ಕಾಸರಗೋಡು, ಎ.16 (DaijiworldNews/PY): "ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿಗೆ ತರಲು ಪೊಲೀಸರು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಹಲವು ರೀತಿಯ ನಿಯಂತ್ರಣ ಮಾಡಲಾಗುವುದು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ. ರಾಜೀವ್ ತಿಳಿಸಿದ್ದಾರೆ.
ಕೊರೊನಾ ಮಾನದಂಡ ನಿರ್ದೇಶನವನ್ನು ಒಳಗೊಂಡ ಕರಪತ್ರಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಗರದ ವ್ಯಾಪಾರ ಮಳಿಗೆಗಳಲ್ಲಿ ವಿತರಿಸಿದ್ದು, ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಬಗ್ಗೆ ಸಲಹೆಗಳನ್ನು ನೀಡಲಾಯಿತು. ಬಸ್ಸು ಸಿಬ್ಬಂದಿಗಳಿಗೂ ಸಲಹೆ ನೀಡಲಾಗಿದೆ.
"ವ್ಯಾಪಾರ ಮಳಿಗೆಗಳು ರಾತ್ರಿ 10 ಗಂಟೆ ಬಳಿಕ ಯಾವುದೇ ಕಾರಣಕ್ಕೂ ಕಾರ್ಯಾಚರಿಸುವಂತಿಲ್ಲ. ಆದೇಶ ಉಲ್ಲಂಘಿಸಿದಲ್ಲಿ ಪರವಾನಿಗೆ ರದ್ದು ಸೇರಿದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಸಭಾಂಗಣಗಳಲ್ಲಿ 75 ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ವಿವಾಹ ಮೊದಲಾದ ಸಮಾರಂಭಗಳಿಗೆ 100 ಮಂದಿಗೆ ಮಾತ್ರ ಪಾಲ್ಗೊಳ್ಳಬಹುದಾಗಿದೆ. ಆರಾಧನಾಲಯಗಳಲ್ಲಿ ಕೊರೊನಾ ಮಾನದಂಡ ಪಾಲಿಸಿ ಪ್ರಾರ್ಥನೆ ನಡೆಸಬಹುದಾಗಿದೆ. 100ಕ್ಕಿಂತ ಹೆಚ್ಚಿನ ಮಂದಿ ಪಾಲ್ಗೊಳ್ಳಬಾರದು" ಎಂದು ಹೇಳಿದ್ದಾರೆ.
"ಬಸ್ಸು ನಿಲ್ದಾಣ, ಆಟೋ ಟ್ಯಾಕ್ಸಿ ನಿಲ್ದಾಣ, ರೈಲ್ವೆ ನಿಲ್ದಾಣ ಗಳಲ್ಲಿ ತಪಾಸಣೆ ಹೆಚ್ಚಿಸಲಾಗುವುದು. ಮಾಸ್ಕ್ ಧರಿಸದೆ ಹಲವಾರು ಮಂದಿ ಸಂಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮಕ್ಕಳು, ಹಿರಿಯರು ಅನಗತ್ಯವಾಗಿ ಸಾರ್ವಜನಿಕ ಸ್ಥಳಗಳಿಗೆ ತೆರಳಬಾರದು. ಈ ಬಗ್ಗೆ ಹೆಚ್ಚಿನ ಗಮನ ನೀಡಬೇಕು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.