ಮಂಗಳೂರು, ಏ.15 (DaijiworldNews/MB) : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಸ್ವಾಗತ ದ್ವಾರದಲ್ಲಿರುವ ಅದಾನಿಯ ಹೆಸರನ್ನು ತೆಗೆದುಹಾಕದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಎಂಎಲ್ಸಿ ಮತ್ತು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಎಚ್ಚರಿಸಿದ್ದಾರೆ.
ಏಪ್ರಿಲ್ 14 ರ ಬುಧವಾರ ಇಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಐವನ್ ಡಿಸೋಜಾ, "ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಎಂಐಎ) ಅದಾನಿಗೆ ಹಸ್ತಾಂತರಿಸಿದ ನಂತರ, ಅದಾನಿಯ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡುವುದು ಒಪ್ಪಂದ ಉಲ್ಲಂಘನೆಯಾಗಿದೆ ಎಂದು ನಮಗೆ ಆರ್ಟಿಐ ಮಾಹಿತಿ ಮೂಲಕ ತಿಳಿದಿದೆ. ಅದಾನಿ ಈ ವಿಮಾನ ನಿಲ್ದಾಣವನ್ನು ಸ್ವಾಧೀನಕ್ಕೆ ಪಡೆದ ಬಳಿಕ ವಿಮಾನ ನಿಲ್ದಾಣದಲ್ಲಿ ಪ್ರಗತಿ ಕುಂಠಿತಗೊಂಡಿದೆ. ಇನ್ನು ಈಗ ನಿಲ್ದಾಣದಲ್ಲಿ ಸರಿಯಾದ ಸೌಲಭ್ಯಗಳಿಲ್ಲ, ವಿಮಾನಗಳ ಕಾರ್ಯ ನಿರ್ವಹಣೆಯೂ ಸರಿಯಾಗಿಲ್ಲ. ಇದು ಸಂಪೂರ್ಣವಾಗಿ ಒಪ್ಪಂದದ ಉಲ್ಲಂಘನೆಯಾಗಿದೆ'' ಎಂದು ಆರೋಪಿಸಿದ್ದಾರೆ.
"ಮಂಗಳೂರಿನಿಂದ ಮುಂಬೈ ಮತ್ತು ಮೈಸೂರಿಗೆ ಹಾರಾಟ ನಡೆಸುವ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಇತರ ಕಂಪನಿಗಳೂ ಸಹ ಎಂಐಎಯಿಂದ ತಮ್ಮ ವಿಮಾನಗಳ ಕಾರ್ಯಚರಣೆ ನಡೆಸುವುದರಿಂದ ಈ ನಗರಗಳಲ್ಲಿ ತಮ್ಮ ವಿಮಾನಗಳ ಸೇವೆ ನೀಡಲು ಹಿಂಜರಿಯುತ್ತಿದೆ. ಖಾಸಗೀಕರಣದ ಹೆಸರಿನಲ್ಲಿ ಒಪ್ಪಂದದ ಸಂಪೂರ್ಣ ಉಲ್ಲಂಘನೆ ಮಾಡಲಾಗಿದೆ'' ಎಂದು ದೂರಿದ್ದಾರೆ.
''ಗೋವಾ, ಕೋಝಿಕೋಡ್, ಕೊಚ್ಚಿ, ಹೈದರಾಬಾದ್, ಚೆನ್ನೈ, ಕಲಬುರಗಿ, ಮೈಸೂರು ಮತ್ತು ಬೀದರ್ ಮುಂತಾದ ಪ್ರಮುಖ ಸ್ಥಳಗಳಿಗೆ ಮಂಗಳೂರಿನಿಂದ ವಿಮಾನ ಸೇವೆ ಒದಗಿಸಲು ಏಕೆ ವಿಫಲರಾಗಿದ್ದಾರೆ ಎಂಬ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರ ಸ್ಪಷ್ಟೀಕರಣವನ್ನು ನೀಡಬೇಕು. ಗೋ-ಏರ್ ಸಂಸ್ಥೆ ವಿಮಾನ ಪ್ರಯಾಣ ಸೇವೆ ಆರಂಭಿಸಲು ಮುಂದೆ ಬಂದಿದೆ, ಆದರೆ ಅವರ ವಿಮಾನ ಸೇವೆ ಇನ್ನಷ್ಟೇ ಕಾರ್ಯಾಚರಣೆ ಪ್ರಾರಂಭಿಸಬೇಕಿದೆ. ಬೆಂಗಳೂರು ಮತ್ತು ದೆಹಲಿಗೆ ಕ್ರಮವಾಗಿ ರಾತ್ರಿ 11: 30 ಮತ್ತು 11 ಗಂಟೆಗೆ ವಿಮಾನ ಹಾರಾಟ ನಿಗದಿಪಡಿಸಿದರೆ, ಈ ಸಮಯದಲ್ಲಿ ಅಧಿಕ ಪ್ರಯಾಣಿಕರು ಬರಲು ಹೇಗೆ ಸಾಧ್ಯ'' ಎಂದು ಪ್ರಶ್ನಿಸಿದರು.
