ಉಡುಪಿ, ಎ.19 (DaijiworldNews/PY): ಉಡುಪಿ ಶಾಸಕ ರಘುಪತಿ ಭಟ್ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರ ಹೇರಿದ ನಿಷೇಧವನ್ನು ಹಿಂಪಡೆಯಿರಿ ಎನ್ನುವ ಹೇಳಿಕೆಯ ಬೆನ್ನಲ್ಲೇ ಉಡುಪಿಯ ನಾಗರಿಕರಿಂದ ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ.
"ಶಾಸಕರ ಈ ನಿಲುವು ಸರಿಯಾದುದ್ದಲ್ಲ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಾಜಕೀಯ ಕಾರ್ಯಕ್ರಮಗಳು ಮತ್ತು ಮದುವೆಗಳ ಸಂಭ್ರಮ ಇದೇ ರೀತಿ ಮುಂದುವರಿದರೆ ಕೊರೊನಾ ಹೆಚ್ಚಾಗುವುದು ಖಂಡಿತ. ಆಗ ವೈದ್ಯಕೀಯ ಸೌಲಭ್ಯಗಳು ಸರಿಯಾಗಿ ಸಿಗದೇ ಇದ್ದಲ್ಲಿ ಹಲವು ಮಂದಿ ಸಾಯುವುದು ಖಚಿತ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯ ಹಾಸಿಗೆಗಳು ಹಾಗೆಯೇ ಶವಾಗಾರ ಮತ್ತು ಸ್ಮಶಾನ ಇಲ್ಲಿ ತಕ್ಕ ವ್ಯವಸ್ಥೆಯನ್ನು ಮಾಡುವುದು ಕೂಡ ಶಾಸಕರ ಕರ್ತವ್ಯ ಎಂದು ಉಡುಪಿಯ ಖ್ಯಾತ ಮನೋವೈದ್ಯ ಡಾ. ಪಿ.ವಿ ಭಂಡಾರಿ ಎಂದಿದ್ದಾರೆ.
"ಶಾಸಕರ ಈ ಮಾತುಗಳನ್ನು ನಾನು ವಿರೋಧಿಸುತ್ತೇನೆ. ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಾಗಿ ವಯಸ್ಸಾದವರು ಹಾಗೂ ಸಕ್ಕರೆ ಕಾಯಿಲೆ, ಬಿ.ಪಿ, ಹೃದಯ ರೋಗ ಮುಂತಾದ ಸಮಸ್ಯೆ ಇರುವವರು ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಅವರಿಗೆ ಸಮಸ್ಯೆಗಳು ಹೆಚ್ಚಾಗುತ್ತವೆ. ಆದ್ದರಿಂದ ಶಾಸಕರು ಈ ಕೂಡಲೇ ಈ ರೀತಿಯ ಹೇಳಿಕೆಯನ್ನು ನಿಲ್ಲಿಸುವುದು ಒಳ್ಳೆಯದು. ರಾತ್ರಿ ಕರ್ಪ್ಯೂ ಬಗ್ಗೆ ಅವರ ನಿಲುವು ಸರಿಯಾಗಿದೆ. ಈ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸಕಾರಾತ್ಮಕ ನಾಯಕತ್ವ ಅವರಿಂದ ಅಪೇಕ್ಷಿಸುತ್ತೇನೆ" ಎಂದು ಉಡುಪಿಯ ಖ್ಯಾತ ಮನೋವೈದ್ಯ ಡಾ. ಪಿ.ವಿ ಭಂಡಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಮಣಿಪಾಲ ಬಫರ್ ಜೋನ್ನಲ್ಲಿರುವವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ 40 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಅಲ್ಲದೆ ಕೆಮ್ಮಣ್ಣಿನ ಒಂದು ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಇರುವುದು ಖಚಿತವಾಗಿದೆ. ಅಲ್ಲದೆ ಹೊರ ರಾಜ್ಯ ಮತ್ತು ಹೊರ ದೇಶಕ್ಕೆ ಹೋಗುವ ಉದ್ದೇಶಕ್ಕೆ ಕೊರೊನಾ ಪರೀಕ್ಷೆ ಮಾಡಿದವರಲ್ಲಿ ಎಪ್ರಿಲ್ 18ರ ರವಿವಾರದಂದು ದೊರೆತ ವರದಿಯಲ್ಲಿ ಒಟ್ಟು 13 ಮಂದಿಗೆ ಪಾಸಿಟಿವ್ ಪತ್ತೆಯಾಗಿದೆ.
