ಉಡುಪಿ, ಏ.14 (DaijiworldNews/MB) : ಮನೆಯೊಂದರ ಮೇಲ್ ಛಾವಣಿಯ ಗೋಡೆಯನ್ನು ಒಡೆದು ಬೀಳಿಸುವಾಗ ಆ ಗೋಡೆಯು ಮೈ ಮೇಲೆ ಬಿದ್ದು ಕರ್ತವ್ಯನಿರತ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ಏಪ್ರಿಲ್ 13 ರಂದು ಬ್ರಹ್ಮಾವರದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಹನುಮಂತ (35) ಮೃತ ವ್ಯಕ್ತಿ. ಕೊಪ್ಪಳ ಜಿಲ್ಲೆಯ ಉಮೇಶ್ (25), ಅವರ ಮಾವ ಹನುಮಂತ, ಹಾಗೂ ಇತರರು ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಮೇಸ್ತ್ರಿಯಾದ ಮಟಪಾಡಿಯ ನರಸಿಂಹ ನಾಯಕ್ರವರೊಂದಿಗೆ ಕೂಲಿ ಕೆಲಸ ಮಾಡಿಕೊಂಡಿದ್ದರು.
ಮಂಗಳವಾರ ನರಸಿಂಹ ನಾಯಕ್ ಹನುಮಂತನನ್ನು ಚಾಂತಾರು ಗ್ರಾಮದ ಚೇತನ ನಗರ ಎಂಬಲ್ಲಿರುವ ಗಣಪತಿ ಎಂಬವರ ಮನೆಯ ಮನೆಯ ಮೇಲ್ ಛಾವಣಿಯ ಗೋಡೆ ಒಡೆಯಲು ಕಳುಹಿಸಿಕೊಟ್ಟಿದ್ದು, ಆದರೆ ಹನುಮಂತ, ಗಣಪತಿ ಎಂಬವರ ಮನೆಯ ಮೇಲ್ ಛಾವಣಿಯ ಗೋಡೆಯನ್ನು ಒಡೆದು ಬೀಳಿಸುವಾಗ ಗೋಡೆಯು ಹನುಮಂತನ ಮೈಮೇಲೆ ಬಿದ್ದು, ಹನುಮಂತ ಗೋಡೆ ಅಡಿ ಸಿಲುಕಿ ಮೈ ಕೈ ತಲೆಗೆ ಗಾಯವಾಗಿ, ಉಸಿರುಗಟ್ಟಿ ಅಸ್ವಸ್ಥರಾಗಿದ್ದರು.
ಮೊದಲು ಬ್ರಹ್ಮಾವರದ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಬಳಿಕ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಬೆಳಿಗ್ಗೆ 10:11 ಗಂಟೆಗೆ ಕರೆದೊಯ್ಯಲಾಗಿದೆ. ಅಷ್ಟರೊಳಗೆ ಹನುಮಂತರವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.
ಮೇಸ್ತ್ರಿ ನರಸಿಂಹ ನಾಯಕ್ ಹಾಗೂ ಮನೆಯ ಮಾಲಿಕ ಗಣಪತಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮ ಅನುಸರಿಸದೇ ನಿರ್ಲಕ್ಷತನದಿಂದ ಕಾಮಗಾರಿ ನಡೆಸಿರುವುದೇ ತನ್ನ ಮಾವನ ಸಾವಿಗೆ ಕಾರಣ ಎಂದು ಆರೋಪಿಸಿ ಉಮೇಶ್ ದೂರು ಸಲ್ಲಿಸಿದ್ದು, ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 288, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿದೆ.