ಮಂಗಳೂರು, ಏ.17 (DaijiworldNews/MB) : ''ದೇವರನ್ನು ಕಾಣಲು ಶುಕ್ರವಾರ ಅಥವಾ ರವಿವಾರವೆಂದು ದಿನ ನಿಗದಿಯಾಗಿಲ್ಲ. ದೇವರನ್ನು ಪ್ರತಿನಿತ್ಯವೂ ಕಾಣಬಹುದು'' ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಅವರು ಹೇಳಿದ್ದಾರೆ.
ಉಳ್ಳಾಲದ ಪಿಲಾರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, ''ಶುಕ್ರವಾರ ಮಧ್ಯಾಹ್ನ ಅಥವಾ ರವಿವಾರ ಬೆಳಗ್ಗೆಯೇ ದೇವರನ್ನು ನೋಡಬೇಕು ಎಂದು ಏನಿಲ್ಲ. ಯಾವುದೇ ದಿನ, ಯಾವುದೇ ಕ್ಷಣ ದೇವರನ್ನು ಕಾಣಬಹುದು. ಹಿಂದೂ ಧರ್ಮದಲ್ಲಿ ಯಾವಾಗ ಬೇಕಾದರೂ ದೇವರನ್ನು ಪ್ರಾರ್ಥಿಸಬಹುದು'' ಎಂದಿದ್ದಾರೆ.
''ನಾವು ಯಾವ ರೀತಿ ದೇವರನ್ನು ಪೂಜೆ ಮಾಡಬೇಕು ಎಂದು ಎಲ್ಲಿಯೂ ಹೇಳಿಲ್ಲ. ಈ ದಿಕ್ಕಿನಲ್ಲೇ ದೇವರನ್ನು ಪೂಜಿಸಬೇಕು ಆಗ ಮಾತ್ರ ದೇವರು ಸಿಕ್ಕುತ್ತಾರೆ ಎಂದು ನಾವು ಹೇಳಿಲ್ಲ'' ಎಂದು ಹೇಳಿದ ಪ್ರಭಾಕರ್ ಭಟ್ ಅವರು, ''ಶುಕ್ರವಾರ ಮಧ್ಯಾಹ್ನ 12:30 ಗಂಟೆಗೆ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಲ್ಲಾಹು ಅಕ್ಬರ್ ಎಂದರೆ ಮಾತ್ರ ದೇವರು ಎಂದು ಕೆಲವರು ಹೇಳುತ್ತಾರೆ. ರವಿವಾರದಂದು 7 ಗಂಟೆಗೆ ಅಥವಾ 9 ಗಂಟೆಗೆ ಪೂಜೆ ಮಾಡಿ ಪರಲೋಕದಲ್ಲಿರುವ ನಮ್ಮ ತಂದೆಯೇ ಎಂದರೆ ಮಾತ್ರ ದೇವರು ಸಿಕ್ಕುತ್ತಾರೆ ಎಂದು ಇನ್ನು ಕೆಲವರು ಹೇಳುತ್ತಾರೆ. ಹಾಗಾದರೆ ಶುಕ್ರವಾರ, ರವಿವಾರ ಬಿಟ್ಟು ಉಳಿದ ದಿನಗಳಲ್ಲಿ ದೇವರು ಇಲ್ಲವೇ'' ಎಂದು ಹೇಳುವ ಮೂಲಕ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
''ದೇವರು ನಮ್ಮ ನಂಬಿಕೆ. ವರ್ಷವಿಡಿ ಯಾವ ಹೊತ್ತಿನಲ್ಲಿ ನೋಡಿದರೂ ದೇವರು ಇದ್ದಾರೆ. ನಾವು ಯಾರ ನಂಬಿಕೆಗಳಿಗೂ ವಿರೋಧ ಮಾಡುವುದಿಲ್ಲ. ನಾವು ಎಲ್ಲದರಲ್ಲಿಯೂ ದೇವರನ್ನು ನೋಡುತ್ತೇವೆ. ಎಲ್ಲಾ ಹೊತ್ತಿನಲ್ಲೂ ದೇವರನ್ನು ನೋಡುತ್ತೇವೆ. ಬೆಳಿಗ್ಗೆಯೇ ಪೂಜೆ ಮಾಡಬೇಕು, ಮಧ್ಯಾಹ್ನವೇ ಪೂಜೆ ಮಾಡಬೇಕು ಎಂಬುದು ಇಲ್ಲ. 365 ದಿನವೂ, ದಿನದ 24 ಗಂಟೆಗಳ ಕಾಲವೂ ಎಲ್ಲಾ ಹೊತ್ತಿನಲ್ಲೂ ದೇವರಿದ್ದಾರೆ. ದೇವರಿಲ್ಲದ ಸಮಯವಿಲ್ಲ. ದೇವರಿಗೆ ನಮ್ಮಿಚ್ಛೆಯ ಹೆಸರು ಇಡಬಹುದು'' ಎಂದು ಹೇಳಿದ್ದಾರೆ.