ಕಾಪು, ಏ.17 (DaijiworldNews/MB) : 2008 ರಿಂದ ಪರಾರಿಯಾಗಿದ್ದ ಪ್ರಕರಣವೊಂದ ಆರೋಪಿಯನ್ನು ಕಾಪು ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಇಲಿಯಾಸ್ ಅಲಿಯಾಸ್ ಮಹಮ್ಮದ್ ಹಸನ್ ಅಲಿಯಾಸ್ ಮಹಮ್ಮದ್ ರಫೀಕ್.
2000 ಇಸವಿಯ ಡಿಸೆಂಬರ್ 5 ರಂದು ಲೀಲಾಧರ ಶೆಟ್ಟಿ ನೀಡಿದ ದೂರಿನಂತೆ (ಅಂದಿನ ಶಿರ್ವ )ಕಾಪು ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದ್ದು ಈ ಸಂಬಂಧ 4 ಜನ ಆರೋಪಿಗಳನ್ನು ಬಂಧಿಸಲಾಗಿತ್ತು.
ಈ ಪೈಕಿ ಆರೋಪಿ ಇಲಿಯಾಸ್, ನ್ಯಾಯಾಲಯದಿಂದ ಜಾಮೀನು ಪಡೆದು ಸೌದಿಗೆ ಹೋಗಿ ನ್ಯಾಯಾಲಯಕ್ಕೆ ಹಾಜರಾಗದೆ 2008 ರಿಂದ ಪರಾರಿಯಾಗಿದ್ದನು. ಈ ಹಿನ್ನೆಲೆ ಜಿಲ್ಲಾ ಸತ್ರ ನ್ಯಾಯಾಲಯ ಎಲ್ಪಿಸಿ ವಾರಂಟ್ ಹೊರಡಿಸಿತ್ತು.
ಈತನ ಬಗ್ಗೆ ಕಾಪು ಪೊಲೀಸ್ ಠಾಣಾ ವಾರಂಟ್ ಸಿಬ್ಬಂದಿ ಸುಧಾಕರ, ರಫೀಕ್, ಸಂದೇಶ್ ಅವರು ಮಾಹಿತಿ ಕಲೆ ಹಾಕಿದಾಗ ಈತ ಮಹಮ್ಮದ್ ರಫೀಕ್ ಎಂಬ ಹೆಸರಿನಲ್ಲಿ ಬೆಂಗಳೂರಿನಿಂದ ನಕಲಿ ಪಾಸ್ಪೋರ್ಟ್ ಮಾಡಿ ವಿದೇಶಕ್ಕೆ ಹೋದ ಬಗ್ಗೆ ಮಾಹಿತಿ ಲಭಿಸಿದೆ.
ಈ ಮಾಹಿತ ಆಧಾರದಲ್ಲಿ ಆತ ವಿದೇಶದಿಂದ ವಾಪಾಸ್ ಬರುವ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ ವಾರಂಟ್ ಸಿಬ್ಬಂದಿ ಸುಧಾಕರ ಭಂಡಾರಿ, ರಫೀಕ್, ರವೀಂದ್ರ, ಸಂದೇಶ ಭಂಡಾರಿ ಅವರು ಶುಕ್ರವಾರ ಎಪ್ರಿಲ್ 16 ರಂದು ಎರ್ಮಾಳು ಪೆಟ್ರೋಲ್ ಬಂಕ್ ಬಳಿ ಬಂಧಿಸಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗದ ಬಂಧನ ವಿಧಿಸಿದೆ.