ಎಪ್ರಿಲ್ 1ರಿಂದ ಎಪ್ರಿಲ್ 16ರವರೆಗೆ ನಡೆಸಿದ ಕೊರೊನಾ ತಪಾಸಣೆ ಹಾಗೂ ಪಾಸಿಟಿವ್ ಪತ್ತೆಯಾದ ಅಂಕಿ -ಅಂಶಗಳ ಪ್ರಕಾರ, 0-14 ವರ್ಷ ವಯಸ್ಸಿನವರ ಪೈಕಿ ಒಟ್ಟು 2,873 ಮಂದಿಗೆ ತಪಾಸಣೆ ನಡೆದಿದ್ದು, ಇದರಲ್ಲಿ 111 ಮಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 15-24 ವರ್ಷ ವಯಸ್ಸಿನವರ ಪೈಕಿ 12,632 ಮಂದಿಯ ತಪಾಸಣೆ ಮಾಡಿದ್ದು, ಈ ಪೈಕಿ 363 ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 25-49 ವಯಸ್ಸಿನ 12,377 ಮಂದಿಗೆ ನಡೆಸಿದ ತಪಾಸಣೆಯ ಪೈಕಿ 498 ಮಂದಿಗೆ ಸೋಂಕು ತಗುಲಿದೆ. 50 ವರ್ಷ ಹಾಗೂ ಮೇಲ್ಪಟ್ಟವರ ಪೈಕಿ 10,492 ಮಂದಿಗೆ ತಪಾಸಣೆ ನಡೆಸಿದಿದ್ದು, 383 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಮಾರ್ಚ್ 1ರಿಂದ ಎಪ್ರಿಲ್ 13 ರವರೆಗೆ ವಯೋಮಾನವಾರು ಶೇಕಡಾ ಲೆಕ್ಕದಲ್ಲಿ, ಶೇ 5.43ರಷ್ಟು 0-14 ವಯೋಮಾನದವರಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದರೆ, ಶೇ 50.40 ರಷ್ಟು 15-24 ಪ್ರಾಯದವರಲ್ಲಿ ಕಂಡು ಬರುತ್ತಿದೆ. ಶೇ 24.89 ರಷ್ಟು 25-49 ಪ್ರಾಯದವರಲ್ಲಿ ಕೊರೊನಾ ಸೋಂಕು ಪತ್ತೆಯಾದರೆ, ಶೇ 19.28 ರಷ್ಟು 50 ಮತ್ತು ಮೇಲ್ಪಟ್ಟವರಿಗೆ ಸೋಂಕು ಪತ್ತೆಯಾಗಿದೆ.
ಈಗಾಗಲೇ ಉಡುಪಿ ಜಿಲ್ಲೆಯ ಕೊರೊನಾ ವರದಿಯನ್ನು ಗಮನಿಸಿದರೆ ಒಂದು ಸಂಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡುವವರಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ವರದಿಯ ಪ್ರಕಾರ, ಮಾರ್ಚ್ನಲ್ಲಿ ವಿದ್ಯಾರ್ಥಿಗಳಲ್ಲಿ ಹೆಚ್ಚು ಪ್ರಕರಣ ಕಂಡುಬಂದಿದ್ದು, ಈಗ ಹಿರಿಯ ನಾಗರಿಕರು ಸೋಂಕಿಗೊಳಗಾಗುತ್ತಿದ್ದಾರೆ ಎನ್ನುವುದು ಅಪಾಯಕಾರಿ ಸಂಗತಿ. ಹಾಗಾಗಿ ಹಿರಿಯರು ಲಸಿಕೆ ಪಡೆಯುವುದು ಉತ್ತಮ. ಇದು ರೋಗ ನಿರೋಧಕ ಶಕ್ತಿಯನ್ನು ತುಂಬುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ಸಾರ್ವಜನಿಕರು ತಮ್ಮ ಆರೋಗ್ಯದ ರಕ್ಷಣೆಯನ್ನು ತಾವಾಗಿಯೇ ಮಾಡಿಕೊಳ್ಳಬೇಕಾಗಿದೆ. ಸ್ವಲ್ಪ ಎಡವಿದರೂ ಕೊರೊನಾದ ಎರಡನೇ ಅಲೆಗೆ ಬಲಿಯಾಗಬೇಕಾದೀತು.