ಮಂಗಳೂರು, ಏ 17 (DaijiworldNews/MS): ಮೂಡುಬಿದಿರೆ, ಬಜಪೆ, ಮೂಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 16 ಕ್ಕೇರಿದೆ. ಬಂಧಿತನನ್ನು ಪುತ್ತೂರು ಕೆದಂಬಾಡಿ ಗ್ರಾಮದ ಬಷೀರ್ (40)ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಬಷೀರ್ , ಈಗಾಗಲೇ ದಸ್ತಗಿರಿಯಾಗಿರುವ ಆರೋಪಿಗಳಿಗೆ ಕೃತ್ಯ ನಡೆಸಲು ಬೇಕಾದ ಹಣಕಾಸಿನ ನೆರವು ನೀಡುತ್ತಿದ್ದ, ಈತನ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಮನೆ ದರೋಡೆಗೆ ಸಂಚು ರೂಪಿಸಿದ ಬಗ್ಗೆ ಕೇಸು ದಾಖಲಾಗಿದೆ.
ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿ:
2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದ. ಸಮಾಜ ಸೇವೆಯ ಮುಖವಾಡದಲ್ಲಿ ಹಲವಾರು ಅಕ್ರಮ ಚಟುವಟಿಕೆಗಳಿಗೆ ಸಹಕರಿಸುತ್ತಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪೊಲೀಸರು ಇತನನ್ನು ಏ.15ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.