"ಮಂಗಳೂರು ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದು ಗುರುತಿಸಿ 16 ವರ್ಷಗಳಾಗಿವೆ. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರವು ಕೊಲ್ಲಿ ರಾಷ್ಟ್ರಗಳಿಗೆ ವಿಮಾನ ಸೇವೆ ಒದಗಿಸಿರುವುದನ್ನು ಹೊರತುಪಡಿಸಿ, ಶ್ರೀಲಂಕಾ, ಥೈಲ್ಯಾಂಡ್, ಸಿಂಗಾಪುರ ಮತ್ತು ಬ್ಯಾಂಕಾಕ್ನಂತಹ ಪ್ರವಾಸಿ ಸ್ಥಳಗಳಿಗೆ ವಿಮಾನ ಒದಗಿಸಲು ವಿಫಲವಾಗಿದೆ. ನಗರದಲ್ಲಿ ಶಿರಡಿ ಮತ್ತು ತಿರುಪತಿಗೆ ಆಗಾಗ್ಗೆ ಭೇಟಿ ನೀಡುವ ಬಹಳಷ್ಟು ಭಕ್ತರು ಇದ್ದಾರೆ. ಆದರೆ ಮಂಗಳೂರಿನಿಂದ ಈ ನಗರಗಳಿಗೆ ಒಂದೇ ಒಂದು ವಿಮಾನವೂ ಇಲ್ಲ. ಪ್ರಯಾಣಿಕರ ಕೊರತೆಯಿಂದಾಗಿ ಈ ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿರುವ ತನ್ನ ಗುರುತನ್ನು ಕಳೆದುಕೊಳ್ಳುವ ಹಾದಿಯಲ್ಲಿದೆ. ವಿಮಾನ ನಿಲ್ದಾಣ ಅಧಿಕಾರಿಗಳು ಕಾರ್ಗೋ ವಿಮಾನಗಳ ಸಂಪರ್ಕ ಒದಗಿಸುವಲ್ಲಿಯೂ ವಿಮಾನ ನಿಲ್ದಾಣ ಅಧಿಕಾರಿಗಳು ವಿಫಲವಾಗಿದ್ದಾರೆ. ಒಟ್ಟಾರೆಯಾಗಿ, ಎಂಐಎ ಜನ ಸ್ನೇಹಿ ವಿಮಾನ ನಿಲ್ದಾಣವಾಗಲು ವಿಫಲವಾಗಿದೆ'' ಎಂದು ಟೀಕಿಸಿದ್ದಾರೆ.
"ಉಡಾನ್ ಯೋಜನೆಯ ಪ್ರಕಾರ, ಉಡುಪಿಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸುವ ಅಗತ್ಯವಿದೆ. ಇದರಿಂದಾಗಿ ಪ್ರಯಾಣಿಕರಿಗೆ ಕೈಗೆಟುಕುವ ವೆಚ್ಚದಲ್ಲಿ ವಿಮಾನ ಸೇವೆ ಒದಗಿಸಲು ಸಾಧ್ಯವಾಗುತ್ತದೆ. ನಮ್ಮ ಸಂಸದರಿಗೆ ಈ ಸಮಸ್ಯೆಯನ್ನು ತಿಳಿಯುವ ಇಚ್ಛಾಶಕ್ತಿಯೂ ಇಲ್ಲ. ವಿಮಾನಯಾನ ಸಚಿವರು ಇದನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಕಾಂಗ್ರೆಸ್ 'ವಿಮಾನ ನಿಲ್ದಾಣವನ್ನು ಉಳಿಸಿ' ಎಂಬ ಅಭಿಯಾನವನ್ನು ನಡೆಸಲಿದೆ'' ಎಂದು ಐವನ್ ಡಿಸೋಜಾ ಎಚ್ಚರಿಕೆ ನೀಡಿದ್ದಾರೆ.