ಉಡುಪಿ, ಏ.12 (DaijiworldNews/MB) : ''ಮಾರ್ಚ್ನಲ್ಲಿ 10 ದಿನಗಳವರೆಗೆ ಉಡುಪಿ ಅಜ್ಜರಕಾಡುವಿನಲ್ಲಿ ನಡೆದ ರಾಜ್ಯ ಮಟ್ಟದ ಸೇವಾ ನೇಮಕಾತಿಯಲ್ಲಿ ಆಗಮಿಸಿದ ಅಭ್ಯರ್ಥಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಿ ಕೊಡದಿರುವುದು ನಗರಸಭೆಯ ವೈಫಲ್ಯ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ'' ಎಂದು ಕಿನ್ನಿಮುಲ್ಕಿ ವಾರ್ಡ್ ಕೌನ್ಸಿಲರ್ ಅಮೃತಾ ಕೃಷ್ಣಮೂರ್ತಿ ಆಚಾರ್ಯರವರು ಸೋಮವಾರದಂದು ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದರು.
ವಿಪಕ್ಷದ ನಾಯಕರಾದ ರಮೇಶ್ ಕಾಂಚನ್ ಕೂಡ ಅದೇ ವಿಷಯವನ್ನು ಬೆಂಬಲಿಸಿದರು. ''ಇಷ್ಟೊಂದು ದೊಡ್ಡ ಮಟ್ಟದ ಕಾರ್ಯಕ್ರಮ ಜಿಲ್ಲೆಯ ನಗರಬಾಗದಲ್ಲಿ ಆಗಿದ್ದು, ಭವಿಷ್ಯದ ದೇಶ ಕಾಯುವ ಸೇನಾ ನಾಯಕರಿಗೆ ನಮ್ಮಲ್ಲಿ ಸರಿಯಾದ ವ್ಯವಸ್ಥೆ ಕಲ್ಪಿಸಲು ಆಗದಿರುವುದು ಒಂದು ಕಪ್ಪು ಚುಕ್ಕೆ'' ಎಂದರು.
ಇದೇ ವಿಷಯವನ್ನು ಸಮರ್ಥಿಕೊಂಡ ಅಜ್ಜರಕಾಡಿನ ಕೌನ್ಸಿಲರ್ ಆಗಿರುವ ಮಾತನಾಡಿ, ''ಮೊದಲ ದಿನ ಯುವಕರಿಗೆ ವ್ಯವಸ್ಥೆ ಸಿಗದಿರುವುದು ಜಿಲ್ಲಾಡಳಿತದ ತಪ್ಪು, ಅದು ನಗರಸಭೆಯ ತಪ್ಪಲ್ಲ. ಇಷ್ಟು ಮಂದಿ ಯುವಕರು ಬಂದಿರುವುದು ಅನಿರೀಕ್ಷಿತ, ಮತ್ತು ಅದಕ್ಕೆ ನಗರಸಭೆ ಹೊಣೆಯಲ್ಲ'' ಎಂದು ಹೇಳಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ''ಈ ಘಟನೆ ಅನಿರೀಕ್ಷಿತವಾದದ್ದು ಮತ್ತು ಅಷ್ಟೊಂದು ಮಂದಿ ಬರುವ ನಿರೀಕ್ಷೆ ಕೂಡ ಜಿಲ್ಲಾಡಳಿತಕ್ಕೆ ಇರಲ್ಲಿಲ್ಲ. ಪ್ರತಿದಿನ 2000-3000 ಮಂದಿ ಬಂದು ಹೋಗುವ ನಿರೀಕ್ಷೆಯಷ್ಟೇ ಇತ್ತು. ವಾಸ್ತವ ಅರಿತ ಮೇಲೆ ಕೂಡಲೇ ನಗರಸಭೆ ಸಂಘ ಸಂಸ್ಥೆಗಳ ಸಹಕಾರದಿಂದ ಅವರು ಉಳಿದುಕೊಳ್ಳಲು ಪೆಂಡಾಲ್ ಹಾಕಿ, ಊಟ ನೀಡಿದ್ದೇವೆ. ಅವರು ಗುಂಪಾಗಿ ಬಂದಿದ್ದರಿಂದ, ಜೊತೆಗೆ ಬಂದವರನ್ನು ಕಾಯಬೇಕಿತ್ತು. ಇದು ನಗರಸಭೆಗೆ ಸ್ವಲ್ಪ ಕೆಟ್ಟ ಹೆಸರು ಬಂತು, ಮುಂದೆ ಇಂತಹ ಲೋಪಗಳು ಆಗದಂತೆ ಜಾಗೃತರಾಗಬೇಕು'' ಎಂದು ಸ್ಪಷ್ಟನೆ ನೀಡಿದರು.
