ಮಂಗಳೂರು, ಏ.17 (DaijiworldNews/MB) : ನಿರ್ಮಾಣ ಮತ್ತು ಕೈಗಾರಿಕಾ ವಲಯದಲ್ಲಿ ಉದ್ಯೋಗದ ಹುಡುಕಾಟದಲ್ಲಿ ಹೊರಗಿನ ಜಿಲ್ಲೆಗಳು ಮತ್ತು ರಾಜ್ಯಗಳಿಂದ ನಗರಕ್ಕೆ ಆಗಮಿಸುವ ವಲಸೆ ಕಾರ್ಮಿಕರಿಗೆ ಸೂಕ್ತ ವಸತಿ ಸೌಲಭ್ಯವನ್ನು ಒದಗಿಸುವ ಪ್ರಸ್ತಾಪವನ್ನು ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಂದು ಶಾಸಕ ವೇದವ್ಯಾಸ್ ಕಾಮತ್, ''ನಗರದ ಹೊರವಲಯದಲ್ಲಿರುವ ಜಪ್ಪಿನಮೊಗರು ಬಳಿ ಎರಡು ಎಕರೆ ಜಮೀನಿನಲ್ಲಿ ಈ ಉದ್ದೇಶಿತ ವಸತಿ ಸೌಲಭ್ಯ ಬರಲಿದೆ. ಇದು ಕೇಂದ್ರ ಸರ್ಕಾರದ ಯೋಜನೆಯ ಮೂಲಕ ಕಾರ್ಯರೂಪಕ್ಕೆ ಬರಲಿದೆ. ವಲಸೆ ಕಾರ್ಮಿಕರ ಕಲ್ಯಾಣಕ್ಕಾಗಿ ಕರ್ನಾಟಕ ರಾಜ್ಯದಲ್ಲಿ ಈ ರೀತಿಯ ಮೊದಲ ಯೋಜನೆ ಇದು'' ಎಂದು ಹೇಳಿದರು.
"ಪ್ರಸ್ತುತ ವಲಸೆ ಕಾರ್ಮಿಕರು ನಗರದ ವಿವಿಧ ಭಾಗಗಳಲ್ಲಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಕೆಲವರು ಫುಟ್ಪಾತ್ಗಳಲ್ಲಿ ಡೇರೆಗಳಲ್ಲಿ ವಾಸಿಸುತ್ತಿದ್ದಾರೆ. ಇನ್ನೂ ಕೆಲವರು ಬಸ್ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅಂತಹ ಜನರಿಗೆ ಸೂಕ್ತ ವಸತಿ ಕಲ್ಪಿಸುವುದು ಸರ್ಕಾರದ ಉದ್ದೇಶ" ಎಂದು ಶಾಸಕ ಕಾಮತ್ ತಿಳಿಸಿದರು.
"ಕಳೆದ ಲಾಕ್ಡೌನ್ನಲ್ಲಿ ವಲಸೆ ಕಾರ್ಮಿಕರು ಅಲೆದಾಡಬೇಕಾಯಿತು. ಜಿಲ್ಲಾಡಳಿತವು ಅವರ ಸಂಖ್ಯೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಹೊಂದಿರಲಿಲ್ಲ. ಮೊದಲ ಲಾಕ್ಡೌನ್ ಸಮಯದಲ್ಲಿ ಅವರಿಗೆ ಆಹಾರ ಮತ್ತು ಆಶ್ರಯವನ್ನು ಒದಗಿಸುವುದು ಒಂದು ಸವಾಲಾಗಿತ್ತು. ವಸತಿ ಸೌಲಭ್ಯವನ್ನು ಒದಗಿಸಿದಾಗ ವಲಸೆ ಕಾರ್ಮಿಕರ ನಿಖರ ಸಂಖ್ಯೆಯನ್ನು ಆಡಳಿತವು ತಿಳಿಯಲಿದೆ'' ಎಂದರು.
"ಹೊಸ ವಸತಿ ಸೌಲಭ್ಯದಲ್ಲಿ ಯಾವ ರೀತಿಯ ವಲಸೆ ಕಾರ್ಮಿಕರಿಗೆ ಸ್ಥಳಾವಕಾಶ ನೀಡಬೇಕೆಂದು ಜಿಲ್ಲಾಡಳಿತವು ಅಂತಿಮಗೊಳಿಸುತ್ತದೆ. ಕಾರ್ಮಿಕರ ಆಯ್ಕೆ ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಕಟ್ಟಡವನ್ನು ಸರ್ಕಾರ ನಿರ್ಮಿಸುತ್ತದೆ. ವಲಸೆ ಕಾರ್ಮಿಕರು ಇದನ್ನು ತಾತ್ಕಾಲಿಕ ಸೌಲಭ್ಯವಾಗಿ ಬಳಸಬಹುದು. ವಲಸೆ ಕಾರ್ಮಿಕರ ಬಳಿ ಕನಿಷ್ಠ ನಿರ್ವಹಣಾ ಮೊತ್ತವನ್ನು ಸಂಗ್ರಹಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಇನ್ನೂ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಬೇಕಾಗಿದೆ. ಹೊರಗಿನ ರಾಜ್ಯಗಳ ಕಾರ್ಮಿಕರಿಗೆ ಈ ವ್ಯವಸ್ಥೆಯಲ್ಲಿ ವಸತಿ ಸೌಕರ್ಯಗಳಿಗೆ ಅವಕಾಶ ನೀಡಲಾಗುವುದು'' ಎಂದು ತಿಳಿಸಿದರು.
ಮೊದಲ ಲಾಕ್ಡೌನ್ ಸಮಯದಲ್ಲಿ ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ನೀಡಿದ ವಿವರಗಳ ಪ್ರಕಾರ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಿಂದ 50,000 ಕ್ಕೂ ಹೆಚ್ಚು ಕಾರ್ಮಿಕರು ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಕೆಲಸ ಮಾಡುತ್ತಿದ್ದರು. ಕರ್ನಾಟಕದ ಇತರ ಜಿಲ್ಲೆಗಳಿಗೆ ಸೇರಿದ 20,000 ಕ್ಕೂ ಹೆಚ್ಚು ಕಾರ್ಮಿಕರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು. ಈ ಪೈಕಿ ಹೆಚ್ಚಿನ ವಲಸೆ ಕಾರ್ಮಿಕರು ತಮ್ಮ ರಾಜ್ಯ ಮತ್ತು ಜಿಲ್ಲೆಗಳಿಗೆ ವಾಪಾಸ್ ತೆರಳಿದ್ದರು. ಆದಾಗ್ಯೂ ಕೆಲವರು ಇನ್ನೂ ತಮ್ಮ ಗ್ರಾಮದಲ್ಲಿಯೇ ಇದ್ದರೆ, ಇನ್ನೂ ಕೆಲವರು ವಾಪಾಸ್ ಬಂದಿದ್ದಾರೆ.