ಉಡುಪಿ, ಏ.19 (DaijiworldNews/MB) : ಗಂಭೀರ ಪರಿಸ್ಥಿತಿಯಲ್ಲಿದ್ದ ಅಪರಿಚಿತ ಯುವಕನನ್ನು ರಕ್ಷಿಸಿ, ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಯಶಸ್ವಿಯಾಗಿದ್ದು ಅವರ ಈ ಮಾನವೀಯ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಕಾಲು ಮುರಿತಕ್ಕೆ ಒಳಪಟ್ಟಿದ್ದ ಅಪರಿಚಿತ ಯುವಕನೊರ್ವ, ಚಿಕಿತ್ಸೆ ಪಡೆಯಲಾಗದೆ ತೆವಳಿಕೊಂಡು ಸಾಗುತ್ತ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಭೀರ ಸ್ಥಿತಿಯಲ್ಲಿ ದಿನ ಕಳೆಯುತ್ತಿದ್ದನು. ಈ ಬಗ್ಗೆ ಮಾಹಿತಿ ಪಡೆದ ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ಅವರು, ಯುವಕನನ್ನು ರಕ್ಷಿಸಿ, ಚಿಕಿತ್ಸೆಗೆ ಒಳಪಡಿಸಿದ್ದರು.
ಯುವಕ ತಾನು ಕಟ್ಟಡದ ಎರಡನೇ ಮಹಡಿಯಿಂದ ಆಯಾತಪ್ಪಿ ಬಿದ್ದು ಕಾಲು ಮುರಿದಿದ್ದು ತನಗೆ ತನ್ನವರು ಯಾರು ಇಲ್ಲ ಎಂದು ವಿಶು ಶೆಟ್ಟಿ ಅವರಲ್ಲಿ ಹೇಳಿಕೊಂಡಿದ್ದ.
ವೈದ್ಯರು ಈ ಯುವಕನಿಗೆ ಮೂರು ತಿಂಗಳು ವಿಶ್ರಾಂತಿಯ ಅವಶ್ಯಕತೆ ಇದೆ. ಮಲಗಿದಲ್ಲಿಯೇ ಇರಬೇಕು. ಕಾಲು ಊರಿದರೆ ಪುನಃ ಕಾಲಿಗೆ ತೊಂದರೆ ಉಂಟಾಗಲಿದೆ ಎಂದು ತಿಳಿಸಿದ್ದರು. ಗಾಯಾಳುವಿಗೆ ಆಶ್ರಯ, ಔಷದೋಪಚಾರ, ಆಹಾರ ನೀಡಲು ಸಹಾಯಕರು ಬೇಕು. ಸರಿಯಾದ ಸೇವೆ ಸಿಗದಿದ್ದರೆ ಯುವಕನ ಭವಿಷ್ಯ ಹಾಳಾಗುವುದು ಖಚಿತ ಎಂದು ಮನಗೊಂಡು ವಿಶುಶೆಟ್ಟಿ ಅವರು ಮೂರು ತಿಂಗಳ ರಕ್ಷಣಾ ಜವಬ್ದಾರಿ ತಾವೇ ಹೊತ್ತು, ಕುಂದಾಪುರದ ಖಾಸಾಗಿ ಚೈತನ್ಯ ಆಶ್ರಮಕ್ಕೆ ದಾಖಲಿಸಿದ್ದರು.
ಪ್ರಸ್ತುತ ಯುವಕ ಸಂಪೂರ್ಣ ಗುಣಮುಖನಾಗಿದ್ದು ತನ್ನ ವೃತ್ತಿ ಬದುಕು ನಿಭಾಯಿಸಲು ಶಕ್ತನಾಗಿದ್ದಾನೆ. ಚೈತನ್ಯ ಆಶ್ರಮದಿಂದ ಬಿಡುಗಡೆ ಪಡೆದಿದ್ದಾನೆ.
ವಿಶು ಶೆಟ್ಟಿ ಅವರು ಯುವಕನನ್ನು ಸಮಾಜದ ಮುಖ್ಯವಾಹಿನಿಗೆ ತರಲು 30 ಸಾವಿರ ರೂಪಾಯಿ ವ್ಯಯಗೊಳಿಸಿದ್ದಾರೆ. ನಿವೃತ್ತ ಬ್ಯಾಂಕ್ ಅಧಿಕಾರಿ ಸತೀಶ್ ಶೆಟ್ಟಿ ಅಂಬಲಪಾಡಿ 10 ಸಾವಿರ, ಉದ್ಯಾವರದ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು 5 ಸಾವಿರ ನೀಡಿ ಸಹಕರಿಸಿದರು.
ವಿಶು ಶೆಟ್ಟಿ ಅವರು ನನ್ನ ಮೇಲೆ ಕರುಣೆ ತೋರಿದರಿಂದ ನಾನು ಬದುಕುಳಿದೆ. ಇಲ್ಲದಿದ್ದರೆ ನಾನು ಶಾಶ್ವತ ಅಂಗವಿಕಲ ಆಗಬೇಕಾಗಿತ್ತು. ಅವರು ಮಾಡಿರುವ ಸಹಾಯಕ್ಕೆ ನಾನು ಚಿರಋಣಿಯಾಗಿದ್ದೆನೆಂದು ಯುವಕ ಹೇಳಿಕೊಂಡಿದ್ದಾನೆ.
ಚೈತನ್ಯ ಆಶ್ರಮದ ಸಂಚಾಲಕರು ಗಾಯಾಳುವಿಗೆ ಮುತುವರ್ಜಿಯಿಂದ ಸೇವೆ ಒದಗಿಸಿದ್ದು ಅವರಿಗೆ ವಿಶು ಶೆಟ್ಟಿ ಅವರು ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.