾರಕ್ಕೆ ತೆರೆದುಕೊಳ್ಳುವುದರಲ್ಲಿದೆ. ಇದು ಶ್ಲಾಘನೀಯವಾದರೂ ಇದನ್ನೇ ನೆಪವಾಗಿಟ್ಟುಕೊಂಡು ಹೆದ್ದಾರಿಗೆ ಸಂಬಂಧಿಸಿದಂತೆ ಎಲ್ಲಾ ಕಾಮಗಾರಿಗಳು ಮುಗಿದಿದೆ ಎಂದು ಬಿಂಬಿಸುವ ಪ್ರಯತ್ನವನ್ನು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿಯು ಮಾಡುತ್ತಿದ್ದು ಇದು ನಿಜಕ್ಕೂ ಆತಂಕದ ವಿಷಯವಾಗಿದೆ. ಹೆದ್ದಾರಿಗೆ ಸಂಬಂಧಿಸಿದ ಅವ್ಯವಸ್ಥೆಗಳನ್ನು ಮತ್ತು ಅಪೂರ್ಣ ಕಾಮಗಾರಿಗಳನ್ನು ಪೂರ್ತಿಗೊಳಿಸದೆ ನವಯುಗ ಕಂಪೆನಿಯು ಇಲ್ಲಿಂದ ನಿರ್ಗಮಿಸುವುದಾಗಲಿ ಅಥವಾ ಈ ಅವ್ಯವಸ್ಥೆ ಮತ್ತು ಅಪೂರ್ಣ ಕಾಮಗಾರಿಗಳಿಗೆ ತಾವು ಹೊಣೆಯಲ್ಲ ಎಂದು ನುಣುಚಿಕೊಳ್ಳುವುದಾಗಲಿ ಆಗಕೂಡದು ಎಂದು ಮನವಿಯಲ್ಲಿ ಉಲ್ಲೇಖಿಸಿಲಾಗಿದೆ.
ಪ್ಲೈಒವರ್ ಮತ್ತು ಎಂಬ್ಯಾಂಕ್ಮೆಂಟ್ನ ಎರಡೂ ಇಳಿಜಾರುಗಳಲ್ಲಿ ಮಳೆಗಾಲದಲ್ಲಿ ಹರಿದು ಬರುವ ನೀರು ಬೊಬ್ಬರ್ಯನ ಕಟ್ಟೆ ಮತ್ತು ಪಿಡಬ್ಲ್ಯೂಡಿ ಕಛೇರಿಯ ಎದುರು ಶೇಖರಣೆಯಾಗಿ ಅಲ್ಲಿಂದ ಸರ್ವಿಸ್ ರಸ್ತೆಯ ಮೇಲೆ ಹರಿದು ಬಂದು ತದನಂತರ ಚರಂಡಿಗೆ ಸೇರಬೇಕಾಗಿದೆ ಇದು ವೈಜ್ಞಾನಿಕವೇ? ಸರ್ವಿಸ್ ರಸ್ತೆಯಲ್ಲಿ ನೀರು ಜಮೆಯಾಗಿ ಮಳೆಗಾಲದಲ್ಲಿ ಕೆರೆಗಳಂತಾಗಿ ವಾಹನ ಸಂಚಾರಕ್ಕೆ ತೀರ ಅಡ್ಡಿಯಾಗುತ್ತದೆ. ದಾರಿಹೋಕರ ಮೈಗೆ ನೀರು ಎಸೆಯಲ್ಪಡುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರವೇನು? ತೀರಾ ಅಸ್ತವ್ಯಸ್ತವಾಗಿರುವ ಕುಂದಾಪುರದ ಹೆಬ್ಬಾಗಿಲು ಶಾಸ್ತ್ರೀ ಸರ್ಕಲ್ನ ಸುತ್ತ ಸರ್ವಿಸ್ ರಸ್ತೆಯ ಗೊಂದಲ ಮುಗಿದಿಲ್ಲ. ಇಲ್ಲಿ ಸರ್ವಿಸ್ ರಸ್ತೆಯ ವ್ಯಾಪ್ತಿ ಎಷ್ಟು? ಕುಂದಾಪುರಕ್ಕೆ ಮೆರುಗು ನೀಡುತ್ತಿದ್ದ ಶಾಸ್ತ್ರೀ ಸರ್ಕಲ್ ಈಗ ತೀರಾ ವಿರೂಪಗೊಂಡಿದೆ. ಈ ಶಾಸ್ತ್ರೀ ಸರ್ಕಲ್ನ ಮುಂದಿನ ವಿನ್ಯಾಸವೇನು ಮತ್ತು ಇದನ್ನು ನವೀಕರಿಸುವ ಹೊಣೆ ಯಾರದ್ದು? ಹಲವು ಕಡೆ ಪಾದಚಾರಿಗಳು ಸುರಕ್ಷಿತವಾಗಿ ನಡೆದು ಹೋಗಲು ಫುಟ್ಪಾತ್ಗಳಿಲ್ಲ ಇವುಗಳ ನಿರ್ಮಾಣ ಯಾವಾಗ ಪೂರ್ತಿಗೊಳ್ಳುತ್ತದೆ? ಸಂಗಮ್ನಿಂದ ಕೋಟೇಶ್ವರದ ತನಕ ಎಲ್ಲೆಲ್ಲಿ ಡಿವೈಡರ್ ಕ್ರಾಸಿಂಗ್ ನೀಡಲಾಗುತ್ತದೆ? ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ವಾಹನಗಳು ಬರುವಾಗ ಇರಬೇಕಾದ ವೈಜ್ಞಾನಿಕವಾದ ಮಾನದಂಡಗಳನ್ನು ಅನುಸರಿಸಲಾಗಿದೆಯೇ? ಶಾಲೆ, ಪೋಲೀಸ್ ಕಛೇರಿ ಸಹಿತ 17 ಕಛೇರಿಗಳಿರುವ ಬೊಬ್ಬರ್ಯನ ಕಟ್ಟೆ ಬಳಿ ರಸ್ತೆ ದಾಟುವುದು ಹೇಗೆ? ಎನ್ನುವ ಪ್ರಶ್ನೆಗಳನ್ನು ಸಮಿತಿ ಜಿಲ್ಲಾಧಿಕಾರಿಗಳ ಮುಂದಿಟ್ಟಿದೆ.
ಈ ಸಮಸ್ಯೆಗಳಿಗೆ ಪರಿಹಾರವೇನು? ಈ ಸಮಸ್ಯೆಗಳಿಂದ ಕುಂದಾಪುರ ಮುಕ್ತವಾಗುವುದು ಯಾವಾಗ? ಮತ್ತು ಈ ಸಮಸ್ಯೆಗಳು ಹಾಗೆಯೇ ಮುಂದುವರಿದರೆ ಕುಂದಾಪುರದ ಸಾರ್ವಜನಿಕರು ಇವುಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಸ್ವತಃ ಜಿಲ್ಲಾಧಿಕಾರಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಒಂದು ವಾರದ ಒಳಗೆ ಸ್ಥಳಕ್ಕೆ ಬಂದು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಣೇಶ್ ಪುತ್ರನ್ ಹೋರಾಟ ಸಮಿತಿಯಿಂದ ಶನಿವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಒಂದಷ್ಟು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವು. ಅದನ್ನು ಉಪ ಕಮೀಷನರ್ ಅವರಿಗೆ ಮನವಿ ಮೂಲಕ ಸಮಸ್ಯೆಗಳನ್ನು ತಿಳಿಸಿದ್ದೇವೆ. ಇದಕ್ಕೆ ಎಸಿಯವರು ೭-೮ ದಿನದೊಳಗೆ ಹೆದ್ದಾರಿಯ ಎಂಜಿನಿಯರ್, ನವಯುಗ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಪರಿಶೀಲನೆ ನಡೆದಿದ್ದರೆ ಬರುವ ಸೋಮವಾರ ಮತ್ತೆ ಮನವಿ ನೀಡುತ್ತೇವೆ ಎಂದು ನುಡಿದರು.
ಈ ಸಂದರ್ಭ ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಹೋರಾಟ ಜಾಗೃತ ಸಮಿತಿಯ ಸಂಚಾಲಕ ಕೆಂಚನೂರು ಸೋಮಶೇಖರ ಶೆಟ್ಟಿ, ಬಿ.ಕಿಶೋರ್ ಕುಮಾರ್ ಬಿ., ರೈಲ್ವೆ ಹೋರಾಟ ಸಮಿತಿಯ ಗಣೇಶ ಪುತ್ರನ್, ವಿವೇಕ್ ನಾಯಕ್, ಜೋಯ್ ಕರ್ವೇಲ್ಲೊ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ನ್ಯಾಯವಾದಿ ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ ಕಾವೇರಿ ಮೊದಲಾದವರು ಉಪಸ್ಥಿತರಿದ್ದರು.