ಮಂಗಳೂರು, ಎ.14 (DaijiworldNews/PY): ಎಪ್ರಿಲ್ 13ರ ಮಂಗಳವಾರದಂದು ಕರಾವಳಿಯ ಆಳ ಸಮುದ್ರದಲ್ಲಿ ಹಡಗು ಹಾಗೂ ಮೀನುಗಾರಿಕಾ ಬೋಟ್ ಅಪಘಾತಕ್ಕೆ ಸಂಬಂಧಿಸಿದಂತೆ ಒಂಭತ್ತು ಮೀನುಗಾರರು ಇನ್ನೂ ಕಾಣೆಯಾಗಿದ್ದಾರೆ.
ಕಾಣೆಯಾದ ಮೀನುಗಾರರನ್ನು ಪತ್ತೆಹಚ್ಚಲು ಭಾರತೀಯ ಕೋಸ್ಟ್ಗಾರ್ಡ್ ತನ್ನ ಕಾರ್ಯಾಚರಣೆಯನ್ನು ಇಂದೂ ಮುಂದುವರೆಸಿದೆ.
ಮಂಗಳೂರು ಬಂದರಿನಿಂದ 43 ನಾಟೆಕಲ್ ಮೈಲ್ ದೂರದಲ್ಲಿ ಈ ಘಟನೆ ನಡೆದಿದ್ದು, ಎಪ್ರಿಲ್ 13ರ ಮಂಗಳವಾರ ಮುಂಜಾನೆ 2.30 ಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಸಿಂಗಾಪುರ ಮೂಲದ ಎಪಿಎಲ್ ಲೇ ಹ್ಯಾವ್ರೆ ಎನ್ನುವ ಹಡಗು ದೋಣಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಕೇರಳದ ಕೋಝಿಕ್ಕೋಡ್ನ ಬೇಫೂರ್ ಜಾಫರ್ ಅವರಿಗೆ ಸೇರಿದ್ದ ರಬಾ ಎಂಬ ದೋಣಿ ಎಪ್ರಿಲ್ 11ರ ರವಿವಾರ ಬೇಪೂರ್ನಿಂದ ಸಮುದ್ರಕ್ಕೆ ಇಳಿದಿತ್ತು.
ಅಪಘಾತದ ಸಂದರ್ಭ ಮೂವರು ಮೀನುಗಾರರು ಸಾವನ್ನಪ್ಪಿದ್ದು, ಇಬ್ಬರನ್ನು ಮಂಗಳವಾರ ರಕ್ಷಿಸಲಾಗಿದೆ.