ಉಡುಪಿ, ಏ.17 (DaijiworldNews/MB) : ''ಉಡುಪಿಯಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂ ಅಗತ್ಯವೇ ಇಲ್ಲ. ಸರ್ಕಾರ ಉಡುಪಿಯಲ್ಲಿನ ನೈಟ್ ಕರ್ಫ್ಯೂ ಅನ್ನು ಹಿಂದಕ್ಕೆ ತೆಗೆದು ಕೊಳ್ಳಬೇಕು. ಹಾಗೆಯೇ ಸರ್ಕಾರ ಕೂಡಲೇ ಧಾರ್ಮಿಕ ಕಾರ್ಯಕ್ರಮಕ್ಕೆ ಹೇರಿದ ನಿಷೇಧವನ್ನು ಹಿಂಪಡೆಯಬೇಕು'' ಶಾಸಕ ರಘುಪತಿ ಭಟ್ ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ''ಜನಸಂದಣಿ ಆಗದಂತೆ ತಡೆಯುವುದು, ಕೊರೊನಾ ಪರೀಕ್ಷೆಗೆ ಒಳಗಾಗುವುದು, ಮಾಸ್ಕ್ ಧರಿಸುವುದು ಇದು ಮುಖ್ಯವಾದದು. ಉಡುಪಿಯಲ್ಲಿ ಸಾಕಷ್ಟು ಕೊರೊನಾ ಔಷಧಿ ಸೌಕರ್ಯಗಳಿವೆ. ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಇಲ್ಲಿ ಲಾಕ್ಡೌನ್, ನೈಟ್ ಕರ್ಫ್ಯೂ ಅಗತ್ಯವೇ ಇಲ್ಲ'' ಎಂದು ಹೇಳಿದರು.
ಇನ್ನು ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರ ನಿಷೇಧ ಹೇರಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ''ಧಾರ್ಮಿಕ ಕಾರ್ಯಕ್ರಮ ಮಾಡಲೇ ಬೇಕು ಅದು ಅನಿವಾರ್ಯ. ಇದು ಸರಿಯಾದ ನಿರ್ಧಾರ ಅಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನಾಗರೀಕರ ಭಾವನೆಯ ಮೇಲೆ ಧಕ್ಕೆ ಉಂಟಾಗುತ್ತದೆ'' ಎಂದು ಹೇಳಿದ್ದಾರೆ.
''ರಾಜಕೀಯ ಕಾರ್ಯಕ್ರಮಗಳಿಗೆ ನಿಯಮ ಸಡಿಲಿಕೆಯ ಅಗತ್ಯವಿರಲಿಲ್ಲ. ರಾಜಕೀಯಕ್ಕಿಂತ ಧಾರ್ಮಿಕ ಕಾರ್ಯಕ್ರಮವೇ ಮುಖ್ಯ. ಸರ್ಕಾರ ಕೂಡಲೇ ಈ ನಿಷೇಧ ಹಿಂಪಡೆಯಬೇಕು'' ಎಂದು ಶಾಸಕರು ಒತ್ತಾಯಿಸಿದ್ದಾರೆ.
''ಇನ್ನು ಕೆಲವು ವರ್ಗದ ಜನರಿಗೆ ಈಗ ದುಡಿದರೆ ಮಾತ್ರ ಆದಾಯ. ಅದನ್ನು ನಂಬಿಕೊಂಡು ವರ್ಷ ಪೂರ್ತಿ ಜೀವನ ನಡೆಸಬೇಕು. ಸಣ್ಣ ವ್ಯಾಪಾರಿಗಳು ಈಗಷ್ಟೆ ಚೇತರಿಸಿಕೊಳ್ಳುತ್ತಿದ್ದಾರೆ. ಮತ್ತೆ ಲಾಕ್ಡೌನ್ ಆದರೆ ಜನರು ಕೊರೊನಾದಿಂದ ಸಾಯಲ್ಲ ಲಾಕ್ಡೌನ್ನಿಂದ ಸಾಯುತ್ತಾರೆ'' ಎಂದು ಕಿಡಿಕಾರಿದರು. ''ರಾಜ್ಯದಲ್ಲಿ ಲಾಕ್ ಡೌನ್ ಮಾಡುವುದಾದರೆ ಒಮ್ಮೆಲೇ ಮಾಡಲಿ. ಮಾಡಿದರೆ ಅದಕ್ಕೆ ಅರ್ಥವಿಲ್ಲ'' ಎಂದು ಕೂಡಾ ಹೇಳಿದರು.
''ಜನರು ಜಾಗ್ರತರಾಗಿ ಅವರ ಅರೋಗ್ಯ ರಕ್ಷಣೆ ಮಾಡಿಕೊಳ್ಳಬೇಕು. ಸೋಂಕಿನ ಲಕ್ಷಣ ಇರುವವರು ತುಂಬಾ ತಡವಾಗಿ ಆಸ್ಪತ್ರೆಗೆ ಬರಬಾರದು. ಸ್ವಲ್ಪ ಲಕ್ಷಣ ಕಂಡು ಬಂದರೂ ತಪಾಸಣೆಗೆ ಒಳಪಡಬೇಕು'' ಎಂದು ಸೂಚಿಸಿದ ಶಾಸಕರು, ''ಕೊರೊನಾ ನಿಯಂತ್ರಣ ಮಾಡಿರುವುದಕ್ಕೆ ಎಂಐಟಿ ಉತ್ತಮ ನಿದರ್ಶನವಾಗಿದೆ. ಅಲ್ಲಿ ಕಠಿಣ ಕ್ರಮ ತೆಗೆದು ಕೊಂಡ ಕಾರಣ ಈಗ ಕೊರೊನಾ ಪ್ರಕರಣ ಶೂನ್ಯವಾಗಿದೆ'' ಎಂದರು.