ಮಂಗಳೂರು, ಏ 15 (DaijiworldNews/MS): ನಿಲ್ಲಿಸಿದ್ದ ಸರಕು ಸಾಗಾಣಿಕೆಯ ರೈಲಿನ (ಎಲ್ಪಿಜಿ ಟ್ಯಾಂಕರ್) ಮೇಲೆ ಹತ್ತಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ರೈಲ್ವೆ ವಿದ್ಯುತ್ ತಂತಿ ತಗುಲಿ ಬಾಲಕನಿಗೆ ಗಂಭೀರ ಸುಟ್ಟ ಗಾಯವಾದ ಘಟನೆ ಏ.14ರ ಬುಧವಾರ ಇಲ್ಲಿನ ಕೆಂಜಾರು ತೋಕೂರು ಬಳಿ ನಿಲ್ಲಿಸಿದ್ದ ನಡೆದಿದೆ.
ಜೋಕಟ್ಟೆ ಎಚ್ಪಿಸಿಎಲ್ ಕಾಲನಿ ನಿವಾಸಿ ಮಹಮ್ಮದ್ ದಿಶಾನ್(15)ವಿದ್ಯುತ್ ಅಘಾತಕ್ಕೊಳಗಾದ ಬಾಲಕ. ಇತರ ಸ್ನೇಹಿತರೊಂದಿಗೆ ರೈಲ್ವೆ ವ್ಯಾಗನ್ ಬಳಿ ಆಟವಾಡುತ್ತಿದ್ದಾಗ ದಿಶಾನ್ ಸೆಲ್ಫಿ ತೆಗೆಯಲು ಮೇಲೆ ಹೋಗಿದ್ದ ಎನ್ನಲಾಗಿದೆ. ಈ ಸಂದರ್ಭ ವಿದ್ಯುತ್ ತಂತಿ ಗಮನಿಸದೆ ಬಾಲಕ ದಿಶಾನ್ ಗೆ ಆಕಸ್ಮಿಕವಾಗಿ ಹಿಂಭಾಗದಲ್ಲಿದ್ದ ೨೫ ಸಾವಿರ ವೋಲ್ಟ್ ಇರುವ ವಿದ್ಯುತ್ ತಂತಿ ಕೊಂಚ ತಗುಲಿದೆ.
ವಿದ್ಯುತ್ ಶಾಕ್ಗೆ ದಿಶಾನ್ನ ದೇಹ 50 ಶೇಕಡದಷ್ಟು ಸುಟ್ಟು ಹೋಗಿದೆ .ಅಲ್ಲದೆ, ಟ್ಯಾಂಕರ್ ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದು ಇತರ ಮಕ್ಕಳು ನೆರವಿಗಾಗಿ ಕೂಗಿದಾಗ ಸ್ಥಳೀಯರು ಆಗಮಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾದರು.
ಎಂಆರ್ಪಿಎಲ್ನಿಂದ ಅನಿಲ ತುಂಬಿಸಲು ಎ.13ರಂದು ಬಂದಿದ್ದ ವ್ಯಾಗನ್ ಎ.14ರಂದು 3.30ಕ್ಕೆ ಹೊರಡಲು ಅನುಮತಿ ಲಭಿಸಿತ್ತು.ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಗಾಯಾಳು ಬಾಲಕನನ್ನು ನಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.