ಮಂಗಳೂರು, ಏ. 17 (DaijiworldNews/HR): ಶ್ರೀನಿವಾಸ್ ವಿಶ್ವವಿದ್ಯಾಲಯದ 3ನೇ ವಾರ್ಷಿಕ ಘಟಿಕೋತ್ಸವವು ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ವಿಶ್ವವಿದ್ಯಾಲಯ ಸಿಟಿ ಕ್ಯಾಂಪಸ್ನಲ್ಲಿ ಶನಿವಾರ ನಡೆಯಿತು.
ಘಟಿಕೋತ್ಸವದಲ್ಲಿ ಉಡುಪಿಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಜಗದ್ಗುರು, ಶ್ರೀ ಮಧ್ವಾಚಾರ್ಯ ಮೂಲ ಮಠ ಸಂಸ್ಥಾನ, ಉಪೇಂದ್ರ ತೀರ್ಥ ಪೀಠ, ಶ್ರೀ ಪುತ್ತಿಗೆ ಮಠ, ಉಡುಪಿ ಹಾಗೂ ಭಾರತೀಯ ವೈದಿಕ ವಾಸ್ತುಶಿಲ್ಪ, ಆಯುರ್ವೇದ ಮತ್ತು ತತ್ವ ವಿಜ್ಞಾನ ಪರಿಣಿತರಾದ ಆಚಾರ್ಯ ಶ್ರೀ ಧನ್ವಂತ್ ಸಿಂಗ್ರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಲಾಯಿತು.
ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಮಾತನಾಡಿ, "ಭಗವಂತ ಶ್ರೀನಿವಾಸ ಯಾವತ್ತಿಗೂ ತನ್ನ ಭಕ್ತರ ಕೈಬಿಡುವುದಿಲ್ಲ. ಈ ಕಾಲೇಜನ್ನು ಶ್ರೀನಿವಾಸ್ ವಿಶ್ವವಿದ್ಯಾಲಯ ಎಂದು ಹೆಸರಿಟ್ಟಿರುವುದರಿಂದ ಭಗವಂತ ಶ್ರೀನಿವಾಸ ಕುಲಾಧಿಪತಿಗಳಿಗೆ ಒಲಿದಿದ್ದಾನೆ. ವ್ಯಕ್ತಿಯೊಬ್ಬ ಅಭಿವೃದ್ಧಿ ಹೊಂದಬೇಕಾದರೆ ಆತನಿಗೆ ಆಧ್ಯಾತ್ಮಿಕ ಆಶೀರ್ವಾದವಿರಬೇಕು. ಆಧ್ಯಾತ್ಮಿಕ ಶಕ್ತಿಯನ್ನು ಪಡೆದರೆ ಬದುಕುವುದು ಸುಲಭ. ಇಂದು ನಾವೆಲ್ಲರೂ ಆಧ್ಯಾತ್ಮಕತೆಗೆ ಎರಡನೇ ಸ್ಥಾನವನ್ನು ನೀಡಿದ್ದೇವೆ. ಈ ತಪ್ಪುಗಳನ್ನು ಸರಿಪಡಿಸಿ ಆಧ್ಯಾತ್ಮಕತೆಯೆಡೆಗೆ ಹೆಚ್ಚಿನ ಆದ್ಯತೆಗಳನ್ನು ನೀಡಿದರೆ, ಕೊರೊನಾದಂತಹ ಕಷ್ಟದ ಪರಿಸ್ಥಿತಿಯನ್ನು ಕೂಡ ಸರಿಪಡಿಸಬಹುದು" ಎಂದರು.
ಆಚಾರ್ಯ ಧನ್ವಂತ್ ಸಿಂಗ್ ಮಾತನಾಡಿ, "ಪ್ರಾಮಾಣಿಕತೆ ಮತ್ತು ಸಮಗ್ರತೆಯ ಆಧಾರದ ಮೇಲೆ ವಿದ್ಯಾರ್ಥಿಗಳು ಮುಖ್ಯವಾದ ಮೌಲ್ಯಗಳನ್ನು ಅನುಸರಿಸಬೇಕು. ವಿಭಿನ್ನ ಹಿನ್ನೆಲೆಯ ಜನರೊಂದಿಗೆ ಒಟ್ಟಾಗಿ ಕೆಲಸ ಮಾಡುವುದು ಮತ್ತು ಹೊಸ ಸವಾಲುಗಳನ್ನು ಕಲಿಯಿರಿ" ಎಂದು ಪದವಿ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರು.
ಘಟಿಕೋತ್ಸವದಲ್ಲಿ 305 ಪದವಿ ಹಾಗೂ 114 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು, ಅಂತೆಯೇ 16 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸೇರಿದಂತೆ ಒಟ್ಟು 29 ಪದವಿ ವಿದ್ಯಾರ್ಥಿಗಳು, 16 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ರ್ಯಾಂಕ್, 1 ವಿದ್ಯಾರ್ಥಿಗೆ ಎಂ.ಎಸ್. ಪದವಿ, 1ಸಂಶೋಧನಾ ವಿದ್ಯಾರ್ಥಿಗೆ ಪಿ. ಹೆಚ್. ಡಿ. ಪದವಿ, 7 ಡಿ.ಎಸ್ಸಿ. ಪದವಿ, 2 ಮಂದಿಗೆ ಗೌರವ ಡಾಕ್ಟರೇಟ್ ಡಿ.ಲಿಟ್. ಪದವಿಗಳನ್ನು ಪ್ರದಾನ ಮಾಡಲಾಯಿತು.
ಕುಲಾಧಿಪತಿ ಸಿ. ಎ ರಾಘವೇಂದ್ರ ರಾವ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು. ಸಹ ಕುಲಾಧಿಪತಿ, ಡಾ ಎ. ಶ್ರೀನಿವಾಸ್ ರಾವ್ ಸ್ವಾಗತಿಸಿದರು. ಕುಲಪತಿ ಡಾ. ಪಿ. ಎಸ್. ಐತಾಳ್ ಶ್ರೀನಿವಾಸ್ ವಿಶ್ವವಿದ್ಯಾಲಯದ ವರದಿ ವಾಚಿಸಿದರು. ಕುಲಸಚಿವ ಡಾ. ಅನಿಲ್ ಕುಮಾರ್ ವಂದಸಿರು. ಶ್ರೀನಿವಾಸ್ ವಿಶ್ವವಿದ್ಯಾಲಯ, ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ರೋಹನ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.
ಕುಲಸಚಿವ (ಅಭಿವೃದ್ಧಿ) ಡಾ. ಅಜಯ್ ಕುಮಾರ್, ಕುಲಸಚಿವ (ಮೌಲ್ಯಮಾಪನ) ಡಾ. ಶ್ರೀನಿವಾಸ್ ಮಯ್ಯ, ಕುಲಸಚಿವ (ಶೈಕ್ಷಣಿಕ) ಆದಿತ್ಯ ಕುಮಾರ್, ಆಡಳಿತ ಮಂಡಳಿಯ ಟ್ರಸ್ಟಿ ಸದಸ್ಯರುಗಳಾದ ಶ್ರೀಮತಿ ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಎ. ಮಿತ್ರಾ ಎಸ್. ರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.