ಉಡುಪಿ ಏ 19 (DaijiworldNews/MS): "ಪ್ರಾದೇಶಿಕ ಭಾಷೆಗಳ ಬೆಳವಣಿಗೆಯು ಈ ಮಣ್ಣಿನ ಸಂಸ್ಕೃತಿ, ಆಚಾರ -ವಿಚಾರಗಳನ್ನು ಉಳಿಸಿ, ಬೆಳೆಸಲು ಪೂರಕವಾಗಬಲ್ಲದು. ಸಾವಿರಾರು ವರ್ಷಗಳ ಇತಿಹಾಸವಿರುವ, ಪಂಚದ್ರಾವಿಡ ಭಾಷೆಗಳಲ್ಲೇ ಅತ್ಯಂತ ಶ್ರೇಷ್ಠ ಭಾಷೆಯೆಂದು ಪರಿಗಣಿಸಲ್ಪಟ್ಟಿರುವ ತುಳು ಭಾಷೆಯ ಬೆಳವಣಿಗೆಗೆ ತಾನು ಸಂಪೂರ್ಣ ಸಹಕಾರ ನೀಡುತ್ತೇನೆ" ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭರವಸೆ ನೀಡಿದ್ದಾರೆ.
ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಆಕಾಶರಾಜ್ ಜೈನ್ ಅವರು ನೀಡಿದ ತುಳು ಲಿಪಿಯ ನಾಮಫಲಕ ಸ್ವೀಕರಿಸಿ ಮಾತನಾಡಿದರು. ಈ ವೇಳೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆಯಾದ ತಾರಾ ಉಮೇಶ್ ಆಚಾರ್ಯ ಇವರು ಉಡುಪಿ ಜಿಲ್ಲೆಯಲ್ಲಿ ಕನ್ನಡ ನಾಮಫಲಕದ ಜೊತೆಗೆ ತುಳುಲಿಪಿಯ ನಾಮಫಲಕ ಬಳಕೆಗೆ ಜನರು ಹೆಚ್ಚು ಆಸಕ್ತಿ ತೋರಿಸುತ್ತಿರುವುದರಿಂದ ತುಳುವರಿಗೆ ಮುಕ್ತ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ತುಳು ಭಾಷೆಯು ರಾಜ್ಯದ ಅಧಿಕೃತ ಭಾಷೆಯಾಗಬೇಕು ಮತ್ತು ಉಡುಪಿ ಜಿಲ್ಲೆಯಲ್ಲಿ ತುಳುಭಾಷೆಗೆ ಮಾನ್ಯತೆ ಕೊಡಬೇಕು ಎಂದು ಜೈ ತುಳುನಾಡ್(ರಿ) ಸಂಘಟನೆಯ ಪರವಾಗಿ ತುಳು ಲಿಪಿ ಶಿಕ್ಷಕಿಯಾದ ಅಕ್ಷತಾ ಕುಲಾಲ್ ಇವರು ಮನವಿ ಸಲ್ಲಿಸಿದರು ಮತ್ತು ಜೈ ತುಳುನಾಡ್(ರಿ) ಸಂಘಟನೆಯ ತುಳುಲಿಪಿ ಮೇಲ್ವಿಚಾರಕರಾದ ಶರತ್ ಕೊಡವೂರು ಇವರು ತುಳು ಲಿಪಿ ಕಲಿಕಾ ತರಬೇತಿಯ ಬಗ್ಗೆ ಮತ್ತು ಆನ್ಲೈನ್ ನಲ್ಲಿ ಬಲೆ ತುಳು ಲಿಪಿ ಕಲ್ಪುಗ ಕಾರ್ಯಾಗಾರದಿಂದ ಸುಮಾರು 8000ಕ್ಕೂ ಅಧಿಕ ತುಳುವರು ತುಳು ಲಿಪಿ ಕಲಿತಿರುವ ಬಗ್ಗೆ ಜಿಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಹಳೆ ವಿದ್ಯಾರ್ಥಿ ಸಂಘ , ಕೊಡವೂರು ಅಧ್ಯಕ್ಷರಾದ ಸತೀಶ್ ಕೊಡವೂರು ಇವರು ತುಳು ಲಿಪಿ ಕಲಿತ ಕಾರ್ಯಗಾರದಲ್ಲಿ ತುಳುವರ ಉತ್ತಮ ಸ್ಪಂದನೆ ಇರುವುದಾಗಿ ಮಾಹಿತಿ ನೀಡಿದರು. ತುಳುಕೂಟ ಉಡುಪಿ (ರಿ) ಇದರ ಕಾರ್ಯದರ್ಶಿ, ಗಂಗಾಧರ್ ಕಿದಿಯೂರು,ತುಳುಕೂಟ ಉಡುಪಿ ಯ ಸ್ಥಾಪಕ ಸದಸ್ಯರಾದ ಯು.ಜಿ. ದೇವಾಡಿಗ ಇವರು ತುಳುಕೂಟ ಉಡುಪಿ (ರಿ) ನ ಪರವಾಗಿ ಮನವಿಯನ್ನು ಸಲ್ಲಿಸಿದರು. ಇದೇ ವೇಳೆ ಗಂಗಾಧರ ಕಿದಿಯೂರು ರವರು ತಾವು ಬರೆದು ತುಳುಲಿಪಿಯಲ್ಲೇ ಪ್ರಕಟಿಸಿದ "ಪಿಂಗಾರದ ಬಾಲೆ ಸಿರಿ" ಪುಸ್ತಕವನ್ನು ಜಿಲ್ಲಾಧಿಕಾರಿಗಳಿಗೆ ಗೌರವ ಪ್ರತಿಯಾಗಿ ನೀಡಿದರು. ಈ ಸಂದರ್ಭದಲ್ಲಿ ಜೈ ತುಳುನಾಡ್(ರಿ) ತುಳು ಲಿಪಿ ಶಿಕ್ಷಕರಾದ ಕಿನ್ನು ಭಂಡಾರಿ ಮತ್ತು ಸ್ವಾತಿ ಸುವರ್ಣ ಉಪಸ್ಥಿತರಿದ್ದರು.