ಕಾಸರಗೋಡು, ಏ. 11 (DaijiworldNews/SM): ವಿವಾಹ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಸ್ಥಳೀಯಾಡಳಿತ ಸಂಸ್ಥೆಗಳಿಂದ ಪೂರ್ವಾನುಮತಿ ಪಡೆಯಬೇಕು. ಕೋವಿಡ್ ಮಾನದಂಡ ಪಾಲಿಸಿ ಗರಿಷ್ಟ 100 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಸ್ಥಳೀಯಾಡಳಿತ ಮಟ್ಟದಲ್ಲಿ ಜನ ಜಾಗ್ರತಿ ಸಮಿತಿಗಳನ್ನು ಚುರುಕುಗೊಳಿಸಲಾಗುವುದು ಎಂಬುವುದಾಗಿ ಜಿಲ್ಲಾಧಿಕಾರಿ ಸಜಿತ್ ಬಾಬು ತಿಳಿಸಿದ್ದಾರೆ.
ಈಗ ನಿಗಧಿ ಪಡಿಸಿದ ಸಮಾರಂಭ ಹೊರತು ಪಡಿಸಿ ಮುಂದಿನ ಯಾವುದೇ ಹೊಸ ಕಾರ್ಯಕ್ರಮ ತೀರ್ಮಾನಿಸಬಾರದು. ಅನುಮತಿ ಪಡೆದಿರುವ ಉತ್ಸವಗಳನ್ನು ಹಾಗೂ ಅನಿವಾರ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಮಾತ್ರ ನಡೆಸಬೇಕು. ಆರಾಧನಾಲಯಗಳಲ್ಲಿ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜಿಲ್ಲೆಯ ಬೀಚ್ ಹಾಗೂ ಪ್ರವಾಸಿ ತಾಣಗಳಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಕೋವಿಡ್ ಮಾನದಂಡಗಳನ್ನು ಪಾಲಿಸದವರ ವಿರುದ್ದ ನಿಗಾ ವಹಿಸಲು ವಿಶೇಷ ತಂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.