ಮಂಗಳೂರು,ಏ 15 (DaijiworldNews/MS): ಮೂಡುಬಿದಿರೆ, ಬಜಪೆ, ಮೂಲ್ಕಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಸರಣಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಏ.15 ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಆಯುಕ್ತರು," ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳಾದ ಮೊಹಮ್ಮದ್ ಜುಬೈರ್, ಇಬ್ರಾಹಿಂ ಲತೀಫ್, ರಾಕೇಶ್, ಅರ್ಜುನ್, ಮೋಹನ್, ಬೊಳಿಯಾರ್ ಮನ್ಸೂರ್ ಎಂಬ ಆರು ಮಂದಿಯನ್ನು ಬಂಧಿಸಲಾಗಿದೆ. ಈ ಹಿಂದೆ ಈ ಪ್ರಕರಣದಲ್ಲಿ ಒಂಬತ್ತು ಜನರನ್ನು ಈಗಾಗಲೇ ಬಂಧಿಸಲಾಗಿದ್ದು, ಈ ಪ್ರಕರಣದಲ್ಲಿ ಒಟ್ಟು ಈವರೆಗೆ 15 ಮಂದಿಯನ್ನು ಬಂಧಿಸಲಾಗಿದೆ. ಈ ತಂಡವು ಸರಣಿ ಹೆದ್ದಾರಿ ದರೋಡೆ, ವಾಹನ ಕಳ್ಳತನ, ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದರು " ಎಂದು ವಿವರಿಸಿದ್ದಾರೆ.
ಮಂಗಳೂರು ನಗರದಲ್ಲಿ 7 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 8, ಹಾಸನದಲ್ಲಿ 2, ಚಿಕ್ಕಮಗಳೂರಿನಲ್ಲಿ 3, ಕೊಡಗುವಿನಲ್ಲಿ 5, ಉಡುಪಿಯಲ್ಲಿ 2 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ1 ಪ್ರಕರಣಗಳು ದಾಖಲಾಗಿದ್ದು ಒಟ್ಟು 28 ಪ್ರಕರಣಗಳನ್ನು ಈವರೆಗೆ ಬೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳಿಂದ 22 ಲಕ್ಷ ಮೌಲ್ಯದ ಇನ್ನೋವಾ ಕಾರು, 7 ಲಕ್ಷ ಮೌಲ್ಯದ ಕ್ರೆಟಾ ಕಾರು, 8 ಲಕ್ಷ ಮೌಲ್ಯದ ಒಂದು ಐ 20 ಕಾರು, 32,000 ರೂ.ಗಳ 8 ಮೊಬೈಲ್ ಫೋನ್, 2,20,000 ಲಕ್ಷ ಮೌಲ್ಯದ 54 ಗ್ರಾಂ ಚಿನ್ನ, 2,30,000 ರೂ.ಗಳ 3.5 ಕೆ.ಜಿ ಬೆಳ್ಳಿ ಮತ್ತು 2 ಕತ್ತಿ ಹೀಗೆ ಕೃತ್ಯಕ್ಕೆ ಬಳಸಿದ ಒಟ್ಟು 41.82 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿ ಜುಬೈರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 25 ಪ್ರಕರಣಗಳು ದಾಖಲಾಗಿದ್ದು, , ಲತೀಫ್, ರಾಕೇಶ್, ಅರ್ಜುನ್ ವಿರುದ್ಧ 5 ಪ್ರಕರಣ ದಾಖಲಾಗಿದ್ದರೆ ಹಾಗೂ, ಬೊಳಿಯಾರ್ ಮನ್ಸೂರ್ ಕೊಣಾಜೆ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಉಪ್ಪಿನಂಗಡಿ ಪೊಲೀಸ್ ಠಾಣೆ, ಹಾಸನದ ಅರೆಹಳ್ಳಿ , ಪುಂಜಾಲಕಟ್ಟೆ , ಬೆಂಗಳೂರು ವಿಜಯನಗರ, ಮೂಡಬಿದಿರೆ, ಬಜಪೆ, ಸಕಲೇಶಪುರ, ವಿರಾಜಪೇಟೆ, ವೇಣೂರು, ಬಂಟ್ವಾಳ, ಭಾಗಮಂಡಲ, ಕುಶಾಲನಗರ, ಉಡುಪಿ, ಹರಿಹರಪುರ, ಚಿಕ್ಕಮಗಳೂರು , ಬೆಣಕಲ್ ದರ್ಮಸ್ಥಳ, ನಾಪೋಕ್ಲು, ಕೋಟ ಹೀಗೆ ವಿವಿಧ ಠಾಣೆಯಲ್ಲಿ ಬಂಧಿತ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ಈ ತಂಡವೂ ಹಾಸನದಲ್ಲಿ ಆಕ್ಸಿಸ್ ಬ್ಯಾಂಕ್ ಮನೆ ಕಳ್ಳತನ ನಡೆಸಿದ್ದು , ಆ ಮನೆಯಿಂದ ಪರವಾನಗಿ ಪಡೆದ ಪಿಸ್ತೂಲ್ ಕದ್ದು ಅದನ್ನು ಫಳ್ನೀರ್ನಲ್ಲಿ ನಡೆದ ಗುಂಡಿನ ಚಕಮಕಿಯ ಆರೋಪಿ ಸಮೀರ್ ಗೆ ಮಾರಿದ್ದು ಆತ ಇದೇ ಕೃತ್ಯಕ್ಕೆ ಬಳಸಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಈ ತಂಡ ಚೆನ್ನೈ, ಗೋವಾ ಪ್ರಯಾಣಿಸುವ ವೇಳೆ ಹೆದ್ದಾರಿಯಲ್ಲಿ ವಾಹನ ದರೋಡೆ ಹಾಗೂ ನಗದು ದರೋಡೆ ನಡೆಸಿತ್ತು.ಈ ಗ್ಯಾಂಗ್ ನಲ್ಲಿ ಚದುರಿಕೊಂಡಂತೆ 50-60 ಜನರಿದ್ದು, ಬೇಕಾದ ಸ್ಥಳದಲ್ಲಿ ಸಂಚು ನಡೆಸಲು ತಮ್ಮದೇ ತಂಡದ ಸದಸ್ಯರ ಗುಂಪು ರಚಿಸುತ್ತಾರೆ. ಕೃತ್ಯಗಳಿಗೆ ಬಾಡಿಗೆಗೆ ಕಾರು ಪಡೆದು ಬಳಿಕ ಕಾರು ಕಾಣೆಯಾದ ಬಗ್ಗೆ ಸುಳ್ಳು ದೂರು ದಾಖಲಿಸುತ್ತಾರೆ. ಜೈಲಿನೊಳಗೆ ತಮ್ಮ ಗ್ಯಾಂಗ್ ಆಂತರಿಕ ಜಾಲವನ್ನು ಅಭಿವೃದ್ಧಿಪಡಿಸಿದ್ದಾರೆ, ಇನ್ನಷ್ಟು ಪ್ರಕರಣ ಬೇಧಿಸಿದಾಗ ಇವೆಲ್ಲವೂ ಬೆಳಕಿಗೆ ಬರಬೇಕಾಗಿದ್ದು, ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯವಾಗಬಹುದು. ಇವರಲ್ಲದೇ ಆರೋಪಿಗಳ ಸಹಚರರ , ಹಾಗೂ ಕೃತ್ಯಕ್ಕೆ ಆರ್ಥಿಕವಾಗಿ, ಹಾಗೂ ಇತರ ಕಾರಣಕ್ಕೆ ಸಹಕರಿಸಿದ ಜನರ ಸುದೀರ್ಘ ಪಟ್ಟಿ ಇದ್ದು ಇವರೆಲ್ಲರನ್ನು ವಶಕ್ಕೆ ಪಡೆದುಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ.