ಮಂಗಳೂರು, ಏ.13 (DaijiworldNews/MB) : ಯುವತಿಗೆ ಗುಪ್ತಾಂಗ ತೋರಿಸಿದ ಆರೋಪಿಯನ್ನು ದೂರು ದಾಖಲಾದ ಗಂಟೆಯೊಳಗೆ ಉಳ್ಳಾಲ ಠಾಣಾಧಿಕಾರಿ ಸಂದೀಪ್ ಮಾರ್ಗದರ್ಶನದಲ್ಲಿ ಪಿ ಎಸ್ ಐ ಶಿವಕುಮಾರ್ ಮತ್ತು ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದೆ.
ಪಿಲಾರು ನಿವಾಸಿ ಮಹಮ್ಮದ್ ಆರೀಫ್ (27) ಬಂಧಿತ.
ಕುತ್ತಾರಿನ ವಿಷ್ಣುಮೂರ್ತಿ ರಸ್ತೆಯ ಮೂಲಕ ಕುತ್ತಾರು ಜಂಕ್ಷನ್ ಕಡೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಯುವತಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನೊಬ್ಬ ಮಾಸ್ಕ್ ಮತ್ತು ಟೋಪಿ ಧರಿಸಿಕೊಂಡು ಮೊಬೈಲಲ್ಲಿ ಮಾತನಾಡುತ್ತಾ ತನ್ನ ಪ್ಯಾಂಟ್ ಜಾರಿಸಿ ಗುಪ್ತಾಂಗ ತೋರಿಸಿದ್ದಾನೆ ಎನ್ನಲಾಗಿದೆ.
ಬೆದರಿದ ಯುವತಿ ಹತ್ತಿರದ ಟೈಲರ್ ಅಂಗಡಿಗೆ ನುಗ್ಗಿ ಸಹಾಯ ಯಾಚಿಸಿದ್ದಾಳೆ. ಕೂಡಲೇ ಅಲ್ಲಿ ನೆರೆದಿದ್ದ ಜನರು ಎಚ್ಚೆತ್ತಾಗ ಗುಪ್ತಾಂಗ ತೋರಿಸಿದಾತ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೃತ್ಯ ಎಸಗಿದ ಆರೋಪಿಯ ಫೋಟೊವನ್ನು ಕಾರು ಚಾಲಕರೊಬ್ಬರು ಸೆರೆ ಹಿಡಿದಿದ್ದಾರೆ.
ಆರೋಪಿ ಈ ಹಿಂದೆಯೂ ಇದೇ ರೀತಿ ಕೃತ್ಯವನ್ನು ಮಹಿಳೆ ಮುಂದೆ ಎಸಗಿದ್ದನೆನ್ನಲಾಗಿದೆ. ನೊಂದ ಯುವತಿಯ ತಾಯಿ ಉಳ್ಳಾಲ ಠಾಣೆಗೆ ನೀಡಿದ ದೂರಿನಂತೆ ಆರೋಪಿಯನ್ನು ಗಂಟೆಯೊಳಗೆ ಕಾರ್ಯಾಚರಣೆ ನಡೆಸಿ ಪೊಲೀಸರು ಬಂಧಿಸಿದ್ದಾರೆ.