ಉಡುಪಿ, ಏ.12 (DaijiworldNews/HR): ಕರಾವಳಿ ಪರಿಸರದಲ್ಲಿನ ಸಿ.ಆರ್.ಝಡ್ ಸಮಸ್ಯೆಯೂ ಸೇರಿ ಕೇಂದ್ರದ ಕೆಲವೊಂದು ಅವೈಜ್ಞಾನಿಕ ಕಾನೂನುಗಳು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಠಿಸಿದ್ದು, ಇದನ್ನು ನಿಭಾಯಿಸುವ ನಿಟ್ಟಿನಲ್ಲಿ ಜನಮನಕ್ಕೆ ಸ್ಪಂದಿಸಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಈ ಕುರಿತು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾದಿದ ಅವರು, "ಈ ನಿಟ್ಟಿನಲ್ಲಿ ನಾವು ಈಗಾಗಲೇ ಹಮ್ಮಿಕೊಂಡಿರುವ ಪಾದಯಾತ್ರೆ ಉತ್ತಮ ಫಲಿತಾಂಶ ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಯ ಕಸ್ತೂರಿರಂಗನ್ ವರದಿಯಿಂದ ಸಂತೃಸ್ತರಾದ ಮಲೆನಾಡು ಪರಿಸರಗಳಲ್ಲಿಯೂ ಮುಂದುವರಿಸಲಾಗುವುದು" ಎಂದರು.
ಇನ್ನು "ಪಕ್ಷದ ಪ್ರತಿಯೊಬ್ಬಕಾರ್ಯಕರ್ತನ ಅಭಿಪ್ರಾಯಗಳೂ ಅಮೂಲ್ಯ. ಭಿನ್ನಾಭಿಪ್ರಾಯಗಳು ಸಹಜವಾದರೂ ಕಚ್ಛಾಟ ರಹಿತವಾಗಿ ತಳಮಟ್ಟದಿಂದ ಪಕ್ಷಕ್ಕೆ ವೇದಿಕೆ ಒದಗಿಸಿ ಸಂಘಟಿಸಿ ಮುಂದಿನ ಜಿಲ್ಲಾ ಪಂಚಾಯತು, ತಾಲೂಕು ಪಂಚಾಯತು ಚುನಾವಣೆಯನ್ನು ಎದುರಿಸಲು ಸಿದ್ಧರಾಗೋಣ. ಕೊರೊನಾ ಕಾರಣವಾಗಿ ಈ ಚುನಾವಣೆ ಹಿಂದೆ ಹೋಗಬಹುದೆಂಬ ವಿಶ್ವಾಸ ಬೇಡ. ಯಾಕೆಂದರೆ ಈ ಸರಕಾರ ಕೊರೋನ ಮಹಾಮಾರಿಯನ್ನು ಮುಂದಿಟ್ಟುಕೊಂಡೇ ರಾಜಕೀಯ ಮಾಡುತ್ತಿದೆ" ಎಂದಿದ್ದಾರೆ.
ರಾಜ್ಯ ಸರಕಾರ ಜಿ.ಪಂ, ತಾ.ಪಂ ಕ್ಷೇತ್ರದ ವ್ಯಾಪ್ತಿಯನ್ನುತನಗೆ ಪೂರಕವಾಗುವ ರೀತಿಯಲ್ಲಿ ಬೇಕಾಬಿಟ್ಟಿ ಅವೈಜ್ಞಾನಿಕ ರೀತಿಯಲ್ಲಿ ಬದಲಿಸಿದೆ. ಬಿಜೆಪಿಯವರಿಗೆ ಈಗಾಗಲೇ ಚುನಾವಣೆಯ ದಿನ ಮತ್ತು ಮೀಸಲಾತಿಯ ಪೂರ್ಣ ಮಾಹಿತಿ ದೊರೆತಿದೆ ಎನ್ನುವ ಒಕ್ಕೊರಲ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಮಾಜಿಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ಪಕ್ಷದ ಮುಖಂಡರಾದ ಬಿ.ಹಿರಿಯಣ್ಣ, ನೀರೆ ಕೃಷ್ಣ ಶೆಟ್ಟಿ, ದೇವಕಿ ಸಣ್ಣಯ್ಯ, ಸುಧಾಕರ ಕೋಟ್ಯಾನ್, ಶಬ್ಬೀರ್ ಅಹ್ಮದ್, ಬಿ.ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕೆ.ಅಣ್ಣಯ್ಯ ಶೇರಿಗಾರ್, ಬಿಪಿನ್ ಚಂದ್ರಪಾಲ್, ವೈ.ಸುಕುಮಾರ್ ಪಡುಬಿದ್ರಿ, ಹೆಚ್.ನಿತ್ಯಾನಂದ ಶೆಟ್ಟಿ, ಮುಷ್ತಾಕ್ ಅಹ್ಮದ್, ಭುಜಂಗ ಶೆಟ್ಟಿ, ಉದ್ಯಾವರ ನಾಗೇಶ್ಕುಮಾರ್, ಚಂದ್ರಶೇಖರ್ ಶೆಟ್ಟಿ, ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಸತೀಶ್ ಅಮೀನ್ ಪಡುಕೆರೆ, ದಿನಕರ್ ಹೇರೂರು, ಕಿಶೋರ್ ಕುಮಾರ್ ಎರ್ಮಾಳ್, ಗೀತಾ ವಾಗ್ಳೆ, ಶಶಿಧರ ಶೆಟ್ಟಿ ಎಲ್ಲೂರು, ರೋಶನಿ ಒಲಿವರ್, ಬಾಲಕೃಷ್ಣ ಪೂಜಾರಿ, ಎಂ.ಪಿ.ಮೊಯಿದಿನಬ್ಬ, ದಿಲೀಪ್ ಹೆಗ್ಡೆ, ಕೇಶವ ಕೋಟ್ಯಾನ್, ಡಾ.ಸುನೀತಾ ಶೆಟ್ಟಿ, ಲೂಯೀಸ್ ಲೋಬೋ, ದೀವಾ ನಂಬಿಯಾರ್, ರೇವತಿ ಶೆಟ್ಟಿ, ಉಪೇಂದ್ರ ಗಾಣಿಗ, ಸಂಜೀವ ಜಿ. ಸಾಲ್ಯಾನ್, ರಾಜೇಶ್ ಶೆಟ್ಟಿ ಬ್ರಹ್ಮಾವರ, ಸುಬೋದ್ ಶೆಟ್ಟಿ ಕಾರ್ಕಳ, ಡಾ.ಯಾದವರಾವ್ ಮೊದಲಾದವರು ಉಪಸ್ಥಿತರಿದ್ದರು.