ಕುಂದಾಪುರ, ಏ 16 (DaijiworldNews/MS): ತಾಲೂಕಿನ ಹಟ್ಟಿಕುದ್ರು-ಬಸ್ರೂರು ಸಂಪರ್ಕ ಸೇತುವೆಯ ಬಹುದಿನಗಳ ಕನಸು ನನಸಾಗುತ್ತಿದೆ. ಈಗಾಗಲೇ ಸೇತುವೆ ನಿರ್ಮಾಣದ ಕಾಮಗಾರಿ ಮುಗಿದಿದ್ದು, ಇನ್ನೂ ಸಂಪರ್ಕ ಕಲ್ಪಿಸುವ ಕಾರ್ಯವಷ್ಟೇ ಉಳಿದಿದೆ.
ಹಟ್ಟಿಕುದ್ರು ಹಾಗೂ ಬಸ್ರೂರು ನಡುವೆ ಅಂತರ ಕೇವಲ ನೂರು ಮೀಟರ್ ದೂರ. ಸುಮಾರು 250 -350 ಮನೆಗಳು, ಮೂರು ಸಾವಿರದಷ್ಟು ಜನಸಂಖ್ಯೆ ಹೊಂದಿರುವ ಈ ಊರು ಪ್ರಾಕೃತಿಕವಾಗಿ ಸಮೃದ್ಧಿಯಾಗಿದೆ. ಆದರೆ ಮಳೆಗಾಲದ ನಾಲ್ಕು ತಿಂಗಳು ಕಳೆಯುವುದೆಂದರೆ ಇವರಿಗೆ ಸಾಹಸ ಮಾಡಿದ ಹಾಗೆ. ನದಿಯ ನಡುವಿನ ಕುದ್ರುವಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಜನರ ಸಂಪರ್ಕ, ಸಂಚಾರ ವ್ಯವಸ್ಥೆಗೆ ದೋಣಿಯೇ ಗತಿಯಾಗಿದೆ. ಪ್ರತಿ ನಿತ್ಯ ಹಟ್ಟಿಕುದ್ರುವಿನಿಂದ ಹಾಲಾಡಿ ಹೊಳೆಯನ್ನು ದಾಟಿ ಬಸ್ರೂರು ತಲುಪಬೇಕಾದ ಅನಿವಾರ್ಯತೆ ಇದೆ. ಸುಮಾರು 150ರಿಂದ 170 ಮಂದಿ ಶಾಲಾ ವಿದ್ಯಾರ್ಥಿಗಳು ಪ್ರತಿನಿತ್ಯ ಈ ಹೊಳೆಯನ್ನು ದೋಣಿ ಮೂಲಕ ದಾಟಿಕೊಂಡು ಬಸ್ರೂರಿಗೆ ಬರುತ್ತಿದ್ದಾರೆ. ಮಳೆಗಾಲದಲ್ಲಂತೂ ಮಳೆ ಜೋರಾದಲ್ಲಿ ಇವೆರೆಲ್ಲರಿಗೂ ಶಾಲಾ ಕಾಲೇಜುಗಳಿಗೆ ರಜೆ. ಅಲ್ಲದೇ ಕೃಷಿ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಬಸ್ರೂರನ್ನೇ ಅವಲಂಬಿಸಿರುವುದರಿಂದ ದೋಣಿಯಲ್ಲಿ ನಿತ್ಯ ಪಯಣದ ಕಾಯಕವನ್ನಾಗಿಸಿಕೊಂಡಿದ್ದರು.
ಹಟ್ಟಿಕುದ್ರುವಿನ ಜನತೆ ದೈನಂದಿನ ಎಲ್ಲಾ ಕಾರ್ಯಗಳಿಗೆ ಬಸ್ರೂರನ್ನೆ ಅವಲಂಬಿತರಾಗಿದ್ದಾರೆ. ನೂರು ಮೀಟರ್ ದೂರದಲ್ಲಿರುವ ಬಸ್ರೂರು ಪೇಟೆಗೆ ಆಸ್ಪತ್ರೆ, ಪಡಿತರ, ಶಿಕ್ಷಣಕ್ಕೆ ಅವರು ಬಸ್ರೂರಿಗೆ ಬರಬೇಕಾದ ಇವರು ಹೆಚ್ಚಾಗಿ ದೋಣಿಯನ್ನೇ ಅವಲಂಬಿಸಿದ್ದಾರೆ. ಈ ಹಿಂದೆ ದ್ವೀಪವಾಗಿದ್ದ ಹಟ್ಟಿಕುದ್ರುವಿಗೆ 2004ರಲ್ಲಿ ಹಟ್ಟಿಯಂಗಡಿ -ಹಟ್ಟಿಕುದ್ರು ಸಂಪರ್ಕಿಸುವ ಸೇತುವೆ ನಿರ್ಮಾಣವಾಯಿತು. ಆದರೆ ಈ ಸೇತುವೆ ಮೂಲಕ ಹಟ್ಟಿಯಂಗಡಿಗೆ ಹೋಗಿ ಮತ್ತೆ ಕುಂದಾಪುರ-ಬಸ್ರೂರು ಸುತ್ತು ಬಳಸಿ ತಲುಪಬೇಕಾಗಿತ್ತು.
ಈ ಸೇತುವೆಯ ನಿರ್ಮಾಣದ ಬಗ್ಗೆ ಸಾಕಷ್ಟು ಮನವಿಗಳು ಸರ್ಕಾರಕ್ಕೆ ತಲುಪಿತ್ತು. ಶಾಸಕರು ಕೂಡಾ ಸೇತುವೆ ನಿರ್ಮಾಣದ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿದ್ದರು.
ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ವಿಶೇಷ ಮುತುವರ್ಜಿ ವಹಿಸಿ ಬಸ್ರೂರು -ಹಟ್ಟಿಕುದ್ರು ಸೇತುವೆಗೆ ಕರ್ನಾಟಕ ನೀರಾವರಿ ನಿಗಮ ಮೂಲಕ ಅನುದಾನ ಮಂಜೂರು ಮಾಡಿಸಿದ್ದರು. 19 ಕೋಟಿ 49 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ ಆಗಲಿದೆ. 330 ಮೀಟರ್ ಉದ್ದದ ಸೇತುವೆ ಇದಾಗಿದೆ.