ಮಂಗಳೂರು, ಎ.14 (DaijiworldNews/PY): ಸುರತ್ಕಲ್ ಲೈಟ್ ಹೌಸ್ನಿಂದ 42 ನಾಟೆಕಲ್ ಮೈಲ್ ದೂರದಲ್ಲಿ ಉಂಟಾದ ಬೋಟ್ ಅವಘಡದಲ್ಲಿ ಮೂರು ಮೃತಪಟ್ಟಿದ್ದು, 9 ಮಂದಿ ನಾಪತ್ತೆಯಾಗಿದ್ದಾರೆ. ಏತನ್ಮಧ್ಯೆ ಘಟನೆಯಲ್ಲಿ ಇಬ್ಬರು ಸಾವನ್ನು ಗೆದ್ದುಬಂದಿದ್ದು, ಸಾವನ್ನು ಗೆದ್ದುಬಂದ ಇಬ್ಬರು ತಮ್ಮ ರೋಚಕ ಕಥೆಯನ್ನು ಮುಂದಿಟ್ಟಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವೇಲುಮುರುಗನ್ (37) ಹಾಗೂ ಪಶ್ಚಿಮಬಂಗಾಳದ ಕಾಕ್ದ್ವೀಪ್ ಜಿಲ್ಲೆಯ ಸುನಿಲ್ ದಾಸ್ ಬೋಟ್ ದುರಂತದಲ್ಲಿ ಬದುಕುಳಿದವರು.
ದಾಯ್ಜಿವಲ್ಡ್ ಜೊತೆ ಮಾತನಾಡಿದ ವೇಲುಮುರುಗನ್ ಅವರು, "ನಾನು ತಮಿಳುನಾಡು ಹಾಗೂ ಪಶ್ಚಿಮಬಂಗಾಳದ ಇತರ 13 ಜನರೊಂದಿಗೆ ಎಪ್ರಿಲ್ 11ರ ರವಿವಾರದಂದು ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಬೇಪೂರ್ನಿಂದ ಮೀನುಗಾರಿಕೆಗೆ ತೆರಳಿದ್ದೆವು. ಈ ವೇಳೆ ನಮಗೆ ಅಧಿಕ ಮೀನುಗಳು ದೊರಕದ ಕಾರಣ ನಾವು ಆಳ ಸಮುದ್ರ ಮೀನುಗಾರಿಕೆ ನಡೆಸಲು ನಿರ್ಧರಿಸಿದ್ದು, 70 ನಾಟೆಕಲ್ ಮೈಲುಗಳಷ್ಟು ದೂರ ಸಾಗಿದೆವು. ನಾವು ಮುಂದೆ ಚಲಿಸುತ್ತಿದ್ದಂತೆ ಹವಾಮಾನ ಸ್ಥಿತಿಯೂ ಕೆಟ್ಟದಾಗಿತ್ತು. ನಾವು ಮುಂದೆ ಸಾಗುತ್ತಿದ್ದಂತೆ ಮಳೆ ಸುರಿಯಲು ಆರಂಭವಾಯಿತು" ಎಂದು ತಿಳಿಸಿದರು.
"ಬಳಿಕ ನಮ್ಮ ಬೋಟ್ನ ಚುಕ್ಕಾಣಿಗ ಊಟ ಮಾಡುವಂತೆ ತಿಳಿಸಿದರು. ಆದರೆ, ನಾವು ನಮ್ಮ ಪ್ರಯಾಣವನ್ನು ಮುಂದುವರೆಸಿದೆವು. ಈ ವೇಳೆ ಬೋಟ್ನ ಎಲ್ಲಾ ಲೈಟ್ಗಳನ್ನು ಆನ್ ಮಾಡಲಾಗಿತ್ತು. ಊಟದ ಬಳಿಕ ನಾವೆಲ್ಲರೂ ವಿಶ್ರಾಂತಿ ಪಡೆದೆವು. ಸ್ವಲ್ಪ ಸಮಯದ ಬಳಿಕ ಭಾರೀ ಮಳೆ ಸುರಿಯಲು ಪ್ರಾರಂಭವಾಯಿತು. ನಾನು ಚುಕ್ಕಾಣಿಗನ ಬಳಿ ಮಲಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಿದ್ದ ಕಾರಣ ಉಬ್ಬರವಿಳಿತ ಹೆಚ್ಚಿರುವುದು ನಮ್ಮ ಗಮನಕ್ಕೆ ಬಂತು. ಹವಾಮಾನ ಕೂಡಾ ಹದಗೆಟ್ಟ ಕಾರಣ, ನಮ್ಮ ಮುಂದಿನ ದಾರಿಯೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ" ಎಂದರು.
"ನಾನು ದಣಿದಿದ್ದ ಕಾರಣ ನಿದ್ರೆಗೆ ಜಾರಿದ್ದೆ. ಸ್ವಲ್ಪ ಸಮಯದ ಬಳಿ ದೊಡ್ಡ ಸದ್ದು ಕೇಳಿ ನನಗೆ ಎಚ್ಚರವಾಯಿತು. ಈ ವೇಳೆ ನಾನು ಎದ್ದೇಳಲು ಪ್ರಯತ್ನಿಸುತ್ತಿದ್ದೆ. ಜನರು ಕಿರುಚಾಡುತ್ತಿರುವುದು ನನಗೂ ಕೇಳಿಸುತ್ತಿತ್ತು. ಈ ವೇಳೆ ನಾನು ಕೂಡಾ ನೀರಿಗೆ ಬಿದ್ದೆ. ಕೆಲವು ಸಮಯದ ಬಳಿಕ ನಾನು ಬೋಟ್ ಮೇಲ್ಭಾಗವನ್ನು ತಲುಪಿದೆ. ನಮ್ಮ ಬೋಟ್ಗೆ ಹಡಗು ಢಿಕ್ಕಿಯಾಗಿತ್ತು. ಈ ವೇಳೆ ಹಡಗಿನ ಸಿಬ್ಬಂದಿಗಳು ನಮ್ಮನ್ನು ಪತ್ತೆಹಚ್ಚಿ ಹಡಗಿಗೆ ಬರಲು ಸಹಾಯ ಮಾಡಿದರು. ನಮಗೆ ಪ್ರಥಮ ಚಿಕಿತ್ಸೆ ನೀಡಿದರು. ಆ ಸಂದರ್ಭ ನನಗೆ ಮಾತನಾಡಲು ಕೂಡಾ ಆಗಲಿಲ್ಲ. ಮುಳುಗಿದ ಬೋಟ್ನಲ್ಲಿ ಇನ್ನೂ ಅನೇಕರು ಇದ್ದಾರೆ ಎಂದು ನಾನು ಅವರಿಗೆ ತಿಳಿಸಿದೆ. ಆದರೆ, ದುರಾದೃಷ್ಟವಶಾತ್ ನನಗೆ ಅವರನ್ನು ಹುಡುಕಲು ಆಗಲಿಲ್ಲ" ಎಂದು ಹೇಳಿದರು.
"ಬಡತನದ ಕಾರಣದಿಂದ ನಾನು ಹಾಗೂ ನನ್ನ ಕುಟುಂದ ಸದಸ್ಯರ ಜೀವನೋಪಾಯಕ್ಕಾಗಿ ನಾನು ಮೀನುಗಾರಿಕೆಯಲ್ಲಿ ತೊಡಗಿಕೊಂಡಿದ್ದೇನೆ" ಎಂದು ತಿಳಿಸಿದರು.
ಕರಾವಳಿಯ ಭದ್ರತಾ ಪೊಲೀಸರ ಮೂಲಕ ಈ ಘಟನೆ ತಿಳಿದುಬಂದಿದೆ ಎಂದು ಬೋಟ್ನ ಮಾಲೀಕ ಜಾಫರ್ ಮಾಹಿತಿ ನೀಡಿದರು. ನನ್ನ ಬೋಟ್ ಢಿಕ್ಕಿಯಾಗಿದೆ ಎಂದು ಅವರು ನನಗೆ ಮಾಹಿತಿ ನೀಡಿದರು. ಇದು ನಿಜಕ್ಕೂ ಆಘಾತಕಾರಿ ಘಟನೆ ಎಂದರು.
ಘಟನೆಯಲ್ಲಿ ಬದುಕುಳಿದ ಇನ್ನೋರ್ವ ಸುನಿಲ್ ದಾಸ್ ಕೂಡಾ ಈ ಘಟನೆ ಹಾಗೂ ಸಾವಿನ ದವಡೆಯಿಂದ ಹೇಗೆ ಪಾರಾದೆ ಎನ್ನುವುದನ್ನು ವಿವರಿಸಿದ್ದಾರೆ.