ಮಂಗಳೂರು, ಏ.13 (DaijiworldNews/MB) : ಇತಿಹಾಸ ಪ್ರಸಿದ್ಧ ಕಾಳಿಕಾಬೆಟ್ಟದ ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರದಲ್ಲಿ ಕಾಳಿಕಾಂಬೆಯ ಸ್ಥುತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಸವಣಾಲು ಗ್ರಾಮದ ಮುಸ್ಲಿಂ ಯುವಕ ರಮ್ಲಾನ್ ಎಂಬವರು ರಚಿಸಿ ಹಾಡಿ ಕಾಳಿಕಾಂಬೆಗೆ ಅರ್ಪಣೆ ಮಾಡಿದ್ದಾರೆ.
ಸದಾ ಕೋಮುದಳ್ಳುರಿ, ಸಂಘರ್ಷದ ವಿಚಾರದಲ್ಲೇ ಸುದ್ದಿಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಯುವಕನ ಕಾಳಿಕಾಂಬೆ ಬಗ್ಗೆ ಬರೆದ ಈ ಹಾಡು ಸೌಹಾರ್ದತೆಯ ತವರೂರು ಕೂಡಾ ದಕ್ಷಿಣ ಕನ್ನಡ ಜಿಲ್ಲೆ ಎಂಬುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಾಳಿಕಾಂಬ ದೇಗುಲದ ಸಮೀಪದಲ್ಲೇ ವಾಸವಿರುವ ರಮ್ಲಾನ್, ಕಾಳಿಕಾಮಾತೆಯ ಪರಮ ಭಕ್ತರಾಗಿದ್ದಾರೆ. ಈ ದೇವಾಯಲದ ಎಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ರಮ್ಲಾನ್ ಮುಸ್ಲಿಂ ಆದರೂ ಕಾಳಿಕಾಂಬೆಯ ಬಗ್ಗೆ ಶ್ರದ್ದೆ, ಭಕ್ತಿಯಿಂದ ಬರೆದ ಈ ಹಾಡು ಜನರ ಶ್ಲಾಘನೆ ಗಳಿಸಿದೆ.
ಎಲೆಕ್ಟ್ರೀಷಿಯನ್ ಆಗಿ ಕೆಲಸ ಮಾಡುತ್ತಿರುವ ರಮ್ಲಾನ್ ಮಹಿಮೆದ ಕಾರಣಿಕ ಕ್ಷೇತ್ರ ಕಾಳಿಕಾಬೆಟ್ಟ ಎಂಬ ಹಾಡನ್ನು ಬರೆದು ಹಾಡಿದ್ದು ಶ್ರೀ ದುರ್ಗಾ ಕಾಳಿಕಾಂಬ ಕ್ಷೇತ್ರ ಕಾಳಿಬೆಟ್ಟ ಸವಣಾಲು ಎಂಬ ಯೂಟ್ಯೂಬ್ ಪೇಜ್ನಲ್ಲಿ ನೋಡಬಹುದಾಗಿದೆ.
1200 ವರ್ಷಗಳ ಇತಿಹಾಸವುಳ್ಳ ಸವಣಾಲಿನ ಶ್ರೀ ಕಾಳಿಕಾಂಬ ಕ್ಷೇತ್ರವು ಕುದುರೆಮುಖ ತಪ್ಪಲಿನಲ್ಲಿದೆ. ದುರ್ಗಾ ದೇವತೆ, ಕಾಳಿಕಾಂಬ ದೇವತೆಯನ್ನು ಇಲ್ಲಿ ಪ್ರಧಾನವಾಗಿಪೂಜಿಸಲಾಗುತ್ತದೆ. ಹಾಗೆಯೆ ಗಣಪತಿ, ಶ್ರೀಧರ ಸ್ವಾಮಿ, ಶಿವ ದಕ್ಷಿಣ ಮೂರ್ತಿ, ರಣಗುಲಿಗ, ಶ್ರೀ ನಾಗರಾಜ, ಭೈರವರನ್ನು ಕೂಡಾ ಪೂಜಿಸಲಾಗುತ್ತದೆ.