ಕಾಸರಗೋಡು, ಏ. 12 (DaijiworldNews/SM): ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇರಳದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ರಾಜ್ಯ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿ ನಡೆದ ಕೊರೋನಾ ಸಲಹಾ ಸಮಿತಿ ಸಭೆಯಲ್ಲಿ ನಿರ್ಬಂಧಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಸಾರ್ವಜನಿಕ ಕಾರ್ಯಕ್ರಮಗಳ ಸಮಯವನ್ನು ಕಡಿತಗೊಳಿಸಿದ್ದು, ಎರಡು ಗಂಟೆ ಮೊದಲು ಕಾರ್ಯಕ್ರಮಗಳನ್ನು ಮುಗಿಸಬೇಕು. ಸಭಾಂಗಣದೊಳಗೆ 100 ಮಂದಿ ಹಾಗೂ ತೆರೆದ ಸ್ಥಳಗಳಲ್ಲಿ 200 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿವಾಹ ಸಮಾರಂಭಗಳಿಗೂ ಇದು ಅನ್ವಯವಾಗಲಿದೆ.
ಹೋಟೆಲ್ ಹಾಗೂ ಅಂಗಡಿಗಳನ್ನು ರಾತ್ರಿ 9 ಗಂಟೆಯೊಳಗೆ ಮುಚ್ಚಬೇಕು. ಹೋಟೆಲ್ ಗಳಲ್ಲಿ ಕುಳಿತು ಆಹಾರ ಸೇವಿಸಲು ಶೇಕಡಾ 50 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ಗಳು ಪಾರ್ಸೆಲ್ ಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಮಿತಿ ತಿಳಿಸಿದೆ. ಅಲ್ಲದೆ, ವಿವಾಹ ಸಮಾರಂಭಗಳಲ್ಲಿ ಪಾರ್ಸೆಲ್ ಆಹಾರ ಒದಗಿಸುವ ಬಗ್ಗೆ ಸಲಹಾ ಸಮಿತಿ ಸಭೆ ನಿರ್ದೇಶನ ನೀಡಿದೆ.