ಕುಂದಾಪುರ, ಏ. 17 (DaijiworldNews/HR): ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಮಾರಣಕಟ್ಟೆ ಇವರ ವತಿಯಿಂದ ಮಾರಣಕಟ್ಟೆ ದಿ.ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮ 'ಕಲ್ಪವೃಕ್ಷ' ಮಾರಣಕಟ್ಟೆಯ ಅನುಗ್ರಹದ ವಠಾರದಲ್ಲಿ ನಡೆಯಿತು.
ದಿ.ಸುಬ್ರಹ್ಮಣ್ಯ ಮಂಜರವರ ನೆನಪಿನಲ್ಲಿ 'ನೆರವು' ಕಾರ್ಯಕ್ರಮವನ್ನು ಮಾತೃಶ್ರೀ ವಿಶಾಲಾಕ್ಷಿಯಮ್ಮನವರು ಉದ್ಘಾಟಿಸಿದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, "ತನ್ನ ದುಡಿಮೆಯ ಒಂದು ಭಾಗವನ್ನು ಸಮಾಜಕ್ಕೆ ಅರ್ಪಣಭಾವದಿಂದ ನೀಡುವ ಕೃಷ್ಣಮೂರ್ತಿ ಮಂಜರು ಶಿಕ್ಷಣ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ವ್ಯವಸ್ಥೆಗೆ ಅಗಾಧವಾದ ಕೊಡುಗೆ ನೀಡುತ್ತಲೇ ಬಂದಿದ್ದಾರೆ. ಸದಾ ಸಮಾಜಕ್ಕೆ ಸ್ಪಂದಿಸುವ ಇವರು ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೀಡುತ್ತಿರುವ ಕಾರ್ಯಗಳು ಶ್ಲಾಘನೀಯ" ಎಂದರು.
ಯಕ್ಷಿ ಪಾತ್ರಿಗಳಾದ ಶ್ರೀಧರ ಮರ್ಡಿ ಆಶೀರ್ವಚನ ನೀಡಿದ್ದು, ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಮಂಜರು ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ಮಾರಣಕಟ್ಟೆ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಸದಾಶಿವ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ಚಿತ್ತೂರು ಮಂಜಯ್ಯ ಶೆಟ್ಟಿ, ನಾರಾಯಣ ಮಂಜರು, ಶ್ರೀಧರ ಮಂಜರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸೇವಾ ರತ್ನ ಪ್ರಶಸ್ತಿಯನ್ನು ವರಸಿದ್ಧಿ ವಿನಾಯಕ ಪ.ಪೂ ಕಾಲೇಜು ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ, ಕಲಾ ರತ್ನ ಪ್ರಶಸ್ತಿಯನ್ನು ಯಕ್ಷಗಾನ ಕಲಾವಿದ ಜಮದಗ್ನಿ ಶೀನ ಅವರಿಗೆ ಅಮೂಲ್ಯ ರತ್ನ ಪ್ರಶಸ್ತಿಯನ್ನು ಪಾಕಶಾಸ್ತ್ರ ಪ್ರವೀಣ ಮಂಜುನಾಥ ಹೆಬ್ಬಾರ್ ನೀರ್ಕೊಡ್ಲು, ಕರ್ಕುಂಜೆ ಇವರಿಗೆ ಪ್ರದಾನ ಮಾಡಲಾಯಿತು.