ಉಡುಪಿ, ಏ.19 (DaijiworldNews/MB) : ಉಡುಪಿ ಜಿಲ್ಲೆಯ ಕೊಡವೂರು ಗ್ರಾಮದಲ್ಲಿ ಈ ಹಿಂದೆ ಬಸದಿ ಇದ್ದ ಜಾಗದಲ್ಲಿ ಅಕ್ರಮವಾಗಿ ಕಟ್ಟಲಾಗಿದೆ ಎಂದು ಹೇಳಲಾಗುತ್ತಿರುವ ಒಂದು ಮಸೀದಿ ಈಗ ವಿವಾದಕ್ಕೆ ಸಿಲುಕಿದೆ. ಇದು ಕಂದಾಯ ಇಲಾಖೆಯ ಅಧಿಕಾರಿಗಳ ಮಾಡಿದ ಕಾನೂನು ಬಾಹಿರ ಕೆಲಸ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ಜೈನ ಬಸದಿಯಾಗಿದ್ದ ಈ ಪ್ರದೇಶ ಈಗ ಮುಸಲ್ಮಾನರ ಅತಿಕ್ರಮಣದಿಂದಾಗಿ ಕಲ್ಮತ್ ಮಸೀದಿಯಾಗಿ ಬದಲಾಗಿದೆ ಎಂಬುದು ಸ್ಥಳಿಯರ ಆರೋಪವಾಗಿದೆ.
ಹೊರ ಪ್ರದೇಶದ ಕೆಲ ಅಪರಿಚಿತರು ಗ್ರಾಮಸ್ಥರ ವಿರೋಧದ ನಡುವೆಯೂ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡ ಕಟ್ಟಿದ್ದು ಅದರ ಪಕ್ಕದಲ್ಲೇ ಗ್ರಾಮದ ಪಂಚದೂಮಾವತಿ ದೈವಸ್ಥಾನ ಇರುವ ಹಿನ್ನೆಲೆ ಈ ಭೂಮಿ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಹಲವು ದಶಕಗಳಿಂದ ಘರ್ಷಣೆಯಿದೆ. ಈ ಹಿನ್ನೆಲೆ ಪೋಲೀಸರ ಒಂದು ವಾಹನ ಇಲ್ಲಿ ಖಾಯಂ ಆಗಿ ನಿಂತಿರುತ್ತದೆ. ಈ ಗ್ರಾಮದಲ್ಲಿ ಮುಸ್ಲಿಮ್ ಸಮಾಜದ ಮೂರು ಮನೆಗಳಿದ್ದರೂ ಅವರು ಈ ಅಕ್ರಮ ಕಟ್ಟಡಕ್ಕೆ ಬರಲ್ಲ. ಬೇರೆ ಪ್ರದೇಶದಿಂದ ಬಂದಿರುವವರೇ ಅಶಾಂತಿ ಸೃಷ್ಟಿಸಿದ್ದಾರೆ ಎಂದು ಈ ಗ್ರಾಮದ ಜನರು ದೂರಿದ್ದಾರೆ.
ಕಟ್ಟಡ ಅಕ್ರಮವಾಗಿದ್ದು ಡೋರ್ ನಂಬರ್ ಕೂಡಾ ಇಲ್ಲ. ಅಷ್ಟೇ ಅಲ್ಲದೆ ಬೋರ್ಡಿನ ಸರ್ಟಿಫಿಕೇಟ್ ಒಂದನ್ನು ಕೋರ್ಟ್ಗೆ ನೀಡಿ ಇದು ರಾಜ-ಮಹಾರಾಜರ ಕಾಲದಿಂದಲೂ ನಮ್ಮ ಬಳಿ ಇತ್ತು ವಾದಿಸಲು ಮುಂದಾಗಿದ್ದರು. ಆದರೆ ಕೋರ್ಟ್ ಸರ್ಟಿಫಿಕೇಟ್ ನಕಲಿ ಎಂದು ಹೇಳಿದೆ ಎಂದೂ ಗ್ರಾಮಸ್ಥರು ಹೇಳಿದ್ದಾರೆ.
