ಉಡುಪಿ, ಎ.15 (DaijiworldNews/PY): "ನಾನು ಯಾವ ರಾಜಕೀಯ ನಾಯಕರ ಪ್ರಭಾವ ಬಳಸಿಕೊಂಡು ಉಡುಪಿಗೆ ಬಂದಿಲ್ಲ. ಮುಂದೆ ರಾಜಕೀಯ ಸೇರುವ ಅಭಿಲಾಷೆ ಇಲ್ಲ. ಅಧಿಕಾರಿಯಾಗಿ ಮುಂದುವರಿಯುವ ಅಸೆ ಇದೆ. ಹಿಂದೆಯೂ ಮುಂದೆಯೂ ನನ್ನ ಸಾಮರ್ಥ್ಯ ಬಳಸಿಕೊಂಡೇ ಸೇವೆ ಮಾಡುತ್ತೇನೆ. ನಾನು ಒಮ್ಮೆ ಶಿಕ್ಷಣ ಇಲಾಖೆಯ ಆಯುಕ್ತನಾಗಬೇಕು ಎನ್ನುವ ಕನಸಿದೆ" ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಉಡುಪಿ ಪ್ರೆಸ್ನಲ್ಲಿ ಗುರುವಾರ ಆಯೋಜಿಸಿದ ತಿಂಗಳ ಮೊದಲ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಬಡ ಮಕ್ಕಳು ಶಿಕ್ಷಣ ವಂಚಿತರಾಗಬಾರದು. ಮುಚ್ಚಿದ ಸರಕಾರಿ ಶಾಲೆಗಳು ಮತ್ತೆ ತೆರೆಯಬೇಕು. ಶಿಕ್ಷಣದಲ್ಲಿ ಸಂಚಲನ ಮೂಡಿಸಬೇಕು ಎನ್ನುವ ಅಭಿಲಾಷೆ ಇದೆ. 60 ವರ್ಷಕ್ಕೆ ಸೇವೆ ಆದಮೇಲೆ ಆಗಿನ ಶಿಕ್ಷಣ ಇಲಾಖೆಯ ಸಚಿವರಲ್ಲಿ ಈ ಬಗ್ಗೆ ಅಪೇಕ್ಷೆ ವ್ಯಕ್ತಪಡಿಸುತ್ತೇನೆ. ಅವಕಾಶ ಸಿಕ್ಕರೆ, ಖಂಡಿತವಾಗಿ ಕನಸನ್ನು ನನಸಾಗಿಸುತ್ತೇನೆ" ಎಂದು ಹೇಳಿದರು.
"ನಾನು ಯಾವ ರಾಜಕೀಯ ನಾಯಕರ ಪ್ರಭಾವ ಬಳಸಿಕೊಂಡು ಉಡುಪಿಗೆ ಬಂದಿಲ್ಲ. ಹಿಂದೆಯೂ ಮುಂದೆಯೂ ನನ್ನ ಸಾಮರ್ಥ್ಯ ಬಳಸಿಕೊಂಡೇ ಸೇವೆ ಮಾಡುತ್ತೇನೆ. ಹೊಟ್ಟೆಪಾಡಿಗಾಗಿ ಕೆಲಸ ಮಾಡಬೇಕು ಎಂದು ಓದಿದವನು. ಮೂರು ಹೊತ್ತಿಗೂ ಕಷ್ಟಪಟ್ಟಂತಹ ದಿನಗಳು ನೆನಪಿದೆ. ಹಾಗಾಗಿ ರೋಲ್ ಮಾಡೆಲ್ ಅಂತ ಯಾರೂ ಇಲ್ಲ. ಟಿಸಿಎಚ್ ಮಾಡಿ ಶಿಕ್ಷಕರಾಗಿ ನಮ್ಮ ಮನೆಯನ್ನು ಸರಿ ಮಾಡಬೇಕು. ಅಪ್ಪ ಅಮ್ಮನ್ನ ಸಾಕಬೇಕು ಅಂತ ಕೆಲಸ ಮಾಡಿದ್ದೆ. ಬಿಎಡ್ ಮಾಡಿದೆ. ನಂತರ ಕೆಎಎಸ್ ಅರ್ಜಿ ಹಾಕಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲಿ ಪಾಸಾಗಿ ರಾಜ್ಯದಲ್ಲಿ 14ನೇ ರ್ಯಾಂಕ್ ಪಡೆದೆ. ಒಮ್ಮೆ ಕೆಲಸ ಸೇರಿದ ಮೇಲೆ ನನ್ನ ಕಾರ್ಯ ವೈಖರಿಯಿಂದ ಬಡ್ತಿ ಸಿಕ್ಕಿದೆ" ಎಂದರು.
"ಉಡುಪಿಯಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸಿದಾಗ ಭೂಮಿಯ ಮೌಲ್ಯ ಹೆಚ್ಚಾಗಿದೆ. ಹಾಗಾಗಿ ಕೈಗಾರಿಕೆಗಳನ್ನು ಸ್ಥಾಪಿಸುವುದರಲ್ಲಿ ಹಿನ್ನೆಡೆ ಆಗುತ್ತಿದೆ. ಬೈಂದೂರಿನಲ್ಲಿ 60 ಎಕ್ರೆ ಭೂಮಿಯನ್ನು ಗುರುತಿಸಿ ಕೈಗಾರಿಕಾ ವಲಯವಾಗಿ ಅಭಿವೃದ್ದಿ ಪಡಿಸಲು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಉಡುಪಿ ಮತ್ತು ಕಾಪು ಬಾಗದಲ್ಲಿ ಒಂದು ಜಗವನ್ನು ಗುರುತು ಮಾಡಬೇಕು" ಎಂದು ಹೇಳಿದರು.
