ಮಂಗಳೂರು, ಎ.17 (DaijiworldNews/PY): ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹೊಸಕೋಟೆ ಬಳಿಯ ನಂದಿಪುರ ಎಸ್ಟೇಟ್ನಲ್ಲಿ ಎಪ್ರಿಲ್ 10ರ ಶನಿವಾರ ರಾತ್ರಿ ನಡೆಸಿದ್ದ ರೇವ್ ಪಾರ್ಟಿಯಲ್ಲಿ ಮಂಗಳೂರು ನಗರದ ಮಹಿಳಾ ಹೆಡ್ ಕಾನ್ಸ್ಟೇಬಲ್ ಹಾಗೂ ಅವರ ಪುತ್ರ ಭಾಗವಹಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಮಹಿಳಾ ಹೆಡ್ ಕಾನ್ಸ್ಟೇಬಲ್ನ ಪುತ್ರ ಅಥುಲ್ ರೇವ್ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.
ಪೊಲೀಸ್ ವಿಚಾರಣೆಯ ಸಂದರ್ಭ ಆಕೆ, "ನಾನು ನನ್ನ ಮಗನನ್ನು ಕರೆದುಕೊಂಡು ಹೋಗಲು ಬಂದಿದ್ದೆ" ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ರೇವ್ ಪಾರ್ಟಿ ನಡೆಸುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಹಾಲೂರು ಹಾಗೂ ಸಕಲೇಶಪುರ ಪೊಲೀಸರು ದಾಳಿ ನಡೆಸಿ ವಿವಿಧ ಜಿಲ್ಲೆಯ ಯುವಕ-ಯುವತಿಯರನ್ನು ಹಾಗೂ 20ಕ್ಕೂ ಅಧಿಕ ಐಷಾರಾಮಿ ಕಾರು, 50ಕ್ಕೂ ಅಧಿಕ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಕೊರೊನಾದ ಎರಡನೇ ಅಲೆ ಇದ್ದರೂ ಕೂಡಾ ನಿಯಮ ಉಲ್ಲಂಘನೆ ಮಾಡಿ ರೇವ್ ಪಾರ್ಟಿ ನಡೆಸಿದ್ದಾರೆ.
ಮಹಿಳಾ ಹೆಡ್ ಕಾನ್ಸ್ಟೇಬಲ್ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಂಬಂಧಿಸಿದ ಠಾಣಾಧಿಕಾರಿಗೆ ಮಂಗಳೂರು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.
ನೂರಕ್ಕೂ ಅಧಿಕ ಯುವಕ-ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅವರಿಂದ ಗಾಂಜಾ ಹಾಗೂ ಇತರೆ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ರೇವ್ ಪಾರ್ಟಿ ಆಯೋಜಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕವೇ ಮಾಹಿತಿ ರವಾನಿಸಲಾಗಿದ್ದು, ಮಹಿಳಾ ಹೆಡ್ ಕಾನ್ಸ್ಟೇಬಲ್ ಪುತ್ರ ರೇವ್ ಪಾರ್ಟಿಯನ್ನು ಆಯೋಜಿಸಿದ್ದ ಎಂದು ಹೇಳಲಾಗಿದೆ. ಪಾರ್ಟಿ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ವಾಟ್ಸ್ಯಾಪ್ ಮೂಲಕ ರೇವ್ ಪಾರ್ಟಿ ಲೊಕೇಷನ್ ಕಳುಹಿಸಲಾಗುತ್ತದೆ. ಈ ಪಾರ್ಟಿಗೆ ಬೇರೆಯವರು ಭಾಗವಹಿಸದಂತೆ ಪ್ರತಿಯೊಬ್ಬರಿಗೂ ಟ್ಯಾಗ್ ಅನ್ನು ನೀಡಲಾಗುತ್ತದೆ. ಈ ರೀತಿಯ ಪಾರ್ಟಿಗಳನ್ನು ಗ್ರಾಮೀಣ, ಕಾಡು ಪ್ರದೇಶ, ಎಸ್ಟೇಟ್ಗಳೊಳಗೆ ಆಯೋಜಿಸಲಾಗಿರುವುದರಿಂದ ಅಧಿಕಾರಿಗಳಿಗೂ ಮಾಹಿತಿ ಸಿಗುವುದಿಲ್ಲ. ಒಂದು ವೇಳೆ ಮಾಹಿತಿ ತಿಳಿದಲ್ಲಿ ತಪ್ಪಿಸಿಕೊಳ್ಳಲು ಸುಲಭವಾಗುತ್ತದೆ.