ಬಂಟ್ವಾಳ, ಏ. 12 (DaijiworldNews/SM): ಭಾನುವಾರ ರಾತ್ರಿ ಸುರಿದ ಧಾರಾಕಾರ ಗಾಳಿ, ಮಳೆ, ಸಿಡಿಲು, ಮಿಂಚಿನ ಅಬ್ಬರಕ್ಕೆ ಬಂಟ್ವಾಳ ತಾಲೂಕಿನ ಹಲವು ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ. ಅಲ್ಲದೆ, ಪ್ರತ್ಯೇಕ ಎರಡು ಕಡೆಗಳಲ್ಲಿ ಸಿಡಿಲು ಬಡಿದ ಘಟನೆಯು ನಡೆದಿದೆ.
ತಾಲೂಕಿನ ಕಾವಳಪಡೂರು ಗ್ರಾಮದ ಬರ್ಕಟ ಎಂಬಲ್ಲಿನ ಗೀತಾ(29) ಮತ್ತು ಅವರ ಮಗಳು ರಶ್ಮಿತಾ(10) ಎಂಬವರು ಸಿಡಿಲು ಬಡಿದು ಗಾಯಗೊಂಡಿದ್ದು, ಇಬ್ಬರನ್ನೂ ಚಿಕಿತ್ಸೆಗಾಗಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಜಿಪ ಮುನ್ನೂರು ಗ್ರಾಮದ ಮಿತ್ತ ಕಟ್ಟ ಎಂಬಲ್ಲಿ ಲಲಿತ ಎಂಬವರ ಮನೆಗೆ ಸಿಡಿಲು ಬಡಿದಿದ್ದು, ಮನೆ ಬಿರುಕು ಬಿಟ್ಟಿದ್ದಲ್ಲದೆ ಸೊತ್ತುಗಳು ಸಂಪೂರ್ಣ ಹಾನಿಯಾಗಿದೆ. ಶಂಭೂರು ಗ್ರಾಮದ ಬೂತಲೆಮಾರು ಎಂಬಲ್ಲಿ ಮುತ್ತಮ್ಮ ಎಂಬವರ ವಾಸದ ಮನೆಗೆ ಹಾನಿಯಾಗಿದೆ. ಇದೇ ಗ್ರಾಮದ ಕರ್ತಪಾಲು ಎಂಬಲ್ಲಿ ಸುಂದರ ಎಂಬವರ ಮನೆ ಜಖಂಗೊಂಡಿದೆ. ಸಜಿಪಮುನ್ನೂರು ಗ್ರಾಮ ದ ಮಡಿವಾಳಪಡಿಪು ಎಂಬಲ್ಲಿ ಚಂದಪ್ಪ ಮಡಿವಾಳ ಇವರ ಮನೆಗೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗುತ್ತದೆ.
ಲಕ್ಷಾಂತರ ರೂ ನಷ್ಟ:
ಗಾಳಿ ಮಳೆಗೆ ತಾಲೂಕಿನ ಅನೇಕ ಮನೆಗಳಿಗೆ ಹಾನಿಯಾಗಿದ್ದು,15 ಲಕ್ಷಕ್ಕು ಅಧಿಕ ರೂ. ನಷ್ಟ ಉಂಟಾಗಿದೆ. 8 ಮನೆಗಳಿಗೆ ತೀವ್ರ ಹಾನಿಯಾಗಿದ್ದರೆ, 18 ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಒಂದು ದನದ ಕೊಟ್ಟಿಗೆ ಹಾನಿಯಾಗಿದ್ದು, 4 ತೋಟಗಾರಿಕಾ ಬೆಳೆಗಳಿಗೆ ನಾಶವಾಗಿದ್ದು, ಒಟ್ಟು 60 ಸಾವಿರ ರೂ. ನಷ್ಟು ಬೆಳೆ ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಹಲವೆಡೆ ಮರಗಳು ಉರುಳಿ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.ತಾಲೂಕಿನ ವಿವಿಧ ಕಡೆಗಳಲ್ಲಿ ಒಟ್ಟು 60 ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.
ಬಂಟ್ವಾಳ-ಮೂಡುಬಿದಿರೆ ರಸ್ತೆಯಲ್ಲಿ ಸುಮಾರು 10 ಕಂಬಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬದಲಿ ಸಂಚಾರ ವ್ಯವಸ್ಥೆ ಮಾಡಲಾಯಿತು. ಕಾಮಗಾರಿ ಪೂರ್ಣವಾದ ಬಳಿಕ ಸಂಜೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಯಿತು. ಭಾನುವಾರದ ಗಾಳಿ,ಮಳೆ,ಸಿಡಿಲು,ಮಿಂಚಿನ ಅಬ್ಬರಕ್ಕೆ ಮೆಸ್ಕಾಂ ಗೆ ಸುಮಾರು 60 ಲಕ್ಷ ರೂ. ನಷ್ಟ ಸಂಭವಿಸಿದೆ.
ಆದಿತ್ಯವಾರ ರಾತ್ರಿಯಿಂದಲೇ ಮೆಸ್ಕಾಂ ಲೈನ್ ಮ್ಯಾನ್ ಗಳು,ಇಂಜಿನಿಯರ್ ಗಳು ಸ್ಥಳಕಾಕಾಗಮಿಸಿ ಅವಿರತ ಕೆಲಸದಲ್ಲಿ ತೊಡಗಿ ಸೋಮವಾರ ರಾತ್ರಿ ವೇಳೆ ಎಚ್.ಟಿ.ಲೈನ್ ನ ಕೆಲಸ ಪೂರ್ಣಗೊಳಿಸಿ ಮಧ್ಯ ರಾತ್ರಿ ವೇಳೆ ವಿದ್ಯುತ್ ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಎಲ್.ಟಿ.ಲೈನ್ ಬಾಕಿ ಕಾಮಗಾರಿ ಸೋಮವಾರ ಪೂರ್ಣಗೊಳಿಸಿದ್ದಾರೆ.