"ಕಾರ್ಕಳದಲ್ಲಿ 20 ಎಕ್ರೆ ಜಾಗದಲ್ಲಿ ಜವಳಿ ಪಾರ್ಕ್ ಮಾಡಲು ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ. ಇನ್ನು ಕಾರ್ಕಳದಲ್ಲಿ ಪಿಪಿಪಿ ಮಾದರಿಯಲ್ಲಿ ಫುಡ್ ಪಾರ್ಕ್ ಮಾಡಲು ಅನುಮೋದನೆ ಸಿಕ್ಕಿದೆ. ಉಡುಪಿಯಲ್ಲಿ ಫುಡ್ ಪ್ರಾಸೆಸಿಂಗ್ ಉದ್ಯಮಕ್ಕೆ ಉತ್ತಮ ಭವಿಷ್ಯ ಇದೆ. ಪ್ರತಿ ತಾಲೂಕಿನಲ್ಲೂ ಟೆಕ್ಟ್ ಟೈಲ್ ಪಾರ್ಕ್ ಮತ್ತು ಕಾರ್ಕಳಲ್ಲಿ ಫರ್ನಿಚರ್ ಪಾರ್ಕ್, ಶಿಲ್ಪಕಲಾ ಪಾರ್ಕ್ ಮಾಡುವ ಯೋಜನೆ ಇದೆ. ಫರ್ನಿಚರ್ ವಸ್ತುಗಳು ಅಂದರೆ ಉಡುಪಿ ಕಡೆ ನೋಡಬೇಕು. ಚೀನಾ ಅಲ್ಲ. ಇಲ್ಲಿ ಕೌಶಲ್ಯ ಇರುವವರು ತುಂಬಾ ಮಂದಿ ಇದ್ದಾರೆ. ಉಡುಪಿಯಲ್ಲಿ ಬಂಡವಾಳಶಾಹಿಗಳ ಕೊರತೆ ಇಲ್ಲ ಎಂದರು.
"ಮುಖ್ಯವಾಗಿ 500 ಎಕರೆ ಜಾಗವನ್ನು ಕೈಗಾರಿಕೋದ್ಯಮ ಅಭಿವೃದ್ದಿಗೆ ಸರಕಾರ ಕೇಳಿದೆ ಅದನ್ನು ಹುಡುಕುವುದು ದೊಡ್ಡ ಸವಾಲಾಗಿದೆ. ಒಂದು ವೇಳೆ ಬ್ರಹ್ಮಾವರ ಸಕ್ಕರೆ ಪುನಶ್ಚೇತನ ಮಾಡಲು ಸಾಧ್ಯವಿಲ್ಲದಿದ್ದರೆ ಅದನ್ನು ಸರಕಾರಕ್ಕೆ ಪ್ರಸ್ತಾಪ ಕಳುಹಿಸುತ್ತೇವೆ" ಎಂದರು.
" ಇಲ್ಲಿಯ ಜನಪ್ರತಿನಿಧಿಗಳು ಬಹಳ ಸಾಮಾಜಿಕ ಕಳಕಳಿ ಉಳ್ಳವರು. ಅಧಿಕಾರಿಗಳ ಮತ್ತು ಜನರ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಾ ಇದ್ದಾರೆ. ನನ್ನ ಕಲ್ಪನೆಯಂತೆ ಇಲ್ಲಿಯ ಜನಪ್ರತಿನಿಧಿಗಳು ಇದ್ದಾರೆ" ಎಂದು ಹೇಳಿದರು.
"ಮಾಸ್ಕ್ ಹಾಕದೇ ಇರುವವರಿಗೆ ದಂಡ ಹಾಕುವುದು ಜಾಗೃತಿ ಮೂಡಿಸಲು, ಹಣ ಮಾಡುವುದಕ್ಕಾಗಿ ಅಲ್ಲ. ಸರಕಾರಕ್ಕೆ ದಂಡದ ಹಣ ಯಾವುದಕ್ಕೂ ಅಲ್ಲ. ನಾಗರೀಕರಿಗೆ ತಮ್ಮ ತಪ್ಪಿನ ಅರಿವು ಮೂಡಿಸುವುದಕ್ಕಾಗಿ ದಂಡ ವಿಧಿಸಲಾಗುತ್ತಿದೆ. ಕೆಲವರು ಇದರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಸಾರ್ವಜನಿಕರು ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕೊಡಿಸುವುದೊಂದೇ ಈಗ ಇರುವ ಮಾರ್ಗ" ಎಂದು ತಿಳಿಸಿದರು.
"ವಲಸೆ ಕಾರ್ಮಿಕರು ಇಲ್ಲದೆ ಯಾವ ಕೆಲಸವೂ ನಡೆಯಲ್ಲ. ಅವರಿಗೂ ಜಾಗೃತಿ ಮೂಡಿಸುವ ಅಗತ್ಯ ಇದೆ. ಮುಂದಿನ ದಿನಗಳಲ್ಲಿ ಅವರಿಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಮಾಸ್ಕ್ ವಿತರಣೆ ಮಾಡುತ್ತೇವೆ" ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಎನ್, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ, ಪ್ರೆಸ್ ಕ್ಲಬ್ ಸಂಚಾಲಕ ಸುಭಾಶ್ಚಂದ್ರ ವಾಗ್ಲೆ, ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ ಮಾರ್ಪಳ್ಳಿ ಉಪಸ್ಥಿತರಿದ್ದರು.