ಕಾಸರಗೋಡು, ಏ.18 (DaijiworldNews/MB) : ಹಿರಿಯ ಸಾಹಿತಿ, ಕವಿ, ಕಾದಂಬರಿಕಾರ, ನಟ, ಕಲಾವಿದ ಹಾಗೂ ಬ್ಯಾಂಕ್ ಉದ್ಯೋಗಿ ಆಗಿದ್ದ ಕಾಸರಗೋಡು ಅಶೋಕ್ ಕುಮಾರ್ ಅವರು ಎಪ್ರಿಲ್ 18 ರ ರವಿವಾರದಂದು ನಿಧನರಾಗಿದ್ದಾರೆ.
ಕಳೆದ ಮೂರು ವಾರಗಳಿಂದ ಅವರು ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಪ್ರಿಲ್ 18 ರ ರವಿವಾರದಂದು ನಿಧನರಾಗಿದ್ದಾರೆ.
ಸಿನೆಮಾದಲ್ಲಿ ಹಲವಾರು ನಟರಿಗೆ ಅವಕಾಶವನ್ನು ಒದಗಿಸಿದ್ದ ಅವರು, ನಟನೆ, ನಿರ್ದೇಶನ ಮತ್ತು ಬರವಣಿಗೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡರು.
ಅಶೋಕ್ ತನ್ನ ಉನ್ನತ ಪ್ರಾಥಮಿಕ ಶಿಕ್ಷಣವನ್ನು ಕಾಸರಗೋಡು ಸರ್ಕಾರಿ ಶಾಲೆಯಲ್ಲಿ ಪಡೆದಿದ್ದು ಬಿಇಎಂ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ಕಾಸರಗೋಡಿನ ಸರ್ಕಾರಿ ಕಾಲೇಜಿನಲ್ಲಿ ಬಿಎಸ್ಸಿ ಪಡೆದ ಅವರು ಬಳಿಕ ಸಿಂಡಿಕೇಟ್ ಬ್ಯಾಂಕಿನಲ್ಲಿ ಉದ್ಯೋಗ ಆರಂಭಿಸಿದರು.
ಅವರು ಡಿಸೆಂಬರ್ 01, 1953 ರಂದು ಕಾಸರಗೋಡಿನಲ್ಲಿ ಜನಿಸಿದ್ದಾರೆ. ಅಶೋಕ್ ಕುಮಾರ್ ಅವರು ಬರಹಗಾರ ಟಿ.ಕೆ. ಕಾಸರಗೋಡು ಅವರ ಸಹೋದರ. ಅಶೋಕ್ ಅವರಿಗೆ ಇಬ್ಬರು ಮಕ್ಕಳಿದ್ದು ಅವರ ಪುತ್ರ ಬೆಂಗಳೂರಿನ ಖಾಸಗಿ ರೇಡಿಯೋ ಚಾನೆಲ್ಗಾಗಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಶೋಕ್ ಕುಮಾರ್ ಅವರು 8 ಕೃತಿಗಳನ್ನು ಬರೆದಿದ್ದಾರೆ. ಅವರ ಸಾಮಾಜಿಕ ಸೇವೆ ಮತ್ತು ಸಾಹಿತ್ಯದ ಕೆಲಸಕ್ಕಾಗಿ ಅವರಿಗೆ ಗೌರವ ಡಾಕ್ಟರೇಟ್ ಲಭಿಸಿದೆ. ಕಿರುಚಿತ್ರಗಳು, ಟೆಲಿಫಿಲ್ಮ್ಗಳು, ಸಿನೆಮಾ, ಜಾಹೀರಾತುಗಳಲ್ಲಿಯೂ ಅವರು ನಟಿಸಿದ್ದಾರೆ. ಹಾಗೆಯೇ ಚಲನಚಿತ್ರ ಮತ್ತು ಆಲ್ಬಮ್ಗಳಿಗೆ ಹಾಡನ್ನು ಕೂಡಾ ರಚಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಅಶೋಕ್ ಕುಮಾರ್ ಮಂಗಳೂರಿನಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.