ಉಳ್ಳಾಲ, ಏ. 12 (DaijiworldNews/SM): ಕೊಲೆಯಾದ ಆಕೀಫ್ ಪ್ರಕರಣದ ಆರೋಪಿಯ ಮನೆಯನ್ನು ಗುಟ್ಟಾಗಿ ಸ್ಥಳಾಂತರಿಸಲಾಗುತಿತ್ತು. ಈ ಬಗ್ಗೆ ಪೊಲೀಸ್ ಕಮೀಷನರ್ ಗಮನ ಸೆಳೆದಾಗ ಪ್ರಕ್ರಿಯೆ ನಿಂತಿತ್ತು. ಇದು ಸಾಕ್ಷ್ಯ ನಾಶ ಮಾಡಲು ಮಾಡುತ್ತಿರುವ ತಂತ್ರವಾಗಿದೆ ಎಂದು ಜಸ್ಟಿಸ್ ಫಾರ್ ಆಕಿಫ್ ನಾಗರಿಕರ ಸಮಿತಿ ಕೆ.ಸಿ. ರೋಡ್ ಮುಖಂಡ ಖಲೀಲ್ ತಲಪಾಡಿ ಆರೋಪಿಸಿದ್ದಾರೆ.
ಅವರು ಜಸ್ಟಿಸ್ ಫಾರ್ ಆಕಿಫ್ ನಾಗರಿಕರ ಸಮಿತಿ ಕೆಸಿರೋಡ್ ಇದರ ಆಶ್ರಯದಲ್ಲಿ ಕೆ.ಸಿ.ರೋಡ್ ನಲ್ಲಿ ಸೋಮವಾರ ನಡೆಸಿದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಆಕಿಫ್ ನಿಗೂಢ ಕೊಲೆಯ ಹಿಂದೆ ಏನಿದೆ ಎಂಬ ಪ್ರಶ್ನೆ ಎಲ್ಲರಲ್ಲಿ ಮನೆ ಮಾಡಿದೆ. ಇದಕ್ಕೆ ಸೂಕ್ತ ಉತ್ತರ ಬೇಕಾಗಿದೆ. ಘಟನೆಯ ದಿನದಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮನೆ ಮಗನಂತೆ ನೋಡಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದರು.
ಬಾಲಾರೋಪಿಯ ವಾಸ್ತವ ಇದ್ದ ಸ್ಥಳದಿಂದ ಕೆಲವು ಸರಕುಗಳನ್ನು ಗುಟ್ಟಾಗಿ ಸಾಗಾಟ ಮಾಡುವ ಪ್ರಯತ್ನ ನಡೆದಿದೆ. ಈ ಬಗ್ಗೆ ಕಮಿಷನರ್ ಗಮನ ಸೆಳೆದಾಗ ಸಾಗಾಟ ಸ್ಥಗಿತ ಆಗಿತ್ತು. ಆಕಿಫ್ ಕೊಲೆ ವಿಚಾರದಲ್ಲಿ ಯಾವ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ಆಗಿದೆಯೋ ಇದನ್ನು ತನಿಖೆ ಮಾಡುವ ತನಿಖಾಧಿಕಾರಿಗಳು ಸಾಕ್ಷ್ಯ ನಾಶ ಮಾಡದೆ ತನಿಖೆ ನಡೆಸಿ ಆರೋಪಿಗೆ ಕಠಿಣ ಸಜೆ ವಿಧಿಸಿ ನ್ಯಾಯ ಒದಗಿಸಬೇಕಾಗಿದೆ ಎಂದು ಒತ್ತಾಯಿಸಿದರು.
ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಸವಾದ್ ಮಾತನಾಡಿ, ಘಟನೆ ಗೆ ಸಂಬಂಧಿಸಿದಂತೆ ಆರೋಪಿ ಹಾಗೂ ಆರೋಪಿಯ ತಂದೆಯನ್ನು ಬಂಧಿಸಿದರೂ ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿಲ್ಲ. ಮಾಹಿತಿ ಕೊರತೆ ಕಮಿಷನರ್ ಗೆ ಇದೆಯೇ ಎಂದು ಗೊತ್ತಿಲ್ಲ. ಪೊಲೀಸ್ ಇಲಾಖೆ ನ್ಯಾಯದ ವಿಚಾರ ದಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ವಕೀಲ ನೌಷಾದ್ ಖಾಸಿಂಜೀ ಕೊಲೆಯಿಂದ ಹಿಡಿದು ಈವರೆಗೆ ತಾರತಮ್ಯ ನೀತಿ ಅನುಸರಿಸುರಿಸುವುದು ಯಾಕೆ ಎಂದು ಪ್ರಶ್ನಿಸಿದ ಅವರು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಇದೆ ಇದಕ್ಕಾಗಿ ಉಳ್ಳಾಲ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ತಯಾರಿದ್ದೇವೆ ಎಂದು ಎಚ್ಚರಿಸಿದರು.