ಕಾಸರಗೋಡು, ಏ 15 (DaijiworldNews/MS): ಕೋಳಿ ಸಾಕಣೆ ಗೂಡಿನಲ್ಲಿ ಬಚ್ಚಿಡಲಾಗಿದ್ದ 9. 5 ಕಿಲೋ ಗಾಂಜಾವನ್ನು ಕಾಸರಗೋಡು ಅಬಕಾರಿ ದಳದ ಸಿಬಂದಿಗಳು ವಶಪಡಿಸಿ ಓರ್ವನನ್ನು ಬಂಧಿಸಿದ್ದಾರೆ.ಬಂಧಿತನನ್ನು ಮಧೂರು ಚಟ್ಟಂಗುಯಿ ಹಿದಾಯತ್ ನಗರದ ಅಬ್ದುಲ್ ರಹಮಾನ್ ಎಂದು ಗುರುತಿಸಲಾಗಿದೆ.
ಮನೆ ಸಮೀಪದ ಕೋಳಿ ಗೂಡಿನಲ್ಲಿ ಗಾಂಜಾವನ್ನು ಬಚ್ಚಿಟ್ಟಿದ್ದು , ಅಬಕಾರಿ ದಳ ಸಿಬ್ಬಂದಿಗಳು ಮನೆಗೆ ದಾಳಿ ನಡೆಸಿ ದಾಗ ಗಾಂಜಾ ಪತ್ತೆಯಾಗಿದೆ. ಅಬ್ದುಲ್ ರಹಮಾನ್ ಈ ಹಿಂದೆಯೂ ಮಾದಕ ದ್ರವ್ಯ ಪ್ರಕರಣದ ಆರೋಪಿಯಾಗಿದ್ದು, ಈ ಹಿನ್ನಲೆಯಲ್ಲಿ ಅಬಕಾರಿ ದಳದ ಸಿಬಂದಿಗಳು ಈತನ ಬಗ್ಗೆ ನಿಗಾ ವಹಿಸಿದ್ದರು . ಕೆಲ ದಿನಗಳ ಹಿಂದೆ 13 ಕಿಲೋ ಗಾಂಜಾ ಸಹಿತ ವಡಗರದಿಂದ ಇಬ್ಬರನ್ನು ಬಂಧಿಸಲಾಗಿತ್ತು .
ಇವರನ್ನು ತನಿಖೆ ನಡೆಸಿದಾಗ ಅಬ್ದುಲ್ ರಹಮಾನ್ ಕುರಿತು ಮಾಹಿತಿ ಲಭಿಸಿತ್ತು . ಈ ಹಿನ್ನಲೆಯಲ್ಲಿ ಈತನ ಮನೆಗೆ ದಾಳಿ ನಡೆಸಲಾಗಿತ್ತು. ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡಿ ಕಾಸರಗೋಡು ಜಿಲ್ಲೆಯ ಹಲವೆಡೆ ಚಿಲ್ಲರೆಯಾಗಿ ಈತ ಮಾರಾಟ ಮಾಡುತ್ತಿದ್ದ ಎಂದು ಅಬಕಾರಿ ದಳದ ಸಿಬಂದಿಗಳು ತಿಳಿಸಿದ್ದಾರೆ.