ಪ್ರಸ್ತುತ ಈ ಜಾಗದ ವಿವಾದ ಸ್ಥಳೀಯ ನ್ಯಾಯಾಲಯ ಮತ್ತು ಮೈಸೂರಿನ ವಖ್ಫ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಆದರೆ ಏತನ್ಮಧ್ಯೆ ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಈ 67 ಸೆನ್ಸ್ ಭೂಮಿಯನ್ನು ಕಲ್ಮತ್ ಮಸೀದಿ ಆಡಳಿತ ಮಂಡಳಿಗೆ ವರ್ಗಾಯಿಸಿದ್ದಾರೆ. ದೈವಸ್ಥಾನದ ಜಾಗವನ್ನು ಸೇರಿಸಿ ಪೂರ್ತಿ ವಿವಾದಿತ ಪ್ರದೇಶವನ್ನೇ ಮಸೀದಿ ಹೆಸರಿಗೆ ವರ್ಗಾಯಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೃತ್ಯವನ್ನು ಈ ಹಿಂದಿನ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಸೇರಿ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಪ್ರಸ್ತುತ ಜಿಲ್ಲಾಧಿಕಾರಿ ಅವರು ತಪ್ಪನ್ನು ಸರಿಪಡಿಸಿ ಈ ಅಧಿಸೂಚನೆಯನ್ನು ರದ್ದುಪಡಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಕಲ್ಮತ್ ಅಡಳಿತ ಮಂಡಳಿಯ ಅಧ್ಯಕ್ಷರಾದ ಉಸ್ಮಾನ್ ಸಾಹೇಬ್, "ಈ ಕಟ್ಟಡ ಟಿಪ್ಪು ಕಾಲದಲ್ಲಿ ಕಟ್ಟಿದ್ದು. 1908 ರಿಂದ ಸರಕಾರದಿಂದ ತಸ್ದೀಕ್ ಬರುತಿತ್ತು. ಇಂದಿಗೂ ಪ್ರತೀ ನಾಲ್ಕು ತಿಂಗಳಿಗೊಮ್ಮ ತಸ್ದೀಕ್ ಬರುತ್ತದೆ. ಸರಕಾರದ ಮಾನ್ಯತೆಯೂ ಪಡೆದಿದೆ. ಕೆಲ ವರ್ಷ ಈ ಮಸೀದಿ ಮುಚ್ಚಿತ್ತು. ಈ ಜಾಗಕ್ಕೆ ಸರ್ವೇ ನಂಬರ್ (53/6) ಕೂಡ ಸಿಕ್ಕಿದೆ. 2018 ನಲ್ಲಿ ವಕ್ಫ್ ಆಸ್ತಿ ಇದನ್ನು ಗಜೆಟ್ ನೋಟಿಫಿಕೇಶನ್ಗಾಗಿ 2018ರಲ್ಲಿ ವಕ್ಫ್ ಸಚಿವಾಲಯಕ್ಕೆ ಕಳುಹಿಸಲಾಯಿತು. 2020ರಲ್ಲಿ ಗಜೆಟ್ ನೋಟಿಫಿಕೇಶನ್ ಆಯ್ತು. 2021 ಜನವರಿಯಂದು ಸರಕಾರಿ ಭೂಮಿ ಇದ್ದದ್ದು ಮಸೀದಿಯ ಹೆಸರಿಗೆ ಆರ್ಟಿಸಿ ಸಿಕ್ಕಿತು. ಆದರೆ ಸ್ಥಳೀಯರು ಬೇರೆ ಬೇರೆ ಕಾರಣ ಹೇಳಿ ಮಸೀದಿ ಪ್ರಾರ್ಥನೆಗೆ ಬಾರದಂತೆ ತಡೆಯೊಡ್ಡುತ್ತಿದ್ದಾರೆ. ಅಲ್ಲದೆ ಕಟ್ಟಡ ಕೆಡವುದರ ಬಗ್ಗೆ ಹೋರಾಟ ಸಮಿತಿಯಲ್ಲಿ ಬೆದರಿಕೆ ಹಾಕಿದ್ದಾರೆ. ಇಲ್ಲಿ ಕಳೆದ 40 ವರ್ಷಗಳಿಂದ ಇಪ್ತಾರ್, ನಮಾಜ್ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. 67 ಸೆಂಟ್ಸ್ ಜಾಗದ ಒಳಗೆ ಹಿಂದು ಭಕ್ತರು ಧಾರ್ಮಿಕ ಕಾರ್ಯಕ್ರಮ ಮಾಡುತ್ತಿದ್ದಾರೆ. ಅದನ್ನು ನಾವು ತಡೆಯುವುದಿಲ್ಲ. ನಮಗೂ ಪ್ರಾರ್ಥನೆಗೆ ಸಮಿತಿ ಅಡ್ಡಿ ಪಡಿಸಬಾರದು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆಗೆ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ಸ್ಥಳೀಯ ನಗರಸಭ ಸದಸ್ಯ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಸ್ಥಳೀಯರು ಯಾರೂ ಈ ಮಸೀದಿಯಲ್ಲಿ ಪ್ರಾರ್ಥಿಸಲ್ಲ. ದೂರದಿಂದ ಬಂದು ಪ್ರಾರ್ಥನೆ ಮಡುತ್ತಾರೆ. ಅಲ್ಲದೆ ಅವರಿಂದ ಸ್ಥಳೀಯ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಇಲ್ಲಿ ಜೈನ ಬಸದಿ ಇತ್ತು. ಈವರೆಗೆ ಯಾವುದೇ ಆರ್ಟಿಸಿ ಇಲ್ಲದ ಸರಕಾರಿ ಭೂಮಿ ಜನವರಿ 2021 ರಿಂದ ಮಸೀದಿಯ ಆಡಳಿತ ಸಮಿತಿಯ ಪಾಲಾಗಿದೆ. ಇದು ಕಾನೂನು ಬಾಹಿರ. ಈ ವಿವಾದ ಸರಿಯಾಗದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಜಿಲ್ಲಾಧಿಕಾರಿ ಜಿ ಜಗದೀಶ್ ಮಾತನಾಡಿ, ಈ ವಿವಾದ ನನ್ನ ಗಮನಕ್ಕೆ ಬಂದ ನಂತರ, ಆ ಜಾಗ ವಕ್ಫ್ ಬೋರ್ಡಿಗೆ ಸೇರಿದ್ದಲ್ಲ. ಜಾಗವನ್ನು ಡಿ-ನೋಟಿಪೈ ಮಾಡಿ ಎಂದು ಸರಕಾರಕ್ಕೆ ಪತ್ರ ಬರೆದಿದ್ದೇನೆ. ಈಗ ಡಿನೋಟಿಪೈ ಪ್ರಕ್ರಿಯೆ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.
ಕಂದಾಯ ಇಲಾಖೆಯಡಿ ಬರುವ ಈ ಜಾಗ ವಿವಾದಕ್ಕೆ ಸಿಲುಕಿ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಮುನ್ನ ಸಂಬಂಧ ಪಟ್ಟ ಇಲಾಖೆ ಒಂದು ತೀಮಾನಕ್ಕ ಬರಬೇಕು. ಸೌಹಾರ್ದಯುತವಾಗಿ ಕಾನೂನಾತ್ಮಕ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯ.