ಮಂಗಳೂರು, ಏ.14 (DaijiworldNews/MB) : ಕೊರೊನಾ ಎರಡನೇ ಅಲೆಯ ಹಿನ್ನೆಲೆ ಸರ್ಕಾರವು ರಮ್ಜಾನ್ನ ಈ ಉಪವಾಸದ ತಿಂಗಳಲ್ಲಿ ಮಸೀದಿಗಳಲ್ಲಿ ಪಾಲಿಸಬೇಕಾದ ನಿಯಮಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ''ಈ ಮಾರ್ಗಸೂಚಿಯನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಿ'' ಎಂದು ಖಾಝಿ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಖಾಝಿ, ''ಮಾಸ್ಕ್ ಧರಿಸುವುದು, ಸ್ವಂತ ನಮಾಝ್ ಹಾಸುಗಳ ಬಳಕೆ, ವುಝೂ - ಶೌಚ್ಯಗಳಿಗಾಗಿ ಸಾಧ್ಯವಾದಷ್ಟು ಮನೆಯನ್ನೇ ಆಶ್ರಯಿಸುವುದು, ಸುರಕ್ಷಿತ ಅಂತರ ಕಾಪಾಡುವುದು, ಹಸ್ತಲಾಘವವನ್ನು ಮಾಡದಿರುವುದು ಮುಂತಾದ ಮುಂಜಾಗ್ರತಾ ಕ್ರಮ ಕೈಗೊಳ್ಳಿ'' ಎಂದು ತಿಳಿಸಿದ್ದಾರೆ.
''ಹಾಗೆಯೇ ಮಸೀದಿಗಳಲ್ಲಿ ಜುಮಾ, ಜಮಾಅತ್ ನಮಾಝ್ ಮತ್ತು ಅನುಬಂಧಿತ ಆರಾಧನೆಗಳನ್ನು ಚುಟುಕಾಗಿ ನಿರ್ವಹಿಸಿ ಮಸೀದಿಗೆ ಬಂದವರು ವಿಳಂಬ ಮಾಡದೆ ವಾಪಾಸ್ ತೆರಳಬೇಕು'' ಎಂದು ಹೇಳಿದ್ದಾರೆ.