ಇನ್ನು ಪೆರಂಪಳ್ಳಿ ವಾರ್ಡ್ನ ಕೌನ್ಸಿಲರ್ ಸೆಲಿನಾ ಕಾರ್ಕಡರವರು ವಾರಾಹಿ ನೀರು ಯೋಜನೆಯ ಇಂಜಿನಿಯರ್ನನ್ನು ನಿಗದಿತ ಸಮಯದಲ್ಲಿ ನಳ್ಳಿ ನೀರು ಸಂಪರ್ಕ ಮಾಡಿ ಕೊಡದೇ ಇದ್ದುದ್ದಕ್ಕೆ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು. ''ಮಣಿಪಾಲ-ಪೆರೆಂಪಳ್ಳಿ ರಸ್ತೆ ಅಗಲೀಕರಣ ಕೆಲಸಕ್ಕಾಗಿ ಅನೇಕ ಕಡೆ ನೀರು ಪೈಪ್ ಲೈನ್ ಕಿತ್ತು ಹಾಕಲಾಗಿದ್ದು ಕಳೆದ 10-20 ದಿಗಳಿಂದ ನೀರಿನ ಸಂಪರ್ಕವನ್ನು ಕಡಿತ ಮಾಡಿ, ನೀರು ಕೊಡದೆ ದಿನ ಕಳೆಯುತ್ತಿದ್ದಾರೆ. ಈಗ ಆ ಭಾಗದ ಮಹಿಳೆಯರು ಮುಷ್ಕರ ಮಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ'' ಎಂದರು.
''ತಕ್ಷಣ ಶಾಸಕರು ಸಂಬಂಧಪಟ್ಟ ಇಂಜಿನಿಯರನ್ನು ಕರೆದು ಕೂಡಲೇ ನೀರಿನ ಸಂಪರ್ಕ ಕೊಡಿಸಬೇಕು, ಇನ್ನೊಂದು ಕಡೆ ಕಾಮಗಾರಿಯೂ ನಡೆಯುತ್ತಿರಬೇಕು. ಕಾಮಗಾರಿ ಆರಂಭಿಸುವ ಮೊದಲು ಎಲ್ಲವನ್ನು ಯೋಜನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕೆಲಸ ಮಾಡಬೇಕು'' ಎಂದರು.
''ಇನ್ನು ನಗರಸಭೆಯಲ್ಲಿ ಅಧಿಕಾರಿಗಳ ಮತ್ತು ಆರೋಗ್ಯ ಅಧಿಕಾರಿಗಳ ಕೊರತೆ ಇದ್ದು, ಸಾರ್ವಜನಿಕರಿಗೆ ಸೇವೆ ಕೊಡುವಲ್ಲಿ ವಿಳಂಬವಾಗುತ್ತಿದೆ. ಹಾಗಾಗಿ ಈ ಬಗ್ಗೆ ನಗರಸಭೆ ಗಂಭೀರವಾಗಿ ಯೋಚನೆ ಮಾಡಬೇಕಾಗಿದೆ'' ಎಂದು ರಮೇಶ್ ಕಾಂಚನ್ ಅಧ್ಯಕ್ಷರಾದ ಸುಮಿತ್ರಾ ನಾಯಕ್ರಲ್ಲಿ ಹೇಳಿದರು.
