ಉಡುಪಿ, ಏ.15 (DaijiworldNews/MB) : ''ಜಿಲ್ಲೆಯಲ್ಲಿ ಸರಕಾರಿ ಸ್ವಾಮ್ಯದಲ್ಲಿ ಒಟ್ಟು 480 ಆಕ್ಸಿಜನ್ ಬೆಡ್ಸ್ಗಳಿದ್ದು 4 ಬಳಕೆಯಾಗಿದೆ. 90 ಐಸಿಯು ಬೆಡ್ಸ್ಗಳು, ಅದರಲ್ಲಿ 10 ಬೆಡ್ಸ್ಗಳು ಮಾತ್ರ ಬಳಕೆಯಾಗಿದೆ. ಕೆಎಮ್ಸಿ ಆಸ್ಪತ್ರೆಯಲ್ಲಿ ಈಗಾಗಲೇ ಸರಕಾರ ಹೊರಡಿಸಿರುವ ಆದೇಶದಂತೆ ಮುನ್ನಚ್ಚರಿಕೆಗಾಗಿ ಶೇ.20 ಬೆಡ್ಸ್ಗಳನ್ನು ಮೀಸಲಿಡುವ ಸಲುವಾಗಿ ಆ ಕ್ರಮ ಕೈಗೊಂಡಿದ್ದಾರೆ, ಕೋವಿಡ್ ಹೆಚ್ಚಾಗಿದೆ ಎಂಬ ಭಯ ಯಾರಿಗೂ ಬೇಡ'' ಎಂದು ಜನರ ಗೊಂದಲವನ್ನು ಸ್ಪಷ್ಟ ಪಡಿಸಿದರು. ''ಇನ್ನು ಸರಕಾರಿ ಆಸ್ಪತ್ರೆಯಲ್ಲಿ ಶೇ50 ಬೆಡ್ಸ್ಗಳನ್ನು ಕಾಯ್ದಿರಿಸಬೇಕಾಗಿದೆ. 55 ವೆಂಟಿಲೇಟರ್ಸ್ ಇದ್ದು 2 ಮಾತ್ರ ಬಳಕೆಯಾಗಿದೆ. ಹೆಚ್ಎಫ್ಎನ್ಸಿ 35 ಇದ್ದು 4 ಮಾತ್ರಬಳಕೆಯಾಗಿದೆ'' ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಗುರುವಾರ ಪ್ರತಿಕ್ರಿಯಿಸಿದರು.
ಅವರು ಉಡುಪಿ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ ಮೊದಲ ತಿಂಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಗದೀಶ್ ಮಾತನಾಡಿದರು.
''ಮಣಿಪಾಲದ ಎಮ್ಐಟಿ ಕ್ಯಾಂಪಸ್ನಲ್ಲಿ ಅಧಿಕ ಕೊರೊನಾ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಆ ಪ್ರದೇಶವನ್ನು ಕಂಟೈನ್ಮೆಂಟ್ ಮಾಡಿದ್ದರಿಂದ ವೈರಸ್ ಹರಡುವಿಕೆಯನ್ನು ನಿಯಂತ್ರಣ ಮಾಡಲು ಸಾಧ್ಯವಾಯಿತು. ಕಳೆದ 15 ದಿನದಲ್ಲಿ 34,900 ಪರೀಕ್ಷೆಗಳನ್ನು ನಡೆಸಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಾ ಇರುವುದನ್ನು ನಾವು ಕಾಣುತ್ತಿದ್ದೇವೆ'' ಎಂದು ಹೇಳಿದರು.
''ಕಳೆದ 15 ದಿನಗಳಲ್ಲಿ ಒಟ್ಟು 1101 ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಶೇ 13.15 ಪಾಸಿಟಿವ್ ಆಗಿದೆ. ಕಳೆದ 7 ದಿನಗಳಲ್ಲಿ ಒಟ್ಟು 18000 ಪರೀಕ್ಷೆ ನಡೆಸಿದ್ದು 567 ಪಾಸಿಟಿವ್ ಆಗಿದ್ದು ಶೇ 3.14 ಪಾಸಿಟಿವ್ ಪ್ರಕರಣ ವರದಿ ಆಗಿದೆ. ಕಳೆದ 3 ದಿನಗಳಲ್ಲಿ ಒಟ್ಟು 236 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಶೇ 3.19 ಪಾಸಿಟಿವ್ ಪ್ರಕರಣ ಆಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಕೋವಿಡ್ ಸಮತೋಲನವಾಗಿ ಪ್ರಕರಣ ದಾಖಲಾಗುತ್ತಿದೆ'' ಎಂದು ತಿಳಿಸಿದರು.
''ಪ್ರಸ್ತುತ 436 ಸಕ್ರಿಯ ಪ್ರಕರಣಗಳಿದ್ದು, 82 ಮಂದಿ ಆಸ್ಪತ್ರೆಯಲ್ಲಿ, 354 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದಾರೆ, ಇದುವರೆಗೆ ಜಿಲ್ಲೆಯಲ್ಲಿ 192 ಸಾವು ಸಂಭವಿಸಿದೆ. ಶೇ. 0.73 ಕೊರೊನಾ ಮರಣ ಪ್ರಮಾಣ ಜಿಲ್ಲೆಯಲ್ಲಿದೆ'' ಎಂದು ಹೇಳಿದರು.
''ಶೇ. 95 ರಷ್ಟು ಲಕ್ಷಣ ರಹಿತವಾಗಿದ್ದು ವೈರಸ್ ಹರಡುವ ಸಾಧ್ಯತೆ ಹೆಚ್ಚಿದೆ. ಪ್ರತಿದಿನ 2500-3000 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತವೆ. ಪರೀಕ್ಷೆ ಪ್ರಮಾಣ ಹೆಚ್ಚಿಸಲು 50 ಕ್ಕೂ ಹೆಚ್ಚು ಸ್ವಾಬ್ ಕಲೆಕ್ಟರ್ಸ್ಗಳ ನೇಮಕ ಮತ್ತು ವಾಹನ ವ್ಯವಸ್ಥೆ ಕೂಡಾ ಆಗಿದೆ'' ಎಂದು ಡಿಸಿ ಜಿ ಜಗದೀಶ್ ತಿಳಿಸಿದರು.
''ಎಲ್ಲರೂ ಸರಕಾರದ ನಿಯಮಗಳನ್ನು ಪಾಲಿಸಿ. ಜನರು ಆರೋಗ್ಯದ ಬಗ್ಗೆ ಅವರೇ ಜಾಗೃತರಾಗಬೇಕು. ಸರಕಾರ ಎಲ್ಲರ ಆರೋಗ್ಯ ರಕ್ಷಣೆ ಮಾಡಲು ಸಾಧ್ಯವಿಲ್ಲ'' ಎಂದು ಡಿಸಿ ತಿಳಿಸಿದರು.