ಉಪ್ಪಿನಂಗಡಿ, ಎ.17 (DaijiworldNews/PY): ವ್ಯಕ್ತಿಯೋರ್ವ ಮಲ್ಲಿಗೆಗೆ ಆರ್ಡರ್ ನೀಡಿ ಅಂಗಡಿಯಾತನಿಂದಲೇ ಹಣ ಪಡೆದು ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ನನ್ನ ಅಪ್ಪ ನಿವೃತ್ತ ಬ್ಯಾಂಕ್ ಆಫೀಸರ್, ಅವರು ನಿಮ್ಮಲ್ಲೇ ಖಾಯಂ ಹೂವು ಖರೀದಿ ಮಾಡುವುದು. ನಮ್ಮ ಮನೆಯಲ್ಲಿ ದೈವದ ಕೋಲ ಇದ್ದು, ಹಾಗಾಗಿ 15 ಅಟ್ಟಿ ಮಲ್ಲಿಗೆ ಬೇಕಾಗಿದೆ ಎಂದೆಲ್ಲಾ ಮಾತನಾಡಿ ವಿಶ್ವಾಸ ಮೂಡಿಸಿ, ಬಳಿಕ ಅಂಗಡಿಯವರ ಬಳಿಯಿಂದಲೇ ಹಣ ಪಡೆದುಕೊಂಡು ವಂಚಿಸಿದ್ದಾನೆ.
ಬೈಕ್ನಲ್ಲಿ ಬಂದಿದ್ದ ವ್ಯಕ್ತಿ ಮುಖಕ್ಕೆ ಮಾಸ್ಕ್ ಧರಿಸಿಕೊಂಡೇ ಮಾತನಾಡಿದ್ದು, ಮನೆಯಲ್ಲಿ ದೈವದ ಕೋಲ ಇದೆ, ಹಾಗಾಗಿ 15 ಅಟ್ಟಿ ಮಲ್ಲಿಗೆ ತಲುಪಿಸುವಂತೆ ತಿಳಿಸಿ ವ್ಯಾಪಾರಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಸ್ವಲ್ಪ ಸಮಯದ ಬಳಿಕ ಹೂವಿನ ವ್ಯಾಪಾರಿಗೆ ಕರೆ ಮಾಡಿದ ವ್ಯಕ್ತಿ ದಿನಸಿ ಅಂಗಡಿಯಲ್ಲಿ 42 ಸಾವಿರ ರೂ. ಮೌಲ್ಯದ ಸಾಮಾನು ಖರೀದಿ ಮಾಡಿದ್ದು, 40 ಸಾವಿರ ರೂ. ಪಾವತಿಸಿದ್ದೇನೆ. 2 ಸಾವಿರ. ರೂ. ಕಡಿಮೆಯಾಗಿದೆ. ಇವತ್ತಿನ ಮಟ್ಟಿಗೆ ನೀವು ಹೊಂದಿಸಬಹುದಾ? ಎಂದು ಹೇಳಿ ಎರಡು ಸಾವಿರ ರೂ ಪಡೆದುಕೊಂಡಿದ್ದಾನೆ. ಇದಾದ ಬಳಿಕ ಆ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾಗಲೇ ವಂಚಿಸಿದ್ದಾನೆ ಎನ್ನುವ ವಿಚಾರ ತಿಳಿದುಬಂದಿದೆ.
ಈ ಬಗ್ಗೆ ವ್ಯಾಪಾರಿಗಳು ದೂರು ದಾಖಲಿಸಿದ್ದಾರೆ.