''ಬೀಡಿನಗುಡ್ಡೆ ಮೈದಾನ ಮತ್ತು ಮಣ್ಣುಪಳ್ಳ ಅವ್ಯವಸ್ಥಿತದಿಂದ ಕೂಡಿದೆ. ಜಿಲ್ಲಾಧಿಕಾರಿಯವರೇ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದಾರೆ. ನಗರಸಭೆಯ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಅದನ್ನು ನಿರ್ವಹಣೆಯೇ ಆಗುತ್ತಿಲ್ಲ'' ಎಂದು ಮಣಿಪಾಲ ವಾರ್ಡ್ ಕಲ್ಪನಾ ಸುಧಾಮ ಸಭೆಯ ಗಮನಕ್ಕೆ ತಂದರು.
ಶಾಸಕರು ಇದಕ್ಕೆ ಪ್ರತಿಕ್ರಿಯಿಸಿ, ''ಬೀಡಿನಗುಡ್ಡೆ ಮೈದಾನ ಮತ್ತು ಮಣ್ಣುಪಳ್ಳ ದ ನಿರ್ವಹಣೆ ನಗರಸಭೆಯ ನೇತೃತ್ವದಲ್ಲಿ ನಡೆಯುವಂತೆ ಮನವಿ ಮಾಡಿ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ಕಳಹಿಸಿ'' ಎಂದರು.
''ಇನ್ನು ಧಾರ್ಮಿಕ ಕಾರ್ಯಕ್ರಮಗಳ ಬಿಲ್ ಬೋರ್ಡ್ಗಳಿಗೆ ರಿಯಾಯಿತಿ ದರ ಮಾಡಿ'' ಎಂದು ಯೋಗೀಶ್ ಸಾಲ್ಯಾನ್ ಸಭೆಯಲ್ಲಿ ಹೇಳಿದರು.
''ಸರಳೆಬೆಟ್ಟುವಿನಲ್ಲಿ ವಸತಿರಹಿತರಿಗೆ ಕಟ್ಟಳಾಗುತ್ತಿರುವ ವಸತಿ ಸಮುಚ್ಚಯವು ಈಗಾಗಲೇ ಕಾಮಗಾರಿ 75% ಮುಗಿದಿದ್ದು ನವೆಂಬರ್ನಲ್ಲಿ ಅದು ಅರ್ಹ ಪಲಾನುಭವಿಗಳಿಗೆ ಮುಕ್ತವಾಗುತ್ತದೆ'' ಎಂದು ಶಾಸಕರು ತಿಳಿಸಿದರು.
''ಇನ್ನು ಆದಿ ಉಡುಪಿಯಲ್ಲಿರುವ ಮಾಂಸದ ಅಂಗಡಿಯಲ್ಲಿ ವದಾಗ್ರಹ ಇಲ್ಲ. ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಸರಿಯಾದ ವ್ಯವಸ್ಥೆ ಕೂಡ ಇಲ್ಲ. ಕಡಿದ ಪ್ರಾಣಿಗಳ ರಕ್ತವು ಚರಂಡಿಯಲ್ಲೇ ಹರಿಯುತ್ತದೆ. ಆದಿ ಉಡುಪಿಯ ಸುತ್ತಲೂ ಕೆಟ್ಟವಾಸನೆ ಹರಡುತ್ತಿದೆ. ನಗರಸಭೆ ವತಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು'' ಎಂದು ಸುಂದರ್ ಜೆ ಕಲ್ಮಾಡಿಯವರು ಒತ್ತಾಯಪಡಿಸಿದರು.
ಸಭೆಯಲ್ಲಿ ನಗರಸಭಾ ಕಮಿಷನರ್ ಉದಯ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ಲಕ್ಷ್ಮಿ ಮಂಜುನಾಥ್ ಸಾಲ್ಯಾನ್ ಉಪಸ್ಥಿತರಿದ್ದರು.