ಮಂಗಳೂರು, ಏ 13 (DaijiworldNews/MS): ಮಂಗಳೂರು ಪಾಲಿಕೆ ವ್ಯಾಪ್ತಿಯ ಕೆ.ಎಸ್ ರಾವ್ ರೋಡ್ನಲ್ಲಿರುವ ಶಾನ್ ಪ್ಲಾಜಾ ಹಾಗೂ ಪ್ರಭಾತ್ ಟಾಕೀಸ್ನ ಮಧ್ಯ ಭಾಗದಲ್ಲಿರುವ ಮಳೆ ನೀರು ರಾಜ ಕಾಲುವೆಯ ಸೇತುವೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಿ ಸಾರ್ವಜನಿಕರ ಓಡಾಟಕ್ಕೆ ಹಾಗೂ ವಾಹನಗಳ ಸುಗಮ ಸಂಚಾರಕ್ಕಾಗಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, ಕಾಮಗಾರಿ ಮುಕ್ತಾಯವಾಗುವವರೆಗೆ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಾಮಾವಳಿಗಳು 1989 ರ ನಿಯಮ 221 ರ ಪದತ್ತವಾದ ಅಧಿಕಾರವನ್ನು ಚಲಾಯಿಸಿ ಹಂಪನಕಟ್ಟೆ ಕೆ.ಎಸ್ ರಾವ್ ರಸ್ತೆಯಲ್ಲಿ, ಮಳೆ ನೀರು ರಾಜ ಕಾಲುವೆಯ ಸೇತುವೆ ಕಾಮಗಾರಿ ರಸ್ತೆಯಲ್ಲಿ ಎಪ್ರಿಲ್ 12 ರಿಂದ ಜೂನ್ 10 ರ ವರೆಗೆ 60 ದಿನಗಳ ಕಾಲ ವಾಹನಗಳ ಸಂಚಾರದಲ್ಲಿ ತಾತ್ಕಾಲಿಕವಾಗಿ ಬದಲಾವಣೆ ಮಾಡಿ, ಪೊಲೀಸ್ ಆಯುಕ್ತರು ಹಾಗೂ ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಶಶಿಕುಮಾರ್ ಎನ್. ಆದೇಶಿಸಿದ್ದಾರೆ.
ಸಾಂದರ್ಭಿಕ ಚಿತ್ರ
ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ: ರಾಷ್ಟ್ರಕವಿ ಎಂ ಗೋವಿಂದ ಪೈ(ನವಭಾರತ್) ವೃತ್ತದಿಂದ ಕೆ.ಎಸ್ ರಾವ್ ರಸ್ತೆ ಮುಖಾಂತರ ಹಂಪನಕಟ್ಟೆ ಕಡೆಗೆ ಬರುವ ಎಲ್ಲಾ ತರಹದ ವಾಹನಗಳನ್ನು ನಿಷೇಧಿಸಲಾಗಿದೆ. ಆದರೆ ನ್ಯಾಯಾಲಯ ಸಂಕೀರ್ಣ, ಸಂತ ಅಲೋಶಿಯಸ್ ಕಾಲೇಜ್, ಎಸ್ಡಿಸಿಸಿ ಬ್ಯಾಂಕ್, ಶಾನ್ ಪ್ಲಾಜಾ ಜನತಾ ಡಿಲಕ್ಸ್ ಹೊಟೇಲ್ ಮತ್ತು ಕ್ಲಾಸಿಕ್ ಪ್ಯಾರಾಡೈಸ್ ಅಪಾರ್ಟ್ಮೆಂಟ್ ಕಡೆಗೆ ಸಂಚರಿಸುವ ವಾಹನಗಳು ಮಾತ್ರ ಎಂ ಗೋವಿಂದ ಪೈ(ನವಭಾರತ್) ವೃತ್ತ ಮುಖಾಂತರ ಬಿಷಪ್ಸ್ ಹೌಸ್ ಮುಂಭಾಗದಿಂದ ಸಂಚರಿಸುವುದು.
ಎಂ ಗೋವಿಂದ ಪೈ(ನವಭಾರತ್) ವೃತ್ತದಿಂದ ಕೆ.ಎಸ್ ರಾವ್ ರಸ್ತೆ ಮುಖಾಂತರ ಹಂಪನಕಟ್ಟೆ – ಮಾರ್ಕೆಟ್ - ಸ್ಟೇಟ್ ಬ್ಯಾಂಕ್ ಕಡೆಗೆ ಬರುವ ಎಲ್ಲಾ ತರಹದ ವಾಹನಗಳು (ಅ)ರಾಷ್ಟ್ರಕವಿ ಎಂ ಗೋವಿಂದ ಪೈ(ನವಭಾರತ್) ವೃತ್ತದಿಂದಾಗಿ ಡೊಂಗರಕೇರಿ ವೆಂಕಟರಮಣ ರಸ್ತೆ- ನ್ಯೂ ಚಿತ್ರ ಟಾಕೀಸ್ ಜಂಕ್ಷನ್ ಮೂಲಕ ಸಂಚರಿಸುವುದು (ಆ) ವಿ ಟಿ ರಸ್ತೆಯ ಮುಖೇನ ಕಾರ್ ಸ್ಟ್ರೀಟ್ ಮೂಲಕ ಸಂಚರಿಸುವುದು (ಇ) ಎಂ.ಜಿ ರಸ್ತೆಯಿಂದ ಪಿವಿಎಸ್ ಜಂಕ್ಷನ್ - ಬಂಟ್ಸ್ ಹಾಸ್ಟೇಲ್ – ಡಾ.ಬಿ.ಆರ್ ಅಂಬೇಡ್ಕರ್ ವೃತ್ತ ಮುಖಾಂತರ ಸಂಚರಿಸುವುದು.
ರಾಷ್ಟ್ರಕವಿ ಎಂ ಗೋವಿಂದ ಪೈ(ನವಭಾರತ್) ವೃತ್ತದಿಂದಾಗಿ ಡೊಂಗರಕೇರಿ ರಸ್ತೆ - ನ್ಯೂ ಚಿತ್ರ ಜಂಕ್ಷನ್ ವರೆಗಿನ ರಸ್ತೆಯ ಎರಡೂ ಇಕ್ಕೆಲಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ವಿ ಟಿ ರಸ್ತೆಯುದ್ದಕ್ಕೂ ಎರಡೂ ಬದಿಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಈ ವಾಹನ ಸಂಚಾರ ನಿಷೇಧವು ಪೊಲೀಸ್ ವಾಹನಗಳು ಹಾಗೂ ತುರ್ತು ಸೇವೆಯ ವಾಹನಗಳಿಗೆ ಅನ್ವಯಿಸುವುದಿಲ್ಲ